ಆಲಂಕಾರು:ಪೆರಾಬೆ ಗ್ರಾಮದ ಪೂಂಜ ಬರೆಮೇಲು ಎಂಬಲ್ಲಿ ಧರೆಯೊಂದು ಕುಸಿದು ಸಾರ್ವಜನಿಕ ರಸ್ತೆ ಕುಸಿಯುವ ಹಂತದಲ್ಲಿದ್ದು ಅತಂಕದ ಸ್ಥಿತಿ ನಿರ್ಮಾಣವಾಗಿದೆ.ಈ ರಸ್ತೆಯು ಪೂಂಜ ದಿಂದ ಕುಂತೂರು, ಕೋಚಕಟ್ಟೆಗೆ ಸಂಪರ್ಕಿಸುವ ರಸ್ತೆಯಾಗಿದ್ದು ಇದೇ ರಸ್ತೆಯನ್ನು ನಂಬಿದ ಕುಟುಂಬಗಳು ಅತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ.
ಮನವಿ ನೀಡಿದರೂ ಪ್ರಯೋಜನವಾಗಿಲ್ಲ-ಅನಿತಾ : ಈ ರಸ್ತೆಯ ಬದಿಯಲ್ಲಿ ಕಿರಿದಾದ ಹೊಳೆ ಹರಿಯುತ್ತಿದ್ದು ಅಂದಾಜು 50 ಅಡಿಯಷ್ಟು ಎತ್ತರದಲ್ಲಿ ಈ ರಸ್ತೆ ಇದ್ದು ವರ್ಷಂಪ್ರತಿ ಧರೆ ಕುಸಿಯುತ್ತಿದ್ದು ಅಂದಾಜು 15 ಸೆಂಟ್ಸ್ಗಳಷ್ಟು ಜಾಗ ಧರೆ ಕುಸಿತದಿಂದ ನಾವು ಭೂಮಿಯನ್ನು ಕಳೆದುಕೊಂಡಿವೆ ಹಾಗು ಇದೇ ರಸ್ತೆಯನ್ನು ನಾವು ಅವಲಂಬಿಸಿವೆ.ಜನಪ್ರತಿನಿಧಿಗಳಿಗೆ,ಪಂಚಾಯತ್ಗೆ ಈ ಬಗ್ಗೆ ಮನವಿ ನೀಡಿವೆ.ಆದರೆ ಏನೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರಾದ ಅನಿತಾರವರು ತಿಳಿಸಿದ್ದಾರೆ.
ತಡೆಗೋಡೆ ನಿರ್ಮಿಸಿ-ಸುಧೀರ್ ರೈ: ಈ ರಸ್ತೆಯನ್ನೇ ನಾವು ಅವಲಂಬಿತರಾಗಿವೆ.ಇದು 10 ಮನೆಗಳಿಗೆ ಸಂಪರ್ಕಿಸುವ ರಸ್ತೆಯಾಗಿದೆ. ಈ ಬಗ್ಗೆ 2013ರ ಜುಲೈ 4ರಂದು ಜಾಗೃತಿಯ ವರದಿ ಪ್ರಕಟಗೊಂಡಿತ್ತು.ಆದರೆ ಇಲ್ಲಿಯ ತನಕ ಜನಪ್ರತಿನಿಧಿಗಳು ಹಾಗು ಪಂಚಾಯತ್ನವರು ಬಂದು ನೋಡುವುದು ಹೊರತು ಬೇರೆ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ.ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಗಮನ ಹರಿಸಿ ರಸ್ತೆಯ ಬದಿಗೆ ತಡೆಗೋಡೆ ನಿರ್ಮಾಣ ಮಾಡುವಂತೆ ಸ್ಥಳೀಯರಾದ ಸುಧೀರ್ ರೈ ಮನವಳಿಕೆ ತಿಳಿಸಿದ್ದಾರೆ.
ಇಲಾಖೆಗೆ ಬರೆಯಲಾಗಿದೆ- ಗ್ರಾ.ಪಂ.ಅಧ್ಯಕ್ಷ ಮೋಹನದಾಸ ರೈ:ಪೂಂಜ ಹಾಗು ಕುಂತೂರು ಸಂಪರ್ಕಿಸುವ ರಸ್ತೆ ಇದಾಗಿದ್ದು ಧರೆ ಕುಸಿತದ ಜಾಗಕ್ಕೆ ಪಂಚಾಯತ್ ವತಿಯಿಂದ ಭೇಟಿ ನೀಡಿವೆ.ಇದು ಅಂದಾಜು 50 ಅಡಿಯಿಂದ ತಡೆಗೋಡೆಯನ್ನು ನಿರ್ಮಾಣ ಮಾಡಬೇಕು.ಇದಕ್ಕೆ 50 ಲಕ್ಷದಿಂದ ಒಂದು ಕೋಟಿಯಷ್ಟು ಅನುದಾನ ತಡೆಗೋಡೆಗೆ ಬೇಕು.ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಬರೆಯಲಾಗಿದೆ ಎಂದು ಪೆರಾಬೆ ಗ್ರಾ.ಪಂ ಅಧ್ಯಕ್ಷ ಮೋಹನದಾಸ ರೈ ಪರಾರಿಗುತ್ತು ತಿಳಿಸಿದ್ದಾರೆ.