ಪುತ್ತೂರು : ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ವತಿಯಿಂದ ನಿವೃತ್ತಿಗೊಂಡ ಪ್ರಾಂಶುಪಾಲರಿಗೆ ಮತ್ತು ಭಡ್ತಿಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ ಹಾಗೂ ಎಸ್ಎಸ್ಎಲ್ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಮತ್ತು ವಿಶಿಷ್ಟ ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಹಾಗೂ ಬಿ.ಎನ್.ಶೇಕ ಟ್ರಸ್ಟ್ ಬೆಂಗಳೂರು ಇವರಿಂದ ದತ್ತಿನಿಧಿ ಪುರಸ್ಕಾರ ಕಾರ್ಯಕ್ರಮ ಮೇ31 ರಂದು ಪಬ್ಲಿಕ್ ಸ್ಕೂಲ್ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು.
ಸನ್ಮಾನ :
ಮೇ.31 ರಂದು ಸೇವಾ ನಿವೃತ್ತಿ ಹೊಂದಿದ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಪ್ರಾಂಶುಪಾಲ ಸೂರ್ಯನಾರಾಯಣ ಬಿ.ವಿ.ದಂಪತಿಯನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಚಿವ ಎಸ್.ಅಂಗಾರ ಹಾಗೂ ಅಣ್ಣಾ ವಿನಯಚಂದ್ರರವರು ಶಾಲು ಹೊದಿಸಿ ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಮುಖ್ಯ ಶಿಕ್ಷಕಿಯರಾಗಿ ಭಡ್ತಿಗೊಂಡ ಶೇಷಮ್ಮ ಕೆ, ಮೀನಾಕ್ಷಿ ಯವರನ್ನು ಶಾಲು ಹೊದಿಸಿ ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಎಸ್ಎಸ್ಎಲ್ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸಾತ್ವಿಕ್ ಎಚ್.ಎಸ್., ರಾಜ್ಯಕ್ಕೆ ೪ನೇ ಸ್ಥಾನ ಪಡೆದ ಚಂದನಲಕ್ಷ್ಮೀ, ಕನ್ನಡ ಮಾದ್ಯಮ ಶಾಲೆಯ ಪ್ರಥಮ ಸ್ಥಾನ ಪಡೆದ ಕಾವ್ಯಶ್ರೀಯವರನ್ನು ಫಲಪುಷ್ಪ, ಸ್ಮರಣಿಕೆ ನೀಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ ಸನ್ಮಾನಿಸಿದರು. ಸಚಿವ ಎಸ್.ಅಂಗಾರರನ್ನು ಕೆ.ಪಿ.ಎಸ್.ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ವತಿಯಿಂದ ಅಣ್ಣಾ ವಿನಯಚಂದ್ರರವರು ಸನ್ಮಾನಿಸಿದರು.
ಪ್ರದೀಪ್ ಕುಮಾರ್ ರೈ ಪನ್ನೆರವರು ಬಿ.ಎನ್.ಶೇಕ ಟ್ರಸ್ಟ್ ಬೆಂಗಳೂರು ಇವರ ದತ್ತಿನಿಧಿ ಪುರಸ್ಕಾರ ನೆರವೇರಿಸಿದರು. ಪುತ್ತೂರಿನ ವಿಶ್ರಾಂತ ಸಹಾಯಕ ಶಿಕ್ಷಣಾಧಿಕಾರಿ ಎಸ್.ಜಿ.ಕೃಷ್ಣರವರು ಅಭಿನಂದನಾ ಭಾಷಣ ಮಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ ಎಸ್.ಪಿ.ಶುಭಾಶಂಸನೆ ಮಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸುಧಾಕರ್ ಕೆ.ಅಭಿನಂದನಾ ಮಾತನಾಡಿದರು. ವೇದಿಕೆಯಲ್ಲಿ ಕೆ.ಪಿ.ಎಸ್.ನ ಉಪಾಧ್ಯಕ್ಷ ಶ್ರೀನಾಥ್ ಬಾಳಿಲ, ಮುಖ್ಯ ಶಿಕ್ಷಕ ಮಾಯಿಲಪ್ಪ ಉಪಸ್ಥಿತರಿದ್ದರು.
ಉಪಪ್ರಾಂಶುಪಾಲೆ ಉಮಾ ಕುಮಾರಿ ಸ್ವಾಗತಿಸಿ, ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕ ರಾಮಚಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು.