ನೆಲ್ಯಾಡಿ: ಸೊಪ್ಪು ಕಡಿಯುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದು ಗಾಯಗೊಂಡಿದ್ದ ಶಿರಾಡಿ ನಿವಾಸಿಯೋರ್ವರು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕಡಬ ತಾಲೂಕು ಶಿರಾಡಿ ಗ್ರಾಮದ ಶಿರ್ವತ್ತಡ್ಕ ನಿವಾಸಿ ದೇವಸ್ಯ(58ವ.)ಮೃತಪಟ್ಟವರಾಗಿದ್ದಾರೆ. ದೇವಸ್ಯರವರು ಸುಮಾರು ಎಂಟು ವರ್ಷಗಳಿಂದ ಬೆಳ್ತಂಗಡಿ ತಾಲೂಕಿನ ವೇಣೂರು ಎಂಬಲ್ಲಿ ಮ್ಯಾಥ್ಯು ಎಂಬವರ ತೋಟದ ಮೇಲ್ವಿಚಾರಕನಾಗಿ ಕೆಲಸ ಮಾಡಿಕೊಂಡಿದ್ದರು. ಕೆಲ ದಿನದ ಹಿಂದೆ ಶಿರ್ವತ್ತಡ್ಕದ ಮನೆಗೆ ಬಂದಿದ್ದ ಅವರು ಜೂ.3ರಂದು ಬೆಳಿಗ್ಗೆ ಮನೆಯಲ್ಲಿ ತೆಂಗಿನ ಬುಡಕ್ಕೆ ಸೊಪ್ಪು ಹಾಕುವುದಕೋಸ್ಕರ ಮರ ಹತ್ತಿ ಸೊಪ್ಪು ಕಡಿಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಕ್ಕೆ ಬಿದ್ದು ಸಣ್ಣಪುಟ್ಟ ಗಾಯಗೊಂಡಿದ್ದರು. ಈ ವೇಳೆ ಯಾವುದೇ ಚಿಕಿತ್ಸೆಯನ್ನು ಮಾಡಿರುವುದಿಲ್ಲ. ಆದರೆ ಜೂ.5ರಂದು ಬೆಳಿಗ್ಗೆ ಅವರಿಗೆ ನೋವು ಕಾಣಿಸಿಕೊಂಡಿದ್ದು ಚಿಕಿತ್ಸೆಗಾಗಿ ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಹೋಗಿದ್ದು ಅಲ್ಲಿ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿದ್ದರು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಅದೇ ದಿನ ಸಂಜೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಮೃತರ ಪುತ್ರ ಓಲ್ವಿನ್ರವರು ನೀಡಿರುವ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.