ಮುಗೇರಡ್ಕದಲ್ಲಿ ಏತ ನೀರಾವರಿ ಯೋಜನೆ ಕಾಮಗಾರಿ ಪರಿಶೀಲನೆ; ಮಾರ್ಚ್ ಅಂತ್ಯಕ್ಕೆ ಲೋಕಾರ್ಪಣೆ-ಸಚಿವ ಗೋವಿಂದ ಕಾರಜೋಳ

0

 ಚಿತ್ರ/ವರದಿ: ಸಿದ್ದಿಕ್ ನೀರಾಜೆ

  • 240 ಕೋಟಿ ರೂಪಾಯಿ ಯೋಜನೆ
  • ಮುಗೇರಡ್ಕದಿಂದ ರಾಷ್ಟ್ರೀಯ ಹೆದ್ದಾರಿ ಬೆದ್ರೋಡಿಗೆ ಸಂಪರ್ಕ ಸೇತು
  • 16 ಗ್ರಾಮ, 1100 ಹೆಕ್ಟೇರ್ ಜಮೀನುಗಳಿಗೆ ನೀರಾವರಿ ಸೌಲಭ್ಯ

ಉಪ್ಪಿನಂಗಡಿ: ದ.ಕ. ಜಿಲ್ಲೆಯಲ್ಲಿಯೇ ಮೊದಲ ಯೋಜನೆಯಾಗಿ ಅನುಷ್ಠಾನಗೊಳ್ಳುತ್ತಿರುವ 240 ಕೋಟಿ ರೂಪಾಯಿ ವೆಚ್ಚದ ಬೆಳ್ತಂಗಡಿ ಏತ ನೀರಾವರಿ ಯೋಜನೆಯು ಮುಂದಿನ ಮಾರ್ಚ್ ತಿಂಗಳ ಅಂತ್ಯದ ಒಳಗಾಗಿ ಲೋಕಾರ್ಪಣೆಗೊಳ್ಳಲಿದೆ ಎಂದು ರಾಜ್ಯ ಜಲ ಸಂಪನ್ಮೂಲ ಖಾತೆ ಸಚಿವ ಗೋವಿಂದ ಎಂ. ಕಾರಜೋಳ ಹೇಳಿದರು.

ಸೆ. 1ರಂದು ಬೆಳ್ತಂಗಡಿ ತಾಲ್ಲೂಕಿನ ಮೊಗ್ರು ಗ್ರಾಮದ ಮುಗೇರಡ್ಕ ಎಂಬಲ್ಲಿ ನೇತ್ರಾವತಿ ನದಿಗೆ ಅಡ್ಡವಾಗಿ ನಿರ್ಮಿಸಲಾಗುತ್ತಿರುವ ಅಣೆಕಟ್ಟು ಸಹಿತ ಮುಗೇರಡ್ಕ-ಬೆದ್ರೋಡಿ ರಾಷ್ಟ್ರೀಯ ಹೆದ್ದಾರಿ-75 ಸಂಪರ್ಕದ ಸೇತುವೆ ನಿರ್ಮಾಣ ಕಾರ್ಯ ಹಾಗೂ ಅಣೆಕಟ್ಟು ಮೂಲಕ ಬೆಳ್ತಂಗಡಿ ತಾಲ್ಲೂಕಿನ 16 ಗ್ರಾಮಗಳಿಗೆ ನೀರುಣಿಸಲಿರುವ ಏತ ನೀರಾವರಿ ಯೋಜನೆಯ ಕಾಮಗಾರಿ ಪರಿಶೀಲನೆ ನಡೆಸಿ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು.


ದ.ಕ. ಜಿಲ್ಲೆಯ ಇತಿಹಾಸದಲ್ಲಿ ಈ ಹಿಂದೆ ದೊಡ್ಡ ನೀರಾವರಿ ಯೋಜನೆಗಳು ಬಂದಿರಲಿಲ್ಲ. ಇಲ್ಲಿನ ತೂಗು ಸೇತುವೆ ಭಾರೀ ನೆರೆಗೆ ಕೊಚ್ಚಿ ಹೋದಾಗ ಪರ್ಯಾಯ ತೂಗು ಸೇತುವೆ ರಚನೆಯ ಬದಲು ಸರ್ವಕಾಲಿಕ ಸೇತುವೆಯ ನಿರ್ಮಾಣಕ್ಕೆ ಶಾಸಕರು ಆದ್ಯತೆ ನೀಡಿದ್ದರು. ಸೇತುವೆಯ ನಿರ್ಮಾಣದ ಜೊತೆ ಜೊತೆಗೆ ಕಿಂಡಿ ಅಣೆಕಟ್ಟು ನಿರ್ಮಿಸಿ ತಾಲ್ಲೂಕಿನ ಹಲವು ಗ್ರಾಮಗಳ ನೀರಿನ ಬೇಡಿಕೆಯನ್ನು ಪೂರೈಸುವ ಉದ್ದೇಶದಿಂದ ಏತ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಕಳೆದ ಅವಧಿಯಲ್ಲಿ ಸತತ ಮಳೆಯಿಂದಾಗಿ ಕೇವಲ 3 ತಿಂಗಳು ಮಾತ್ರ ಕಾಮಗಾರಿಗೆ ಅವಕಾಶ ಲಭಿಸಿದ್ದು, ಈ ಬಾರಿ ಪ್ರಕೃತಿ ಸಹಕರಿಸಿದರೆ ಮುಂದಿನ ಐದು ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಪ್ರಸಕ್ತ ರಾಜ್ಯ ಸರ್ಕಾರ 66 ಲಕ್ಷ ಹೆಕ್ಟೇರು ಕೃಷಿ ಭೂಮಿಗೆ ನೀರುಣಿಸಲು ಯೋಜನೆ ರೂಪಿಸಿದ್ದು, ಈ ಪೈಕಿ 40 ಲಕ್ಷ ಹೆಕ್ಟೇರು ಕೃಷಿ ಭೂಮಿಗೆ ಬೃಹತ್ ಮತ್ತು ಮಧ್ಯಮ ಗಾತ್ರದ ನೀರಾವರಿ ಯೋಜನೆಯ ಮೂಲಕ 10 ಲಕ್ಷ ಹೆಕ್ಟೇರು ಕೃಷಿ ಭೂಮಿಗೆ ಸಣ್ಣ ನೀರಾವರಿ ಯೋಜನೆಯ ಮೂಲಕ ನೀರುಣಿಸುವ ಗುರಿ ಸಾಧಿಸಲಾಗುತ್ತಿದೆ. ಅಂತರ್ ರಾಜ್ಯ ಹರಿಯುವ ನೀರಿನ ಹಂಚಿಕೆಯಲ್ಲಿ ರಾಜ್ಯದ ಪಾಲನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸರ್ಕಾರ ಬದ್ದವಾಗಿದ್ದು, ಕೃಷ್ಣ ಮೇಲ್ದಂಡೆ ಯೋಜನೆಗೆ ಮಹಾರಾಷ್ಟ್ರ, ಆಂದ್ರಪ್ರದೇಶ, ತೆಲಂಗಾಣ ರಾಜ್ಯ ಸರ್ಕಾರ ನ್ಯಾಯಾಲಯದ ಮೆಟ್ಟಿಲೇರಿಸಿರುವುದರಿಂದ ಯೋಜನೆಯ ಅನುಷ್ಠಾನ ವಿಳಂಬವಾಗಿದೆ.

ಮೇಕೆದಾಟು ಯೋಜನೆಯಲ್ಲಿ ರಾಜ್ಯದ ೪.೭೫ ಟಿಎಂಸಿ. ನೀರಿನ ಪಾಲು ದೊರತರೆ ಬೆಂಗಳೂರು ಮತ್ತು ಅದರ ಸುತ್ತಮುತ್ತಲ ಪ್ರದೇಶಗಳ ಜನರ ಕುಡಿಯುವ ನೀರಿನ ಬೇಡಿಕೆ ಈಡೇರಿಸಬಹುದಾಗಿದೆ. ತಮಿಳುನಾಡು ಸರ್ಕಾರ ಇದರ ಬಗ್ಗೆ ದಾವೆ ಹೂಡಿರುವುದರಿಂದ ಯೋಜನೆಯ ಅನುಷ್ಠಾನ ವಿಳಂಬವಾಗಿದೆ ಎಂದರು.

ಎತ್ತಿನ ಹೊಳೆ ಕಾಮಗಾರಿ ಪ್ರಗತಿಯಲ್ಲಿ:
ಎತ್ತಿನ ಹೊಳೆ ಕಾಮಗಾರಿ ಪ್ರಗತಿಯಲ್ಲಿದ್ದು, ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಯೋಜನೆಯ ಒಟ್ಟು ಕಾಮಗಾರಿಯು ನಿಗದಿತ ಅವಧಿಯಲ್ಲಿ ಪೂರ್ಣಗೊಂಡಿಲ್ಲ. ಮಹಾದಾಯಿ ಯೋಜನೆಯಿಂದ ರಾಜ್ಯದ ಪಾಲಾದ ೩.೯ ಟಿಎಂಸಿ. ನೀರಿನ ಲಭ್ಯತೆಗಾಗಿ ಕೇಂದ್ರ ಸರ್ಕಾರದ ಅನುಮತಿ ಪಡೆದು ಬೇಗನೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.

ಕಾಮಗಾರಿ ವೀಕ್ಷಣೆಗೆ ಆಗಮಿಸಿದ ಸಚಿವರನ್ನು ಹಾಗೂ ಶಾಸಕ ಹರೀಶ್ ಪೂಂಜಾರನ್ನು ಮೊಗೇರಡ್ಕ ಮೂವರು ದೈವಗಳ ದೈವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಕ್ಷೇತ್ರದ ವತಿಯಿಂದ ಗೌರವ ಸಲ್ಲಿಸಲಾಯಿತು.

ಜಲ ಸಂಪನ್ಮೂಲ ಇಲಾಖೆಯ ಸುಪರಿಂಟೆಂಡೆಂಟ್ ಇಂಜಿನಿಯರ್ ಭೀಮಾ ನಾಯಕ್, ಕಾರ್‍ಯಾಪಾಲಕ ಇಂಜಿನಿಯರ್ ನಟರಾಜ ಪಟೇಲ್, ಸಹಾಯಕ ಇಂಜಿನಿಯರ್ ಪ್ರಸನ್ನ, ದಾಸೇ ಗೌಡ, ವಿಜಯ್ ಶೆಟ್ಟಿ, ಎನ್.ಜಿ. ಭಟ್ ಪೂರಕ ಮಾಹಿತಿ ನೀಡಿದರು.

ಬಂದಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಪರಮೇಶ್ವರಿ, ಉಪಾಧ್ಯಕ್ಷ ಗಂಗಾಧರ ಪೂಜಾರಿ, ಸದಸ್ಯ ಬಾಲಕೃಷ್ಣ ಗೌಡ, ದೈವಸ್ಥಾನ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ಅಂತರ, ಮನೋಹರ್ ಅಂತರ, ಕೇಶವ ಗೌಡ ಜಾಲ್ನಡೆ, ಸುಧಾಕರ ಮೈಮಾರು, ರಾಮಣ್ಣ ಗೌಡ ಎರ್ಮಾಲು, ಬಾಬು ಗೌಡ ಮತ್ತಿತರರು ಉಪಸ್ಥಿತರಿದ್ದರು.

16 ಗ್ರಾಮ, 1100 ಹೆಕ್ಟೇರ್ ಜಮೀನುಗಳಿಗೆ ನೀರಾವರಿ
ಈ ಏತ ನೀರಾವರಿಯಿಂದ ಬೆಳ್ತಂಗಡಿ ತಾಲ್ಲೂಕಿನ ಇಳಂತಿಲ, ಉರುವಾಲು, ಮೊಗ್ರು, ಕಣಿಯೂರು, ಕಲಿಯ, ಒಡಿಲ್ನಾಲು, ಲಾಯಿಲ, ಕೂವೆಟ್ಟು ಮೊದಲಾದ 16 ಗ್ರಾಮ, 1100 ಹೆಕ್ಟೇರ್ ಜಮೀನುಗಳಿಗೆ ನೀರಾವರಿ ಸೌಲಭ್ಯ ಹಾಗೂ ನದಿ ದಂಡೆಯನ್ನು ಸುಭದ್ರಗೊಳಿಸುವ ಕಾಮಗಾರಿ ಇದಾಗಿದೆ.

(ಹಳಯ ಫೊಟೊ ಇದೆ)

2019ರಲ್ಲಿ ಇಲ್ಲಿನ ತೂಗು ಸೇತುವೆ ಕೊಚ್ಚಿ ಹೋಗಿತ್ತು.
ಮೊಗ್ರು ಗ್ರಾಮದ ಮುಗೇರಡ್ಕ ಮತ್ತು ಬಜತ್ತೂರು ಗ್ರಾಮದ ಬೆದ್ರೋಡಿಯಲ್ಲಿ ನೇತ್ರಾವತಿ ಸೇತುವೆಗೆ ಅಡ್ಡವಾಗಿ ಇದ್ದ ತೂಗು ಸೇತುವೆ 2019 ಆಗಸ್ಟ್ 7 ಮತ್ತು 8ರಂದು ನದಿಯಲ್ಲಿ ನೆರೆ, ಪ್ರವಾಹ ಉಕ್ಕಿ ಹರಿದ ಸಂದರ್ಭದಲ್ಲಿ ಸೇತುವೆ ತುಂಡಾಗಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ತದ ನಂತರ ಇಲ್ಲಿ ಪೂರ್ಣ ಪ್ರಮಾಣದ ಸೇತುವೆ ಆಗಬೇಕೆಂಬ ಬೇಡಿಕೆ ಈ ಭಾಗದ ಗ್ರಾಮಸ್ಥರಿಂದ ವ್ಯಕ್ತವಾಗಿತ್ತು.

LEAVE A REPLY

Please enter your comment!
Please enter your name here