`ಅಡಿಕೆ ಕೃಷಿಕರ ಸಮಸ್ಯೆಗಳಿಗೆ ಸ್ಪಂದಿಸಿ ಮಾರುಕಟ್ಟೆ ನೀತಿ ಬದಲಾವಣೆಗೊಳಿಸಿ’ ಕೇಂದ್ರ ಹಣಕಾಸು, ಕೃಷಿ, ವಾಣಿಜ್ಯ ಸಚಿವರಿಗೆ ಕ್ಯಾಂಪ್ಕೋ, ಗೃಹ ಸಚಿವರ ನಿಯೋಗ ಮನವಿ

0

 

  • ಕಾರ್ಬನ್ ಫೈಬರ್ ದೋಟಿ ಮೇಲಿನ ಆಮದು ಸುಂಕಕಡಿಮೆ ಮಾಡಿ
  • ಅಡಿಕೆ ಮೇಲಿನ ಜಿಎಸ್‌ಟಿ ಕಡಿತಗೊಳಿಸಿ
  • ಉತ್ಪಾದನಾ ವೆಚ್ಚಕ್ಕನುಗುಣವಾಗಿ ಅಡಿಕೆ ಆಮದು ದರ ಹೆಚ್ಚಿಸಿ

ಪುತ್ತೂರು: ಅಡಿಕೆ ಬೆಳೆಗಾರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ರಾಜ್ಯ ಗೃಹ ಸಚಿವರು ಮತ್ತು ಕ್ಯಾಂಪ್ಕೋ ಅಧ್ಯಕ್ಷರ ನೇತೃತ್ವದ ನಿಯೋಗವೊಂದು ಕೇಂದ್ರ ಹಣಕಾಸು, ಕೃಷಿ ಹಾಗೂ ವಾಣಿಜ್ಯ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿ, ಸಮಸ್ಯೆಗೆ ಸ್ಪಂದಿಸುವಂತೆ ಮನವಿ ಮಾಡಿದೆ.ಅಡಿಕೆ ಕೃಷಿಕರ ಸಮಸ್ಯೆಗಳು ಮತ್ತು ಮಾರುಕಟ್ಟೆ ವಿಷಯಗಳಲ್ಲಿ ಸರಕಾರದ ನೀತಿಗಳಲ್ಲಿ ಆಗಬೇಕಾದ ಬದಲಾವಣೆಗಳ ಕುರಿತು ಸಚಿವರುಗಳಿಗೆ ನಿಯೋಗ ಮನವಿ ಮಾಡಿದ್ದು ಸಚಿವರಿಂದ ಸಕಾರಾತ್ಮಕ ಸ್ಪಂದನೆ ದೊರೆತಿರುವುದಾಗಿ ಕ್ಯಾಂಪ್ಕೋ ಪ್ರಕಟಣೆ ತಿಳಿಸಿದೆ.
ರಾಜ್ಯ ಅಡಿಕೆ ಬೆಳೆಗಾರರ ಕಾರ್ಯಪಡೆಯ ಅಧ್ಯಕ್ಷರೂ ಆಗಿರುವ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ಕೇಂದ್ರ ಕೃಷಿ ಖಾತೆಯ ಸಹಾಯಕ ಸಚಿವರಾಗಿರುವ ಶೋಭಾ ಕರಂದ್ಲಾಜೆ, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿಯವರನ್ನೊಳಗೊಂಡ ನಿಯೋಗ ಸಚಿವರುಗಳನ್ನು ಭೇಟಿ ಮಾಡಿ ಚರ್ಚಿಸಿದೆ.
ಕಾರ್ಬನ್ ಫೈಬರ್ ದೋಟಿ ಮೇಲಿನ ಆಮದು ಸುಂಕ ಕಡಿಮೆ ಮಾಡಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ ನಿಯೋಗ, ಹಲವು ಬೆಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದೆ. CIB/FCO 1985 ಪರವಾನಿಗೆಗಳ ಅಡಿಯಲ್ಲಿ ತಯಾರಿಸಲ್ಪಡುವ ಕಾಪರ್ ಸಲ್ಫೇಟ್ ಮೇಲೆ 5ಶೇ.ಜಿಎಸ್‌ಟಿ ವಿಧಿಸುವುದು, ರೈತರಿಗೆ ಅನುಕೂಲವಾಗುವಂತೆ ಕಾರ್ಬನ್ ಫೈಬರ್ ದೋಟಿ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡುವುದು ಮತ್ತು ಅಡಿಕೆಯ ಮೇಲಿನ ಜಿಎಸ್‌ಟಿ ಕಡಿಮೆ ಮಾಡುವಂತೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಸಲ್ಲಿಸಲಾಯಿತು.
ಅಡಿಕೆ ತೇವಾಂಶದ ಗರಿಷ್ಠ ಮಿತಿ ಶೇ.11ಕ್ಕೇರಿಸಿ: ನಿಯೋಗವು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮಾರ್ ಅವರನ್ನು ಭೇಟಿ ಮಾಡಿ, ಅಡಿಕೆಯಲ್ಲಿನ ತೇವಾಂಶದ ಗರಿಷ್ಠ ಮಿತಿಯನ್ನು 11ಶೇಕಡಾಕ್ಕೆ ಹೆಚ್ಚಿಸಿ ಎಫ್‌ಎಸ್‌ಎಸ್‌ಎಐ ಮೂಲಕ ಮಾರ್ಗ ಸೂಚಿಯನ್ನು ಬಿಡುಗಡೆಗೊಳಿಸುವಂತೆ ಮನವಿ ಮಾಡಿತು. ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಹೆಚ್.ಎಂ.ಕೃಷ್ಣಕುಮಾರ್ ಅವರು ಈ ಕುರಿತು ಸಚಿವರಿಗೆ ವಿವರಣೆ ನೀಡಿದರು. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು.ಎಫ್‌ಎಸ್‌ಎಸ್‌ಎಐ ಈಗಾಗಲೇ ಅಡಿಕೆಯ ತೇವಾಂಶದ ಗರಿಷ್ಠ ಮಿತಿಯನ್ನು 7 ಶೇಕಡಾಕ್ಕೆ ನಿಗದಿಪಡಿಸಿ ಮಾರ್ಗಸೂಚಿಯನ್ನು ಸರಕಾರ ಬಿಡುಗಡೆಗೊಳಿಸಿರುವುದರಿಂದ ಹೊಸ ಅಡಿಕೆಯ ಪ್ರಾರಂಭದಲ್ಲಿ ಮತ್ತು ಮಳೆಗಾಲದಲ್ಲಿ ಅಡಿಕೆ ಮಾರಾಟಕ್ಕೆ ಸಮಸ್ಯೆಯಾಗುತ್ತಿರುವ ಕುರಿತು ಸಚಿವರ ಗಮನ ಸೆಳೆಯಲಾಯಿತು.
ಅಡಿಕೆ ಆಮದು ದರ ಹೆಚ್ಚಿಸಿ: ಕೇಂದ್ರದ ವಾಣಿಜ್ಯ ಸಚಿವ ಪಿಯೂಷ್ ಗೋಯಲ್‌ರವರನ್ನು ಭೇಟಿ ಮಾಡಿದ ನಿಯೋಗ, ಅಡಿಕೆ ಆಮದಿನಿಂದ ದೇಶೀಯ ಅಡಿಕೆ ದರ ಏರಿಳಿತದ ಬಗ್ಗೆ ಚರ್ಚೆ ನಡೆಸಿದೆ.ಹೆಚ್ಚಾದ ಅಡಿಕೆಯ ಉತ್ಪಾದನಾ ವೆಚ್ಚಕ್ಕೆ ಅನುಸರಿಸಿ ಅಡಿಕೆಯ ಕನಿಷ್ಟ ಆಮದು ದರವನ್ನು ಚಾಲಿ ಅಡಿಕೆಗೆ ಕೆಜಿಗೆ ರೂ.360 ಮತ್ತು ಕೆಂಪಡಿಕೆಗೆ ಕೆಜಿಗೆ 420ರೂ.ಗಳಿಗೆ ಹೆಚ್ಚಿಸುವಂತೆ ಮನವಿ ಮಾಡಿದೆ.ಸಚಿವರು ಇದಕ್ಕೆ ಒಪ್ಪಿಗೆ ಸೂಚಿಸಿದರು.
ನಿಯೋಗದಲ್ಲಿ ಮಂಜಪ್ಪ ಹೊಸಬಾಳೆ,ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಜೀವರಾಜ್, ಅಡಿಕೆ ಮಹಾಮಂಡಳದ ಅಧ್ಯಕ್ಷ ಸುಬ್ರಹ್ಮಣ್ಯ ಯಡಗೆರೆ, ಅಖಿಲ ಭಾರತ ಸಹಕಾರ ಭಾರತೀಯ ಸಂರಕ್ಷಕ್ ಸುರೇಶ್ ವೈದ್ಯ, ತುಮ್ಕೋಸ್ ಅಧ್ಯಕ್ಷ ಆರ್.ಎಂ.ರವಿ, ಕ್ಯಾಂಪ್ಕೋ ನಿರ್ದೇಶಕರು, ಸಹಕಾರ ಭಾರತಿಯ ರಾಜ್ಯ ಕಾರ್ಯದರ್ಶಿ ಕೃಷ್ಣಪ್ರಸಾದ್ ಮಡ್ತಿಲ, ಟಿಎಸ್‌ಎಸ್‌ನ ನಿರ್ದೇಶಕರಾದ ಶಶಾಂಕ್ ಎಸ್.ಹೆಗಡೆ, ಮಹಾಮಂಡಳದ ನಿರ್ದೇಶಕರಾದ ಶಿವಕುಮಾರ್ ಅವರು ನಿಯೋಗದಲ್ಲಿದ್ದರು.

LEAVE A REPLY

Please enter your comment!
Please enter your name here