ಜ.22: ಬ್ರಹ್ಮೈಕ್ಯ ಆದಿ ಚುಂಚನಗಿರಿ ಬಾಲಗಂಗಾಧರನಾಥ ಶ್ರೀಗಳ 78ನೇ ಜಯಂತ್ಯೋತ್ಸವ-ಗ್ರಂಥ ಲೋಕಾರ್ಪಣೆ

0

ಪುತ್ತೂರಿನಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮದ ಪೂರ್ವಭಾವಿ ಸಭೆ
1 ಲಕ್ಷ ಮಂದಿ ಸಮಾಜ ಬಾಂಧವರನ್ನು ಸೇರಿಸುವ ಗುರಿ

  •  ಖರ್ಚಿನ ಜವಾಬ್ದಾರಿ ನಮ್ಮದು, ಸಂಖ್ಯೆಯ ಜವಾಬ್ದಾರಿ ನಿಮ್ಮದು-ಸಂಜೀವ ಮಠಂದೂರು
  • ತಾಲೂಕುಗಳನ್ನು ಸಂಪರ್ಕಿಸುವ ಕೆಲಸ ಆಗಬೇಕು-ಚಿದಾನಂದ ಬೈಲಾಡಿ
  •  ರಾಜ್ಯಮಟ್ಟದಲ್ಲಿ ಹೆಸರು ಬರುವಂತಹ ಕಾರ್ಯಕ್ರಮವಾಗಬೇಕು – ವಿಶ್ವನಾಥ ಗೌಡ
  •  ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು-ನಾಗೇಶ್ ಕೆಡೆಂಜಿ

ಪುತ್ತೂರು:ಶ್ರೀ ಕ್ಷೇತ್ರ ಆದಿ ಚುಂಚನಗಿರಿ ಮಠದ ಪೀಠಾಧಿಪತಿಗಳಾಗಿದ್ದ ಬ್ರಹ್ಮೈಕ್ಯ ಬಾಲಗಂಗಾಧರನಾಥ ಸ್ವಾಮಿಜಿಯವರ 78ನೇ ಜಯಂತ್ಯೋತ್ಸವದ ಜಿಲ್ಲಾ ಮಟ್ಟದ ಕಾರ್ಯಕ್ರಮ ಜ.22ರಂದು ಪುತ್ತೂರಿನಲ್ಲಿ ನಡೆಯಲಿದ್ದು ಇದರ ಪ್ರಥಮ ಪೂರ್ವಭಾವಿ ಸಭೆಯು ಸೆ.10ರಂದು ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.ನಿರೀಕ್ಷೆಗೂ ಮೀರಿ ಸಮಾಜ ಬಾಂಧವರು ಸಭೆಯಲ್ಲಿ ಸೇರಿದ್ದರು.


ಬ್ರಹ್ಮೈಕ್ಯರಾದ ಬಾಲಗಂಗಾಧರನಾಥ ಶ್ರೀಗಳ ಜಯಂತ್ಯೋತ್ಸವ ಮತ್ತು ಶ್ರೀಗಳ ಕುರಿತು ಮಂಗಳೂರು ಶಾಖಾ ಮಠದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಬರೆದಿರುವ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ನಡೆಯಲಿದೆ.ಈ ನಿಟ್ಟಿನಲ್ಲಿ ಜಿಲ್ಲಾ ಸಮಿತಿ ಮತ್ತು ತಾಲೂಕು ಸಂಪರ್ಕದ ಕುರಿತು ಪೂರ್ವಭಾವಿ ಸಭೆಯಲ್ಲಿ ಪ್ರಮುಖರು ಚರ್ಚಿಸಿದರು.
ಖರ್ಚಿನ ಜವಾಬ್ದಾರಿ ನಮ್ಮದು, ಸಂಖ್ಯೆಯ ಜವಾಬ್ದಾರಿ ನಿಮ್ಮದು :
ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಸುಳ್ಯ, ಪುತ್ತೂರು,ಬೆಳ್ತಂಗಡಿ ಭಾಗದಲ್ಲಿ ನಮ್ಮವರು ಬಹಳಷ್ಟು ಸಂಖ್ಯೆಯಲ್ಲಿ ಇದ್ದಾರೆ.ಆದರೆ ಕಾರ್ಯಕ್ರಮ ಯಶಸ್ವಿಗೆ ನಿತ್ಯ ನಿರಂತರ ಪ್ರವಾಸ ಮಾಡಬೇಕು.ಖರ್ಚು ವೆಚ್ಚಗಳ ಜವಾಬ್ದಾರಿ ನಾನೇ ತೆಗೆದುಕೊಳ್ಳುತ್ತೇನೆ.ಸಂಖ್ಯೆಯ ದೃಷ್ಟಿಯಿಂದ ನೀವು ನೋಡಿ.ಒಟ್ಟು ಕಾರ್ಯಕ್ರಮ ಯಶಸ್ವಿ ಮಾಡುವ ದೃಷ್ಟಿಯಲ್ಲಿ ಎಲ್ಲರೂ ಕೆಲಸ ಮಾಡಬೇಕು.ದೊಡ್ಡ ಸ್ವಾಮೀಜಿಯವರ ಜಯಂತ್ಯೋತ್ಸವ ಒಳ್ಳೆಯ ರೀತಿಯಲ್ಲಿ ನಡೆದಿದೆ ಎಂಬ ಸಂದೇಶ ಹೋಗಬೇಕು.ನಮ್ಮ ಗುರಿ 1 ಲಕ್ಷ ಜನರನ್ನು ಸೇರಿಸುವುದು.ದಕ್ಷಿಣ ಕನ್ನಡ ಜಿಲ್ಲೆಯ ಇತರ ಸಮಾಜಕ್ಕೂ ಮಾದರಿ ಕಾರ್ಯಕ್ರಮವಾಗಬೇಕು.ಅದೇ ರೀತಿ ಕಾರ್ಯಕ್ರಮದ ಯಶಸ್ವಿಗೆ ಜಿಲ್ಲೆಯ ಪ್ರಮುಖರ ಸಭೆಯನ್ನು ಇಲ್ಲೇ ಕರೆಯಬೇಕು ಎಂದರು.

ತಾಲೂಕುಗಳನ್ನು ಸಂಪರ್ಕಿಸುವ ಕೆಲಸ ಆಗಬೇಕು:
ಒಕ್ಕಲಿಗ ಗೌಡ ಸಂಘದ ಗೌರವಾಧ್ಯಕ್ಷ ಚಿದಾನಂದ ಬೈಲಾಡಿ ಅವರು ಮಾತನಾಡಿ ಜಿಲ್ಲಾ ಮಟ್ಟದ ಕಾರ್ಯಕ್ರಮ ಮಾಡುವಾಗ ಎಲ್ಲಾ ತಾಲೂಕುಗಳನ್ನು ಸಂಪರ್ಕಿಸುವ ಕೆಲಸ ಆಗಬೇಕೆಂದರು.
ರಾಜ್ಯಮಟ್ಟದಲ್ಲಿ ಹೆಸರು ಬರುವಂತಹ ಕಾರ್ಯಕ್ರಮವಾಗಬೇಕು: ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು ಅವರು ಮಾತನಾಡಿ ಒಟ್ಟು ಕಾರ್ಯಕ್ರಮ ರಾಜ್ಯಮಟ್ಟದಲ್ಲಿ ಹೆಸರು ತರುವಂತಹ ಕಾರ್ಯಕ್ರಮ ಆಗಬೇಕು.ಅದೇ ರೀತಿ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಂಗಳೂರಿಗೆ ಪುತ್ತೂರಿನಿಂದ ೫೦ ಸಾವಿರ ಸಂಖ್ಯೆ ಸೇರಬೇಕೆಂದರು.
ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು: ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ನಾಗೇಶ್ ಕೆಡೆಂಜಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ಯಶಸ್ವಿಗೆ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು ಮತ್ತು ನಾಯಕತ್ವ ಗುಣ ಬೆಳೆಸಲು ಸಮಾವೇಶದ ಅಗತ್ಯವಿದೆ.ಈ ನಿಟ್ಟಿನಲ್ಲಿ ಶ್ರೀಗಳ ಜಯಂತ್ಯೋತ್ಸವ ಯಶಸ್ವಿಯಾಗಿ ನಡೆಯಬೇಕು. ಇದಕ್ಕಾಗಿ ಸಮಿತಿ ರಚನೆ ಮಾಡಬೇಕೆಂದರು.
ಯೋಗಿ ಆದಿತ್ಯನಾಥರನ್ನು ಕರೆಸುವ ಚಿಂತನೆ:
ಸಭೆಯ ಆರಂಭದಲ್ಲಿ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ವಿಗಾಗಿ ವಿವಿಧ ಸಲಹೆಗಳನ್ನು ನೀಡಿದರು.ಈ ಸಂದರ್ಭದಲ್ಲಿ ನಾಥ ಪಂಥದವರಾದ ಯೋಗಿ ಆದಿತ್ಯನಾಥ್ ಅವರನ್ನು ಕರೆಸುವ ಚಿಂತನೆ ನಡೆಯಿತು.ಎಪಿಎಂಸಿ ನಿಕಟಪೂರ್ವ ಅಧ್ಯಕ್ಷ ದಿನೇಶ್ ಮೆದು ಅವರು ಮಾತನಾಡಿ ಉತ್ಸಾಹಕ್ಕೆ ಪ್ರೋತ್ಸಾಹ ಸಿಗುವಂತಹ ಕೆಲಸ ಆಗಬೇಕು ಎಂದರು. ಸಂಘದ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ ಅವರು ಮಾತನಾಡಿ ಕೇವಲ ಹಿರಿಯರು ಮಾತ್ರವಲ್ಲ ಹುಡುಗರನ್ನು ಎಬ್ಬಿಸುವ ಕೆಲಸ ಆಗಬೇಕು ಎಂದರು.ಪ್ರದೀಪ್ ಗೌಡ ಅರುವಗುತ್ತು ಅವರು ಮಾತನಾಡಿ ರಾಜ್ಯ ಮಟ್ಟದ ಸಮಾವೇಶ ಮಾಡಬಹುದು ಎಂದರು.ಯುವ ಗೌಡ ಸಂಘದ ಪ್ರವೀಣ್ ಕುಂಟ್ಯಾನ ಯುವ ಸಂಘದ ನೇತೃತ್ವದಲ್ಲಿ ನಡೆಯುವ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಇವತ್ತೇ ಸಮಿತಿ ರಚನೆಗೆ ನಿರ್ಣಯ ತೆಗೆದು ಕೊಳ್ಳಬೇಕೆಂದರು.ಯುವ ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಸುಬ್ರಾಯ ಗೌಡ, ಸತೀಶ ಪಾಂಬಾರು, ಯತೀಂದ್ರ ಕೊಚ್ಚಿ, ಎ.ವಿ.ನಾರಾಯಣ್, ರವಿ ಮುಂಗ್ಲಿಮನೆ ಸೇರಿದಂತೆ ಹಲವಾರು ಮಂದಿ ಸಲಹೆ ಸೂಚನೆ ನೀಡಿದರು.ಸಭೆಯಲ್ಲಿ ಪುತ್ತೂರು, ಸುಳ್ಯ, ಬೆಳ್ತಂಗಡಿ, ವಿಟ್ಲ, ಬಂಟ್ವಾಳದ ಸಂಪರ್ಕಕ್ಕೆ ಸಮಿತಿ ರಚನೆ ಮಾಡಲಾಯಿತು.

ಒಕ್ಕಲಿಗ ಗೌಡ ಸೇವಾ ಸಂಘದ ಮಹಿಳಾ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ ಗೌಡ, ಪ್ರಧಾನ ಕಾರ್ಯದರ್ಶಿ ವಾರಿಜಾ, ಕಡಬ ತಾಲೂಕು ಅಧ್ಯಕ್ಷ ತಮ್ಮಯ್ಯ ಗೌಡ, ಒಕ್ಕಲಿಗ ಸ್ವಸಹಾಯ ಸಂಘದ ಅಧ್ಯಕ್ಷ ಮನೋಹರ್ ಡಿ.ವಿ., ಯುವ ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಸುಬ್ರಾಯ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು ವಂದಿಸಿದರು.

ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ
ಆಟೋಟ ಸ್ಪರ್ಧೆ ಆಮಂತ್ರಣ ಬಿಡುಗಡೆ
ಯುವ ಒಕ್ಕಲಿಗ ಗೌಡ ಸೇವಾ ಸಂಘದ ಪುತ್ತೂರು ವಲಯದ ನೇತೃತ್ವದಲ್ಲಿ ಸೆ.18ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ನಡೆಯುವ ಆಟೋಟ ಸ್ಪರ್ಧಾ ಕಾರ್ಯಕ್ರಮಗಳ ಆಮಂತ್ರಣವನ್ನು ಶಾಸಕ ಸಂಜೀವ ಮಠಂದೂರು ಅವರು ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ವಲಯದ ಅಧ್ಯಕ್ಷ ಪ್ರಶಾಂತ್ ಕೆಮ್ಮಾಯಿ, ವಲಯದ ಪ್ರಧಾನ ಕಾರ್ಯದರ್ಶಿ ಆನಂದ ಗೌಡ ತೆಂಕಿಲ, ಉಪಾಧ್ಯಕ್ಷ ಕಿಶೋರ್ ಮರಿಕೆ, ಕ್ರೀಡಾ ಕಾರ್ಯದರ್ಶಿ ಮೋಹನ್ ಗೌಡ ಕಬಕ, ಸಾಂಸ್ಕೃತಿಕ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ ಉಪಸ್ಥಿತರಿದ್ದರು.

ಸೆ.18ಕ್ಕೆ ಸ್ವಾಮೀಜಿ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸಭೆ

ಸ್ವಾಮೀಜಿಯವರ ನೇತೃತ್ವದಲ್ಲಿ ಪ್ರಥಮ ಸಭೆ ಪುತ್ತೂರಿನಲ್ಲಿ ನಡೆಸಿ ಬಳಿಕ ಎಲ್ಲಾ ತಾಲೂಕು, ಗ್ರಾಮ ಸಂಪರ್ಕ ಕೆಲಸ ಮಾಡಬೇಕು.ಪ್ರವಾಸಕ್ಕೆ ದಿನಾಂಕ ಗೊತ್ತುಪಡಿಸುವ ಕಾರ್ಯಕ್ರಮ ಸ್ವಾಮೀಜಿಯವರು ತಿಳಿಸುತ್ತಾರೆ.ಸೆ.೧೮ಕ್ಕೆ ಜಿಲ್ಲೆಯ ಸಭೆ ಸಂಜೆ ಗಂ.4.30ಕ್ಕೆ ಇಲ್ಲಿ ಮಾಡೋಣ.
ಸಂಜೀವ ಮಠಂದೂರು,, ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here