ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ವಾಣಿಜ್ಯ ಚಟುವಟಿಕೆಗಳ ಉದ್ಘಾಟನೆ

0

ದೇಸೀಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ವಿಸ್ತಾರವಾಗಬೇಕು: ಗೋಪಾಲ ಗೌಡ

ಪುತ್ತೂರು: ಸದ್ಯ ದೇಶದಲ್ಲಿ ಪಾಶ್ಚಾತ್ಯ ಆಹಾರ ಸಂಸ್ಕೃತಿಯನ್ನು ಬಲವಂತವಾಗಿ ಹೇರುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಸಾಂಪ್ರದಾಯಿಕವಾದ ಸಾವಯವ ಉತ್ಪನ್ನಗಳನ್ನು ವ್ಯವಸ್ಥಿತವಾಗಿ ಮಾರಾಟ ಮಾಡುವ ನೆಲೆಯಲ್ಲಿ ಪ್ರಯತ್ನಿಸಬೇಕಿದೆ. ಸ್ಥಳೀಯವಾಗಿ ಲಭಿಸುವ ಸಂಪನ್ಮೂಲಗಳನ್ನು ಬಳಸಿಕೊಂಡು, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ವಿವಿಧ ದೇಸೀಯ ಉತ್ಪನ್ನಗಳನ್ನು ತಯಾರಿಸಿ ಜಾಗತಿಕವಾಗಿ ಮಾರುಕಟ್ಟೆ ವಿಸ್ತರಣೆ ಮಾಡುವ ಬಗೆಗೆ ವಾಣಿಜ್ಯ ವಿದ್ಯಾರ್ಥಿಗಳು ಚಿತ್ತ ಹರಿಸಬೇಕು ಎಂದು ಬೆಟ್ಟಂಪಾಡಿ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಗೋಪಾಲ ಗೌಡ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ವಾರ್ಷಿಕ ಚಟುವಟಿಕೆ ಹಾಗೂ ವಾಣಿಜ್ಯ ಪ್ರಯೋಗಾಲಯವನ್ನು ಉದ್ಘಾಟಿಸಿ  ಮಾತನಾಡಿದರು.

ವಾಣಿಜ್ಯ ವಿದ್ಯಾರ್ಥಿಗಳು ಸಮಾಜಮುಖಿಯಾದ ಉತ್ತಮ ಉದ್ಯಮ ನಡೆಸುವ ದೂರದೃಷ್ಟಿಯನ್ನು ಹೊಂದಬೇಕು. ಸ್ಥಳೀಯವಾಗಿ ಲಭಿಸುವ ಗೇರು ಹಣ್ಣು, ಹಲಸಿನ ಹಣ್ಣು ಮೊದಲಾದವುಗಳ ಕಚ್ಚಾವಸ್ತುಗಳನ್ನು ಬಳಸಿಕೊಂಡು ಮೌಲ್ಯವರ್ಧನೆ ಮಾಡಿ ಅವುಗಳು ಹೊಸ ರೀತಿಯಲ್ಲಿ ಗ್ರಾಹಕರನ್ನು ಸೇರುವಂತೆ ಯೋಜನೆ ರೂಪಿಸಬೇಕು. ಈ ಮೂಲಕ ತಾವೂ ಅಭಿವೃದ್ಧಿ ಹೊಂದುವ ಜೊತೆಗೆ ಸಮಾಜದ ಜನತೆ ಆರೋಗ್ಯವಂತ ಜೀವನ ನಡೆಸಲು ಕೊಡುಗೆ ನೀಡಬಹುದು ಎಂದರು.

ಬುದ್ಧಿ ಮತ್ತೆಯ ಜೊತೆಗೆ ಮಾನಸಿಕ ಸದೃಢತೆಯೂ ಅಗತ್ಯ. ಸಣ್ಣ ಪುಟ್ಟ ಸಮಸ್ಯೆಗಳು ಎದುರಾದಾಗ ಚಿಂತಿಸುತ್ತಾ ಕೂರದೆ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಸಬೇಕು. ಜೀವನದಲ್ಲಿ ಹಲವು ಸವಾಲುಗಳನ್ನು ಎದುರಿಸುವ ಸಂದರ್ಭ ಎದುರಾಗಲಿದೆ. ಮುಖ್ಯವಾಗಿ ಕೋಪ ಬಂದಾಗ ಮಾತನಾಡುವುದು, ದುಃಖವಾದಾಗ ನಿರ್ಣಯ ಹೊಂದುವುದು ಹಾಗೂ ಖುಷಿಯಾದಾಗ ಮಾತು ನೀಡುವುದನ್ನು ಮಾಡಬಾರದು ತಾಳ್ಮೆ ಹಾಗೂ ಮೌನವನ್ನು ಶಕ್ತಿಯಾಗಿ ಬಳಸಿಕೊಂಡು ಜೀವನದಲ್ಲಿ ಅಭಿವೃದ್ಧಿ ಹೊಂದಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಭಾರತ ಸನಾತನ ಧರ್ಮದೊಂದಿಗೆ ವಿಶ್ವದಲ್ಲೇ ಮುಂದುವರಿದ ಜ್ಞಾನವನ್ನು ಹೊಂದಿತ್ತು. ಆಧುನಿಕ ಜಗತ್ತಿನಲ್ಲಿ ದೇಶದಲ್ಲಿ ಪಾಶ್ಚಾತ್ಯ ವಿಚಾರಗಳ ಹೇರಿಕೆಯಿಂದ ನಿಧಾನವಾಗಿ ಮತ್ತೆ ಗುಲಾಮಗಿರಿಗೆ ಒಳಗಾಗುವತ್ತ ಸಾಗುತ್ತಿದ್ದೇವೆ. ಎಚ್ಚೆತ್ತುಕೊಂಡು ದೇಶದ ಅಭಿವೃದ್ಧಿಗೆ ಪೂರಕವಾಗುವ ಸುಜ್ಞಾನವನ್ನು ಬೆಳೆಸಿಕೊಳ್ಳುವುದು ಅಗತ್ಯ. ಅಫಘಾನಿಸ್ಥಾನ, ಉತ್ತರ ಕೊರಿಯಾದಂತಹಾ ರಾಷ್ಟ್ರಗಳು ಜ್ಞಾನ, ವಿಜ್ಞಾನ ಹೊಂದಿದ್ದರೂ ಸುಜ್ಞಾನದ ಕೊರತಯಿಂದ ತಮ್ಮನ್ನು ತಾವೇ ವಿನಾಶದತ್ತ ಕೊಂಡೊಯ್ಯುತ್ತಿವೆ ಎಂದರು.

ಕಾಲೇಜಿನ ಪ್ರಾಂಶುಪಾಲ ರಾಕೇಶ್ ಕುಮಾರ್ ಕಮ್ಮಜೆ ಮಾತನಾಡಿ ಸರಿಯಾದ ಕೆಲಸವನ್ನು ಮಾಡುವುದು ಹಾಗೂ ಕೆಲಸವನ್ನು ಸರಿಯಾಗಿ ಮಾಡುವುದು ಬೇರೆ ಬೇರೆ ಸಂಗತಿಗಳು. ವಿಭಾಗವೊಂದು ಸರಿಯಾದ ಕೆಲಸಕ್ಕೆ ಅಡಿಯಿಟ್ಟರೆ ವಿಭಾಗದ ವಿದ್ಯಾರ್ಥಿಗಳು ಆ ಕೆಲಸವನ್ನು ಸರಿಯಾಗಿ ನಿರ್ವಹಿಸುವಲ್ಲಿ ಸಹಕರಿಸಬೇಕು. ಆಗ ವಿಭಾಗ ಯಶಸ್ಸು ಸಾಧಿಸಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ ಅವರು ದ್ವಿತೀಯ ವಾಣಿಜ್ಯ ವಿದ್ಯಾರ್ಥಿ ಅನ್ಮಯ್ ಭಟ್ ರೂಪಿಸಿದ ’ವಾಣಿಜ್ಯ ವಿಕ್ರಮ’ ಲೋಗೋ ಅನಾವರಣಗೊಳಿಸಿ ಮಾತನಾಡಿ, ಸಮಾಜದಲ್ಲಿ ಮತೀಯ ಶಕ್ತಿಗಳು ತಮ್ಮ ಪ್ರಭಾವ ಬೀರುವ ಯತ್ನ ನಡೆಸುತ್ತಿವೆ. ಲೋಗೋ ಹೆಸರಿನಲ್ಲಿ ಹಣ ಗಳಿಸಿ ಅದನ್ನು ರಾಷ್ಟ್ರವಿರೋಧಿ ಕೃತ್ಯಗಳಿಗೆ ಬಳಸುವ ವ್ಯವಸ್ಥಿತ ಸಂಚು ನಡೆದಿದೆ. ಒತ್ತಾಯ ಪೂರ್ವಕವಾಗಿ ಆಹಾರ, ವಾಣಿಜ್ಯ ಹಾಗೂ ವ್ಯವಹಾರ ಕ್ಷೇತ್ರಗಳಲ್ಲಿ ಇದನ್ನು ಹೇರುವ ಯತ್ನ ನಡೆಯುತ್ತಿದೆ. ಈ ಬಗೆಗೆ ಜನತೆಯಲ್ಲಿ ಅರಿವು ಮೂಡಿಸುವ ಕಾರ್ಯವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದರು.

ವೇದಿಕೆಯಲ್ಲಿ ಕಾಲೇಜಿನ ಐಕ್ಯುಎಸಿ ಸಂಯೋಜಕ ಚಂದ್ರಕಾಂತ ಗೋರೆ ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಅನನ್ಯಾ ವಿ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿನಿ ಹರ್ಷಾ ವಾಣಿಜ್ಯ ವಿಭಾಗದ ಶೈಕ್ಷಣಿಕೆ ಚಟುವಟಿಕೆಗಳ ವರದಿ ವಾಚಿಸಿದರು. ವಿದ್ಯಾರ್ಥಿನಿಯರಾದ ತೇಜಸ್ವಿನಿ ಸ್ವಾಗತಿಸಿ, ಶರಣ್ಯಾ ವಂದಿಸಿದರು. ವಿದ್ಯಾರ್ಥಿ ಶಶಾಂಕ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here