- ಆರೋಪಿ ಪದ್ಮನಾಭ ಬಂಗೇರ ಪೊಲೀಸ್ ವಶಕ್ಕೆ
ವಿಟ್ಲ: ತಮ್ಮನಿಂದ ಅಣ್ಣನ ಕೊಲೆಗೈದ ಘಟನೆ ನಡೆದ ವಿಟ್ಲ ಪಡ್ನೂರು ಗ್ರಾಮದ ಕೊಡಂಗೆಯ ಮನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆರವರು ಭೇಟಿ ನೀಡಿದ್ದಾರೆ.
ಘಟನೆ ಸೆ.13ರಂದು ತಡರಾತ್ರಿ ನಡೆದಿತ್ತು. ವಿಟ್ಲ ಪಡ್ನೂರು ಗ್ರಾಮದ ಕೊಡಂಗೆ ದಿ. ಶೀನಪ್ಪ ದೇವಾಡಿಗರವರ ಪುತ್ರ ಗಣೇಶ್ ಬಂಗೇರ(54) ಮೃತ ದುರ್ದೈವಿಯಾಗಿದ್ದಾರೆ. ಮೃತರ ಸಹೋದರ ಪದ್ಮನಾಭ ಬಂಗೇರ ಪ್ರಕರಣದಲ್ಲಿ ಆರೋಪಿಯಾಗಿದ್ದು ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡಸುತ್ತಿದ್ದಾರೆ.
ಸಹೋದರರಿಬ್ಬರೂ ತಾಯಿ ಕಮಲರವರೊಂದಿಗೆ ವಿಟ್ಲ ಪಡ್ನೂರು ಗ್ರಾಮದ ಕೊಡಂಗೆಯಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದರು. ಸೆ.13ರ ತಡರಾತ್ರಿ ಕುಡಿತದ ಮತ್ತಿನಲ್ಲಿ ತಮ್ಮ ಪದ್ಮನಾಭ ಬಂಗೇರ ಗಣೇಶ ಬಂಗೇರರವರನ್ನು ಯಾವುದೋ ಆಯುಧ ಬಳಸಿ ಕೊಲೆಗೈದಿರುವುದಾಗಿ ಮೃತರ ಸಹೋದರಿ ಆರೋಪಿಸಿದ್ದಾರೆ. ಬೆಳಗ್ಗೆ ತಾಯಿ ಫೋನ್ ಮಾಡಿ ಗಣೇಶ ಬಂಗೇರರವರು ಮಲಗಿದಲ್ಲೇ ಇದ್ದಾರೆ ಮಾತನಾಡುವುದಿಲ್ಲ ಎಂದು ತಿಳಿಸಿದ್ದು, ಬಳಿಕ ನಾನು ಹಾಗೂ ಅಕ್ಕನ ಮಗ ತಾಯಿ ಮನೆಗೆ ಬಂದು ನೋಡಿದಾಗ ಅವರು ಮೃತಪಟ್ಟ ಸ್ಥಿತಿಯಲ್ಲಿದ್ದರು ಎಂದು ಮೃತರ ಸಹೋದರಿ ತಿಳಿಸಿದ್ದಾರೆ.
ಸಹೋದರರಿಬ್ಬರು ವಿವಾಹಿತರಾಗಿದ್ದರೂ ಪತ್ನಿಯರನ್ನು ತೊರೆದಿದ್ದರೆಂದು ಸಂಬಂಧಿಕರು ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ವಿಟ್ಲ ಠಾಣಾ ಇನ್ಸ್ ಪೆಕ್ಟರ್ ಹೆಚ್.ಈ. ನಾಗರಾಜ್ ರವರ ನೇತೃತ್ವದ ಪೊಲೀಸರ ತಂಡ ಘಟನಾ ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದೆ. ಮೃತದೇಹವನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ. ಬೆಳಗ್ಗೆ ಘಟನಾ ಸ್ಥಳಕ್ಕೆ ಆಗಮಿಸಿದ ಎಡಿಷನಲ್ ಎಸ್ಪಿ ಕುಮಾರ ಚಂದ್ರರವರು ಆಗಮಿಸಿದ್ದರು. ಆ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆರವರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.