ಪುತ್ತೂರು: ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ದೇವಸ್ಥಾನದ ಕೆಲಸ ಕಾರ್ಯಗಳನ್ನು ತಮಗಿಷ್ಟ ಬಂದಂತೆ ಮಾಡುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರುಗಳ ನಿಯೋಗವು ಜಿಲ್ಲಾಧಿಕಾರಿಯವರಿಗೆ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಿಗೆ ಜೂ.1ರಂದು ಮನವಿ ಸಲ್ಲಿಸಿದರು.
ಶಾಶ್ವತ ಪೂಜೆಯ ಹಣವನ್ನು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ನಗದೀಕರಿಸಿ ಹಣವನ್ನು ದುರುಪಯೋಗ ಮಾಡಿದ್ದು ಈ ಬಗ್ಗೆ ಸೂಕ್ತ ತನಿಖೆಯಾಗಬೇಕು. ದೇವಸ್ಥಾನದಲ್ಲಿ ಪ್ರತಿಷ್ಥಾಪನೆಗೊಳ್ಳುತ್ತಿರುವ ನಾಗನ ಕಟ್ಟೆ ಅವೈಜ್ಞಾನಿಕವಾಗಿ ಮತ್ತು ಸಾರ್ವಜನಿಕ ಸಭೆ ನಡೆಸದೆ, ಇಲಾಖಾ ಅನುಮತಿ ಪಡೆಯದೇ ನಿರ್ಮಿಸಲಾಗುತ್ತಿದೆ ಇದನ್ನು ಧಾರ್ಮಿಕ ಚಿಂತನೆಗಳ ಪ್ರಕಾರ ಸರಿಯಾದ ರೀತಿಯಲ್ಲಿ ಮಾಡಬೇಕು. ಅಲ್ಲದೇ ದೇವಸ್ಥಾನದ ಕಾರ್ಯಗಳಲ್ಲಿ ಏಕ ಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಂಡು ಭಕ್ತರ ಭಾವನೆಗಳಿಗೆ ಬೆಲೆ ನೀಡದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡ ಹಾಗೂ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಅರುಣ್ ಕುಮಾರ್ ಪುತ್ತಿಲ, ಜಯಂತ ನಡುಬೈಲು, ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್ ಮಾಜಿ ಸದಸ್ಯರಾದ ಸುಂದರ ಗೌಡ ನಡುಬೈಲು, ಸೀತರಾಮ ಗೌಡ ನರಿಮೊಗರು, ಮುಂಡೂರು ಹಾಲು ಉ.ಸ.ಸಂಘದ ನಿರ್ದೇಶಕ ಅನಿಲ್ ಕುಮಾರ್ ಕಣ್ಣಾರ್ನೂಜಿ, ಹಿರಿಯರಾದ ಸಂಜೀವ ಪೂಜಾರಿ ದರ್ಖಾಸು, ಮುಂಡೂರು ಗ್ರಾ.ಪಂ ಸದಸ್ಯ ಅಶೋಕ್ ಕುಮಾರ್ ಪುತ್ತಿಲ ಮನವಿ ನೀಡುವ ನಿಯೋಗದಲ್ಲಿದ್ದರು.