![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
- ಕೊಂಬೆಟ್ಟು ಅಟಲ್ ಉದ್ಯಾನದ ಬಳಿ ನಡೆದ ಘಟನೆ
- ಪೊಲೀಸರ ವಿಚಾರಣೆ ವೇಳೆ ಬಾಯಿ ಬಿಡದ ಗದಗ ಮೂಲದ ವ್ಯಕ್ತಿ ಆಸ್ಪತ್ರೆಗೆ ದಾಖಲು
ಪುತ್ತೂರು:ಹೊಟ್ಟೆಗೆ ಕೆಂಪು ಬಣ್ಣದ ಬಟ್ಟೆಯನ್ನು ಸುತ್ತಿ, ರಕ್ತ ಸುರಿದು ಗಂಭೀರ ಸ್ಥಿತಿಯಲ್ಲಿರುವ ರೀತಿ ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿರುವ ನಾಟಕ ಮಾಡಿದ ಮತ್ತು ಇದನ್ನು ಅರಿಯದ ಸಾರ್ವಜನಿಕರು ನೀಡಿದ ಮಾಹಿತಿಯಾಧರಿಸಿ ಪೊಲೀಸರು ಆತನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದ ವಿಚಿತ್ರ ಘಟನೆ ಜೂ.8ರಂದು ಪುತ್ತೂರು ಕೊಂಬೆಟ್ಟಿನ ಅಟಲ್ ಉದ್ಯಾನದ ಬಳಿ ನಡೆದಿದೆ.
ಗದಗ ಮೂಲದ ವ್ಯಕ್ತಿ ಹೊಟ್ಟೆಗೆ ಬಿಗಿಯಾಗಿ ಬಟ್ಟೆ ಸುತ್ತಿ ಅದಕ್ಕೆ ರಕ್ತದ ಬಣ್ಣ ಹೋಲುವಂತೆ ಪೈಂಟ್ ಸುರಿದು ಅಲ್ಲಿ ಬಿದ್ದು ಕೊಂಡಿದ್ದ.ಹೊಟ್ಟೆಯ ಭಾಗದಿಂದ ರಕ್ತ ಸುರಿಯುತ್ತಿರುವಂತೆ ಭಾಸವಾಗುತ್ತಿದ್ದುದನ್ನು ಸಾರ್ವಜನಿಕರು ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು.ಪೊಲೀಸರು ಸ್ಥಳಕ್ಕೆ ಆಗಮಿಸಿ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದಾಗ ಆತ ಹೊರಳಾಡಿದುದರಿಂದ ಆತನ ಹೊಟ್ಟೆ ಮತ್ತು ಕೈಗೆ ಸುತ್ತಿದ ಬಿಳಿ ಬಟ್ಟೆ ಜಾರಿತ್ತು.ಅಲ್ಲಿ ಯಾವುದೇ ಗಾಯಗಳಿಲ್ಲದಿರುವುದು ಕಂಡು ಆಶ್ಚರ್ಯಚಕಿತರಾದ ಪೊಲೀಸರು ವಿಚಾರಿಸಿದಾಗ ಆತ ಬಾಯಿ ಬಿಡಲಿಲ್ಲ.ಬಳಿಕ ಆತನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಆತನ ಕೈಯಲ್ಲಿ ಅಚ್ಚು ಹಾಕಿಸಿಕೊಂಡಿದ್ದು, ಒಂದು ಕೈಯಲ್ಲಿ ‘ಆಶ್ರಿತಾ’, ಇನ್ನೊಂದು ಕೈಯಲ್ಲಿ ‘ಭೀಮ’ ಎಂದು ಬರೆಯಲಾಗಿತ್ತು.ಸದ್ಯ ಈತನನ್ನು ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.