ಪುತ್ತೂರು: ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಧ್ವಜಸ್ತಂಭ ಮತ್ತು ಬ್ರಹ್ಮರಥದ ಪುನರ್ ನಿರ್ಮಾಣ ಕಾರ್ಯ ನಡೆಯಲಿರುವ ಹಿನ್ನೆಲೆಯಲ್ಲಿ ಎಂಟು ಮಂದಿ ಸದಸ್ಯರನ್ನೊಳಗೊಂಡ ನೂತನ ಅಭಿವೃದ್ಧಿ ಸಮಿತಿಯನ್ನು ರಚಿಸಲಾಗಿದ್ದು ಈ ಸಮಿತಿಗೆ ಧಾರ್ಮಿಕ ದತ್ತಿ ಇಲಾಖೆಯು ಮಂಜೂರಾತಿ ನೀಡಿದೆ.
ಅಧ್ಯಕ್ಷರಾಗಿ ಬೆಂಗಳೂರಿನ ಸೌಂದರ್ಯ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಸೌಂದರ್ಯ ಮಂಜಪ್ಪ ಪಿ., ಉಪಾಧ್ಯಕ್ಷರಾಗಿ ರಾಮ ಜೋಯಿಷ, ಪ್ರಧಾನ ಕಾರ್ಯದರ್ಶಿಯಾಗಿ ಮನೋಹರ ಕೊಳಕ್ಕಿಮಾರ್, ಕಾರ್ಯದರ್ಶಿಯಾಗಿ ಮಹಾಬಲ ಗಡಿಮಾರ್, ಕೋಶಾಧಿಕಾರಿಯಾಗಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜನಾರ್ದನ ಕೆ. ಎರ್ಕಡಿತ್ತಾಯ, ಸದಸ್ಯರಾಗಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುಧೀರ್ ಪ್ರಸಾದ್ ಆನಾಜೆ., ಗಿರಿಧರ ಗೋಮುಖ, ಲೀಲಾವತಿ ಹಿರ್ಕುಡೆಲುರವರನ್ನು ಆಯ್ಕೆಮಾಡಲಾಗಿದೆ.
ಈ ದೇವಾಲಯವು ಸಿ. ವರ್ಗಕ್ಕೆ ಸೇರಿದ್ದು ಇಲ್ಲಿ ಧ್ವಜಸ್ತಂಭ ಮತ್ತು ಬ್ರಹ್ಮರಥದ ಪುನರ್ ನಿರ್ಮಾಣ ಕಾರ್ಯದ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಕೆಲಸ ಕಾರ್ಯಗಳು ನಡೆಯಲಿದೆ.
ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗಳನ್ನು ನಡೆಸುವ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸಿರುವ ಸಮಿತಿಯನ್ನು ನಿಬಂಧನೆಗಳಿಗೆ ಒಳಪಡಿಸಿ ಆದೇಶದ ದಿನಾಂಕದಿಂದ ಮುಂದಿನ ಮೂರು ವರ್ಷಗಳ ಅವಧಿಗೆ ರಚಿಸಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರು ಆದೇಶಿಸಿದ್ದಾರೆ.