ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೀಪಾವಳಿ ಹಬ್ಬ, ಬಲಿ ಉತ್ಸವ ಆರಂಭ : ಭಕ್ತರಿಗೆ ಅವಲಕ್ಕಿ, ತೆಂಗಿನಕಾಯಿ ಪ್ರಸಾದ ವಿತರಣೆ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪತ್ತನಾಜೆಯಂದು ಒಳಗಾದ ದೇವರ ಬಲಿ ಉತ್ಸವ ವಾಡಿಕೆಯಂತೆ ದೀಪಾವಳಿಯ ಅ.24ರಂದು ಸಂಜೆ ಸಂಪ್ರದಾಯದಂತೆ ಆರಂಭಗೊಂಡಿದೆ. ರಾತ್ರಿ ಶ್ರೀ ದೇವರ ಬಲಿ ಹೊರಟು ಧ್ವಜಸ್ತಂಭದ ಬಳಿಯ ಬಲೀಂದ್ರ ಕಂಬದ ಬಳಿ ಹಣತೆ ಬೆಳಗಿಸಿ ಅವಲಕ್ಕಿ ಅರ್ಪಣೆಯ ಮೂಲಕ ಉತ್ಸವ ನಡೆಯಿತು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರೂ ಆಗಿರುವ ಪ್ರಧಾನ ಅರ್ಚಕ ವೇ.ಮೂ.ವಿ.ಎಸ್.ಭಟ್ ಮತ್ತು ವೇ.ಮೂ.ವಸಂತ ಕೆದಿಲಾಯ ಅವರ ನೇತೃತ್ವದಲ್ಲಿ ಉತ್ಸವಾದಿಗಳು ನಡೆಯಿತು.
ಸಂಜೆ ದೇವಳದ ಪ್ರಾಕಾರ ಗುಡಿಗಳಲ್ಲಿ ಹೂವಿನ ಪೂಜೆ ನಡೆಯಿತು. ಬಳಿಕ ದೇವಳದ ನಡೆಯಲ್ಲಿ ಅವಲಕ್ಕಿಯನ್ನು ಸೇರಿನಲ್ಲಿ ಅಳತೆ ಮಾಡುವ ಸಂಪ್ರದಾಯ ನಡೆಯಿತು. ಇದಾದ ಬಳಿಕ ಮಹಾಪೂಜೆ ನಡೆಯಿತು. ಮಹಾಪೂಜೆಯ ಬಳಿಕ ಶ್ರೀ ದೇವರ ಉತ್ಸವದ ಸಂದರ್ಭದಲ್ಲಿ ಬ್ರಹ್ಮವಾಹಕರು ದೇವರ ಉತ್ಸವ ಮೂರ್ತಿಯನ್ನು ಶಿರದ ಮೇಲೆ ಇಡುವ ಮೊದಲು ದೇವಳದ ಧ್ವಜಸ್ಥಂಭದ ಬಳಿಯ ಕೊಡಿಮರದ ಬಳಿ ಹಾಕಿರುವ ಬಲೀಂದ್ರ ಕಂಬದಲ್ಲಿ ಹಣತೆ ಬೆಳಗಿಸಲಾಯಿತು. ಸಾಂಪ್ರದಾಯಿಕ ಮತ್ತು ಪಾರಂಪರಿಕ ಸೇವೆಯಾಗಿ `ಬಲೀಂದ್ರ ಕೂ’ ಎಂದು ಕರೆದ ಬಳಿಕ ಶ್ರೀ ದೇವರ ಮಾಮೂಲು ಉತ್ಸವ ಬಲಿ ನಡೆಯಿತು. ಶ್ರೀ ದೇವರ ವರ್ಷದ ಪ್ರಥಮ ಉತ್ಸವ ನಡೆದ ಬಳಿಕ ಭಕ್ತಾದಿಗಳಿಗೆ ವಸಂತ ಕಟ್ಟೆಯಲ್ಲಿ ಅವಲಕ್ಕಿ ಮತ್ತು ತೆಂಗಿನಕಾಯಿಯ ಪ್ರಸಾದವನ್ನು ನೀಡಲಾಯಿತು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ಶೇಖರ್ ನಾರಾವಿ, ಡಾ.ಸುಧಾ ಎಸ್ ರಾವ್, ಬಿ.ಐತ್ತಪ್ಪ ನಾಯ್ಕ್, ಬಿ.ಕೆ.ವೀಣಾ, ರಾಮ್‍ದಾಸ್ ಗೌಡ, ರಾಮಚಂದ್ರ ಕಾಮತ್, ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಸುಧಾಕರ್ ಶೆಟ್ಟಿ ಸಹಿತ ಸಾವಿರಾರು ಮಂದಿ ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here