ಲಕ್ಷ್ಮೀ ದೇವಿ ಬೆಟ್ಟದ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ನವರಾತ್ರಿ ಸಂಭ್ರಮಗಳಿಗೆ ಚಾಲನೆ

0

ಪುತ್ತೂರು: ರೈಲು ನಿಲ್ದಾಣದ ಬಳಿಯ ಕಾರಣಿಕ ಕ್ಷೇತ್ರ ಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಒಂಬತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವ ನವರಾತ್ರಿ ಉತ್ಸವಗಳಿಗೆ ಸೆ.26ರಂದು ಚಾಲನೆ ದೊರೆಯಿತು.


ಬೆಳಿಗ್ಗೆ ಗಣಪತಿ ಹೋಮದೊಂದಿಗೆ ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆಯಿತು. ಬಳಿಕ ನಾಗ ತಂಬಿಲ, ಪಾಷಾಣಮೂರ್ತಿ ಹಾಗೂ ಗುಳಿಗೆ ದೈವಕ್ಕೆ ತಂಬಿಲ, ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಸಂಜೆ ಶ್ರೀಲಕ್ಷ್ಮೀ ದೇವಿ ಭಕ್ತವೃಂದದವರಿಂದ ಭಜನೆ ನಡೆಯಿತು.

ನವರಾತ್ರಿ ಉತ್ಸವದ ಅಂಗವಾಗಿ ಪ್ರತಿ ದಿನ ಬೆಳಿಗ್ಗೆ ನಿತ್ಯಪೂಜೆ, ವಿವಿಧ ಭಜನಾ ಮಂಡಳಿಯವರಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ, ಸಂಜೆ ಭಜನೆ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.
ವಿಶೇಷವಾಗಿ ಸೆ.29ರಂದು ಬೆಳಿಗ್ಗೆ ಮಕ್ಕಳಿಗೆ ಅಕ್ಷರಾಭ್ಯಾಸ, ಅ.1ರಂದು ದೇವರಿಗೆ ಹೊಸ ಅಕ್ಕಿ ನೈವೇದ್ಯ ಸಮರ್ಪಣೆ ನಡೆಯಲಿದೆ.
ಅ.2ಚಂಡಿಕಾ ಯಾಗ: ಕ್ಷೇತ್ರದಲ್ಲಿ ಅ.2ರಂದು ನವರಾತ್ರಿಯಲ್ಲಿ ಪ್ರತಿ ವರ್ಷ ವಿಶೇಷವಾಗಿ ನಡೆಸುವ ಚಂಡಿಕಾಯಾಗ, ಮಧ್ಯಾಹ್ನ ಮಹಾಪೂಜೆ, ದೇವಿ ದರ್ಶನ ನಡೆಯಲಿದೆ.

ಸೆ.4ರಂದು ಸಂಜೆ ಆಯುಧ ಪೂಜೆ ಹಾಗೂ ರಾತ್ರಿ ಭಜನೆ, ಮಹಾಪೂಜೆ ಹಾಗೂ ಪ್ರಸಾದ ವಿತರಣೆಯೊಂದಿಗೆ ನವರಾತ್ರಿ ಉತ್ಸವವು ಸಂಪನ್ನಗೊಳ್ಳಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಐತ್ತಪ್ಪ ಸಪಲ್ಯ ತಿಳಿಸಿದ್ದಾರೆ


LEAVE A REPLY

Please enter your comment!
Please enter your name here