ಪುತ್ತೂರು:ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪುತ್ತೂರು ಇದರ ಆಡಳಿತ ಮಂಡಳಿ 5 ವರ್ಷದ ಆಡಳಿತಾವಧಿ ಪೂರ್ಣಗೊಂಡ ಕೊನೆಯ ಸಭೆಯಲ್ಲಿಯೂ ರೂ.60 ಲಕ್ಷ ವೆಚ್ಚದಲ್ಲಿ 16 ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಕಳೆದ ಸಭೆಯಲ್ಲಿ ನಡೆಸಲಾದ ಕ್ರಿಯಾಯೋಜನೆಗೆ ಅನುಮೋದನೆ ನೀಡಿ ನಿರ್ಣಯ ದೃಢೀಕರಿಸಲಾಗಿದೆ.ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಅವರ ಅಧ್ಯಕ್ಷತೆಯಲ್ಲಿ ಜೂ.6ರಂದು ಎಪಿಎಂಸಿ ಸಭೆ ನಡೆಯಿತು.ಸಭೆಗೆ ಆಗಮಿಸಿದ ಶಾಸಕ ಸಂಜೀವ ಮಠಂದೂರು ಅವರು ಎಪಿಎಂಸಿಯ ಪ್ರಸ್ತುತ ಆಡಳಿತಾವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳಿಗಾಗಿ ಸಮಿತಿಯನ್ನು ಅಭಿನಂದಿಸಿದರು.
ಕಳೆದ ಸಾಮಾನ್ಯ ಸಭೆಯ ನಡಾವಳಿಯನ್ನು ಓದಿ ದೃಢೀಕರಿಸುವ ಸಂದರ್ಭ, ಹಿಂದಿನ ಸಭೆಯಲ್ಲಿ ಗ್ರಾಮೀಣ ರಸ್ತೆಯ ಅಭಿವೃದ್ಧಿಗೆ ರೂ.60 ಲಕ್ಷದ ಕ್ರಿಯಾಯೋಜನೆ ತಯಾರಿಸಲಾಗಿದ್ದು, ಅದನ್ನು ದೃಢೀಕರಣ ಮಾಡುವ ಕುರಿತು ಕಾರ್ಯದರ್ಶಿ ರಾಮಚಂದ್ರ ಅವರು ಮಂಡಿಸಿದರು.ಅಧ್ಯಕ್ಷ ದಿನೇಶ್ ಮೆದು, ಉಪಾಧ್ಯಕ್ಷ ಮಂಜುನಾಥ್ ಎನ್.ಎಸ್ ಮತ್ತು ಸದಸ್ಯರು ಕ್ರಿಯಾಯೋಜನೆಯ ದೃಢೀಕರಣ ಮಾಡಿ ನಿರ್ಣಯ ಮಾಡಿದರು.ಇದೇ ಸಂದರ್ಭದಲ್ಲಿ ಸಭೆಗೆ ಆಗಮಿಸಿದ ಶಾಸಕರು ಕೂಡಾ ಎಪಿಎಂಸಿ ಆಡಳಿತ ಸಮಿತಿಯನ್ನು ಅಭಿನಂದಿಸಿದರು.
ಉಪಾಧ್ಯಕ್ಷ ಮಂಜುನಾಥ ಎನ್.ಎಸ್.,ಕಾರ್ಯದರ್ಶಿ ರಾಮಚಂದ್ರ ಸ್ವಾಗತಿಸಿ,ವಂದಿಸಿದರು. ಜನಸ್ನೇಹಿ, ರೈತ ಸ್ನೇಹಿಯಾದ ಆಡಳಿತ ಮೂಡಿ ಬಂದಿದೆ: ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಎಪಿಎಂಸಿ ಜನಸ್ನೇಹಿ ಮತ್ತು ರೈತ ಸ್ನೇಹಿಯಾಗಿ ಮೂಡಿ ಬಂದಿದೆ.ಅದೇ ರೀತಿ ಮುಂದೆ ಆಡಳಿತ ಅವಧಿ ಮುಗಿದ ಸದಸ್ಯರ ಸೇವೆ ಸಮಾಜ ಮತ್ತು ಸಂಘಟನೆಯಲ್ಲಿ ಸಕ್ರಿಯವಿರಲಿ ಎಂದರು.ಎಪಿಎಂಸಿ ಆರಂಭದಿಂದಲೂ ರೈಲ್ವೇ ಅಂಡರ್ ಪಾಸ್ ಯೋಜನೆಗೆ ಬಹಳಷ್ಟು ಬೇಡಿಕೆ ಇತ್ತು.ಆದರೆ ಅದು ಬಹಳ ಕಷ್ಟದ ಕೆಲಸ ಆಗಿತ್ತು.ಸಂಸದರಾದ ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್, ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವಿ ಅವರ ಸಹಕಾರದಿಂದ ರೂ.೧೦ ಕೋಟಿಯ ರೈಲ್ವೇ ಅಂಡರ್ ಪಾಸ್ ಯೋಜನೆಗೆ ಸಹಕಾರ ಸಿಕ್ಕಿದೆ.ಇದರ ಹಿಂದೆ ಬೆಂಬಿಡದೆ ಹೋದ ಕಾರಣ ಯೋಜನೆ ಸಿಕ್ಕಿದೆ.ಆರಂಭದಲ್ಲಿ ಬೂಡಿಯಾರ್ ರಾಧಾಕೃಷ್ಣ ರೈ, ಬಳಿಕ ದಿನೇಶ್ ಮೆದು ಅವರೊಂದಿಗೆ ಬಾಲಕೃಷ್ಣ ಬಾಣಜಾಲು ಅವರ ಪ್ರಯತ್ನ ಸಫಲತೆ ಕಂಡಿದೆ ಎಂದು ಸಂಜೀವ ಮಠಂದೂರು ಹೇಳಿದರು.
ಕಪ್ಪು ಚುಕ್ಕೆ ಬಾರದ ರೀತಿಯಲ್ಲಿ ಆಡಳಿತ: ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಅವರು ಮಾತನಾಡಿ ಯೋಜನೆಗಳು ಪೂರ್ಣ, ಕೆಲವು ಕ್ರಿಯಾಯೋಜನೆ ಬಾಕಿ,ರೂ.7 ಕೋಟಿಯ ಅನುದಾನಕ್ಕೆ ಎಲ್ಲಾ ಸಿದ್ಧತೆ ನಡೆದಿದೆ.ಅದು ಖಂಡಿತಾ ಬರಲಿದೆ. ಈ ನಡುವೆಯೂ ಬಹು ಬೇಡಿಕೆಯ ರೈಲ್ವೇ ಅಂಡರ್ ಪಾಸ್ ಯೋಜನೆ ನಮ್ಮ ಅವಧಿಯಲ್ಲಿ ಆಗಿರುವುದು ಸಂತೋಷ ತಂದಿದೆ.ಒಟ್ಟಿನಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಬಾರದ ರೀತಿಯಲ್ಲಿ ಆಡಳಿತ ಮಾಡಿzವೆ ಎಂದರು.ಚುನಾವಣೆ ಸಂದರ್ಭ ಕೃಷಿಕರ ಕೋವಿ ಡೆಪೋಸಿಟ್ ಮಾಡುವುದಕ್ಕೆ ವಿನಾಯಿತಿ ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿ ನ್ಯಾಯಾಲಯದ ತೀರ್ಪು ಬಾಕಿ ಇದೆ ಎಂದವರು ಹೇಳಿದರು.ಆಡಳಿತ ಸಮಿತಿ ಸದಸ್ಯರನ್ನು ಅಧ್ಯಕ್ಷರು ಶಾಲು, ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಪ್ರಾರಂಭಿಸಿದ ಕೆಲಸ ಪರಿಪೂರ್ಣ ಆಗಿದೆ: ಎಪಿಎಂಸಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಬೂಡಿಯಾರ್ ರಾಧಾಕೃಷ್ಣ ರೈ, ಮಾಜಿ ಉಪಾಧ್ಯಕ್ಷರಾಗಿರುವ ಹಾಲಿ ಸದಸ್ಯ ಬಾಲಕೃಷ್ಣ ಬಾಣಜಾಲು, ಉಪಾಧ್ಯಕ್ಷ ಮಂಜುನಾಥ್ ಎನ್.ಎಸ್ ಅವರು ಮಾತನಾಡಿ ಒಟ್ಟು ಆಡಳಿತ ಅವಧಿ ನಮಗೆ ಆತ್ಮತೃಪ್ತಿ ನೀಡಿದೆ.ಪ್ರಾರಂಭಿಸಿದ ಕೆಲಸ ಪರಿಪೂರ್ಣ ಆಗಿದೆ.ಪಕ್ಷ ಭೇದ ಮಾಡದೆ ವರ್ತಕರ ಬೇಡಿಕೆಯನ್ನೂ ಈಡೇರಿಸಲಾಗಿದೆ ಎಂದರು. ಸದಸ್ಯರಾದ ಪುಲಸ್ತ್ಯಾ ರೈ, ತ್ರಿವೇಣಿ ಪೆರ್ವೋಡಿ, ಬೂಡಿಯಾರು ರಾಧಾಕೃಷ್ಣ ರೈ, ಅಬ್ದುಲ್ ಶಕೂರು ಹಾಜಿ, ಬಾಲಕೃಷ್ಣ ಬಾಣಜಾಲು, ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು, ಮೇದಪ್ಪ ಗೌಡ, ತೀರ್ಥಾನಂದ ದುಗ್ಗಲ, ಕೊರಗಪ್ಪ, ನಾಮನಿರ್ದೇಶಿತ ಸದಸ್ಯರಾದ ಮೋಹನಾಂಗಿ, ಬಾಬು, ಬಾಲಕೃಷ್ಣ ಜೋಯಿಷರವರು ಉತ್ತಮ ಆಡಳಿತ ನಿರ್ವಹಿಸಿದ್ದಾರೆಂದು ಅಧ್ಯಕ್ಷರನ್ನು ಅಭಿನಂದಿಸಿದರು.ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರ ಅವರು ಆಡಳಿತ ಸಮಿತಿಯ ಕೆಲಸದ ಬಗ್ಗೆ ತೃಪ್ತಿ ಇದೆ ಎಂದು ಹೇಳಿದರು.
ಎಪಿಎಂಸಿ 5 ವರ್ಷದ ಆಡಳಿತ ಕೊನೆ
ಎಪಿಎಂಸಿ ಆಡಳಿತ ಮಂಡಳಿಯ ತಲಾ 20 ತಿಂಗಳ ಆಡಳಿತದ ಮೂರು ಅವಧಿ ಸೇರಿ ೫ ವರ್ಷದ ಆಡಳಿತಾವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಕೊನೆಯ ಸಾಮಾನ್ಯ ಸಭೆ ಜೂ.೬ರಂದು ನಡೆಯಿತು.ಎಪಿಎಂಸಿ ಪ್ರಥಮ ೨೦ ತಿಂಗಳ ಆಡಳಿತ ಅವಧಿಯಲ್ಲಿ ಅಧ್ಯಕ್ಷರಾಗಿ ಬೂಡಿಯಾರ್ ರಾಧಾಕೃಷ್ಣ ರೈ, ಉಪಾಧ್ಯಕ್ಷರಾಗಿ ಬಾಲಕೃಷ್ಣ ಬಾಣಜಾಲು ಅವಿರೋಧವಾಗಿ ಆಯ್ಕೆಗೊಂಡಿದ್ದರು. ಅವರ ಬಳಿಕದ ೨೦ ತಿಂಗಳ ಅವಧಿಗೆ ಅಧ್ಯಕ್ಷರಾಗಿ ದಿನೇಶ್ ಮೆದು ಮತ್ತು ಉಪಾಧ್ಯಕ್ಷರಾಗಿ ಎನ್.ಎಸ್ ಮಂಜುನಾಥ ಅವರು ಆಯ್ಕೆಗೊಂಡಿದ್ದರು.ಮೂರನೇ ಅವಧಿಯಲ್ಲೂ ಅಧ್ಯಕ್ಷರಾಗಿ ದಿನೇಶ್ ಮೆದು ಮತ್ತು ಉಪಾಧ್ಯಕ್ಷರಾಗಿ ಎನ್.ಎಸ್ ಮಂಜುನಾಥ್ ಅವರು ಪುನರ್ ಆಯ್ಕೆಗೊಂಡಿದ್ದು ಇದೀಗ ಒಟ್ಟು ಆಡಳಿತ ಅವಧಿ ಪೂರ್ಣಗೊಂಡಿದೆ.11 ಕೃಷಿಕ ಕ್ಷೇತ್ರ, 1 ಸಹಕಾರಿ ಹಾಗೂ 1 ವರ್ತಕ ಕ್ಷೇತ್ರವನ್ನು ಹೊಂದಿರುವ ಪುತ್ತೂರು ಎಪಿಎಂಸಿಯ ಒಟ್ಟು 13ಸ್ಥಾನಗಳ ನೂತನ ನಿರ್ದೇಶಕರ ಆಯ್ಕೆಗೆ 2017 ರ ಏ.25ರಂದು ಚುನಾವಣೆ ನಡೆದಿತ್ತು.13 ಸ್ಥಾನಗಳಲ್ಲಿ 10 ಕೃಷಿಕ ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಉಪ್ಪಿನಂಗಡಿ ಕ್ಷೇತ್ರದಿಂದ ಕುಶಾಲಪ್ಪ ಗೌಡ ಅನಿಲ, ನೆಲ್ಯಾಡಿ ಕ್ಷೇತ್ರದಿಂದ ಬಾಲಕೃಷ್ಣ ಬಾಣಜಾಲು, ಮರ್ದಾಳ ಕ್ಷೇತ್ರದಿಂದ ಮೇದಪ್ಪ ಗೌಡ, ಕಡಬ ಕ್ಷೇತ್ರದಿಂದ ಪುಲಸ್ತ್ಯ ರೈ, ಆಲಂಕಾರು ಕ್ಷೇತ್ರದಿಂದ ಕೊರಗು, ಸವಣೂರು ಕ್ಷೇತ್ರದಿಂದ ದಿನೇಶ್ ಮೆದು, ಪುತ್ತೂರು ಕ್ಷೇತ್ರದಿಂದ ರಾಧಾಕೃಷ್ಣ ರೈ ಬೂಡಿಯಾರ್, ಕುಂಬ್ರ ಕ್ಷೇತ್ರದಿಂದ ಮಂಜುನಾಥ ಎನ್.ಎಸ್, ನರಿಮೊಗರು ಕ್ಷೇತ್ರದಿಂದ ತ್ರಿವೇಣಿ ಕರುಣಾಕರ ಪೆರ್ವೋಡಿ, ನೆಟ್ಟಣಿಗೆ ಮುಡ್ನೂರು ಕ್ಷೇತ್ರದಿಂದ ತೀರ್ಥಾನಂದ ದುಗ್ಗಳ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಕೋಡಿಂಬಾಡಿ ಕೃಷಿಕ ಕ್ಷೇತ್ರದಿಂದ ಕಾರ್ತಿಕ್ ರೈ ಬೆಳ್ಳಿಪ್ಪಾಡಿ ಮತ್ತು ವರ್ತಕ ಕ್ಷೇತ್ರದಿಂದ ಅಬ್ದುಲ್ ಶಕೂರ್ರವರು ಗೆಲುವು ಸಾಧಿಸಿದ್ದರು.ಸಹಕಾರಿ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಕೃಷ್ಣಕುಮಾರ್ ರೈಯವರು ಅವಿರೋಧವಾಗಿ ಆಯ್ಕೆಗೊಂಡಿದ್ದರು.ಈ ನಡುವೆ ಆರಂಭದ ಅವಧಿಯಲ್ಲಿ ನಾಮನಿರ್ದೇಶಿತ ಸದಸ್ಯರಾಗಿ ಶಶಿಕಿರಣ್ ರೈ, ರಾಮಕೃಷ್ಣ ಕೊಂಬಾರು, ಗೀತಾದಾಸರಮೂಲೆ ಆಯ್ಕೆಯಾಗಿದ್ದರು.ಬಳಿಕ ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದಾಗ ನಾಮನಿರ್ದೇಶಿತ ಸದಸ್ಯರ ಬದಲಾವಣೆಯಾಗಿ ಮೋಹನಾಂಗಿ, ಬಾಬು, ಬಾಲಕೃಷ್ಣ ಜೋಯಿಷ ಅವರು ಆಯ್ಕೆಗೊಂಡಿದ್ದರು.ಇದೀಗ ಒಟ್ಟು ೫ ವರ್ಷಗಳ ಆಡಳಿತಾವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಶೀಘ್ರ ನೂತನ ಆಡಳಿತ ಮಂಡಳಿ ರಚನೆಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ.