- ಅಭಿಯಾನಕ್ಕೆ ಮತ್ತೆ ತೊಡಕಾಗಿ ಪರಿಣಮಿಸಿದ ಸರ್ವರ್ ಸಮಸ್ಯೆ
ಪುತ್ತೂರು: ತಾಲೂಕಿನ ಎಲ್ಲಾ ಮತಗಟ್ಟೆ ಅಂಗನವಾಡಿ ಹಾಗೂ ಗ್ರಾಮ ಕರಣಿಕರ ಕಚೇರಿಯಲ್ಲಿ ಭಾನುವಾರ ಬೆಳಿಗ್ಗೆ ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಮೊಬೈಲ್ ಆ್ಯಪ್ ಮೂಲಕ ಅಭಿಯಾನ ನಡೆಯುತ್ತಿದೆ. ಮತಗಟ್ಟೆ ಅಂಗನವಾಡಿಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಆಧಾರ್ ಜೋಡಣೆ ನಡೆಸಿದರೆ, ಆಶಾ ಕಾರ್ಯಕರ್ತೆಯರು ಸಹಕಾರ ನೀಡುತ್ತಿದ್ದಾರೆ. ಗ್ರಾಮ ಕರಣಿಕರ ಕಚೇರಿಯಲ್ಲೂ ಸಿಬ್ಬಂದಿಗಳು ಲಿಂಕಿಂಗ್ ಕೆಲಸ ನಿರ್ವಹಿಸುತ್ತಿದ್ದಾರೆ.
ಸರ್ವರ್ ಸಮಸ್ಯೆ:
ಸರಕಾರಿ ಯೋಜನೆಗಳ ಜಾರಿಗೆ ಅತಿದೊಡ್ಡ ಸವಾಲಾಗಿರುವ ಸರ್ವರ್ ಸಮಸ್ಯೆ ಭಾನುವಾರವೂ ಆಧಾರ್ ಜೋಡಣೆಗೆ ತೊಡಕಾಗಿ ಪರಿಣಮಿಸಿತು. ಎಲ್ಲಾ ಕಡೆಯೂ ಒಂದೇ ಬಾರಿಗೆ ಲಿಂಕಿಂಗ್ ಕೆಲಸ ನಡೆಯುತ್ತಿದ್ದ ಕಾರಣ, ಸರ್ವರ್ ಸಮಸ್ಯೆ ಎದುರಾಗಿರಬಹುದು ಎಂಬ ಮಾತು ಕೇಳಿಬಂದಿದೆ. ಆದರೆ ಇದರಿಂದಾಗಿ ಅಭಿಯಾನಕ್ಕೆ ಹಿನ್ನಡೆ ಆಗುವ ಸಾಧ್ಯತೆಯೇ ಹೆಚ್ಚು. ಅಲ್ಲದೇ, ಪ್ರತಿಯೋರ್ವ ಅಂಗನವಾಡಿ ಕಾರ್ಯಕರ್ತೆಗೆ ದಿನವೊಂದಕ್ಕೆ 50 ಮಂದಿಯ ಆಧಾರ್ ಜೋಡಣೆಯ ಗುರಿ ನೀಡಿದ್ದು, ಗುರಿಯನ್ನು ತಲುಪುವುದು ಹೇಗೆ ಎಂಬ ಚಿಂತೆಯಲ್ಲಿರುವುದು ಕಂಡುಬಂದಿತು.