ಕನ್ನಡ ಭಾಷೆ ಜಗತ್ತನ್ನೇ ಬೆಳಗುವ ಅದ್ಭುತ ಭಾಷೆ : ಗಣರಾಜ ಕುಂಬ್ಳೆ

0

ಪುತ್ತೂರು:  ಕನ್ನಡ ರಾಜ್ಯ ಸ್ಥಾಪನೆಯಾಗಿರುವುದಕ್ಕೆ ಕೇವಲ ಆಚರಣೆ ಮಾಡಿ ಸಂಭ್ರಮಿಸುವುದಲ್ಲ, ಕನ್ನಡವು ನಮ್ಮ ದೈನಂದಿನ ವ್ಯವಹಾರಗಳಲ್ಲಿ ಬೆರೆತು ನಮ್ಮ ಉಸಿರಾಗಬೇಕು. ಕನ್ನಡ ಭಾಷೆಗೆ ಸುದೀರ್ಘವಾದ ಇತಿಹಾಸವಿದ್ದು ಅತ್ಯಂತ ಫ್ರೌಢವಾದ ಬೆಳವಣಿಗೆಯನ್ನು ಹೊಂದಿರುವ ಭಾಷೆ. ಕನ್ನಡದಲ್ಲಿ ರಚನೆಯಾಗಿರುವ ಮಹಾಕಾವ್ಯಗಳನ್ನು ಅವಲೋಕಿಸಿದಾಗ ನಮಗೆ ನಮ್ಮ ಭಾಷೆಯ ಬಗ್ಗೆ ಗರ್ವವೆನಿಸುತ್ತದೆ ಎಂದು ರಾಮಕುಂಜೇಶ್ವರ ಮಹಾವಿದ್ಯಾಲಯದ ಪ್ರಾಂಶುಪಾಲ ಗಣರಾಜ್ ಕುಂಬ್ಳೆ ಹೇಳಿದರು.

ಅವರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ನ.3ರಂದುಮಾತನಾಡಿದರು.
ಕನ್ನಡ ಸಾಹಿತ್ಯ ಸಾಮ್ರಾಜ್ಯವನ್ನು ಆಳಿದ ಕನ್ನಡದ ಆದಿಕವಿ ಪಂಪ, ರನ್ನ, ಪೊನ್ನ ಕುಮಾರವ್ಯಾಸ, ಲಕ್ಷ್ಮೀಶ ಇವರು ಕನ್ನಡಕ್ಕೆ ನೀಡಿದ ಕೊಡುಗೆ ಅಪಾರ. ವಚನಕಾರ ಅಕ್ಕಮಹಾದೇವಿ, ಅಲ್ಲಮ ಪ್ರಭು, ಜೇಡರ ದಾಸಿಮಯ್ಯ, ಬಸವಣ್ಣ ಅವರು ತಮ್ಮ ವಚನಗಳ ಮೂಲಕ ಕನ್ನಡ ಭಾಷೆಯನ್ನು ಸಮೃದ್ಧಿಗೊಳಿಸಿದರು. ಹಾಗೆಯೇ ದಾಸರ ಕೀರ್ತನೆಗಳು ಕನ್ನಡ ಭಾಷೆಯನ್ನು ಶ್ರೀಮಂತವಾಗಿಸಿವೆ ಎಂದರು.
ನಮ್ಮ ಕನ್ನಡ ನಾಡಲ್ಲಿ ಹುಟ್ಟಿದ ಕವಿಶ್ರೇಷ್ಠರು, ವಚನಕಾರರು, ಸಂತ ಶರಣರು ಕನ್ನಡ ಭಾಷೆಯ ಮೂಲಕ ಜ್ಞಾನದ ಬೆಳಕನ್ನು ಜಗತ್ತಿಗೆ ಪಸರಿಸಿದ್ದಾರೆ. ಇಂತಹ ಅಮೋಘ ಹಿನ್ನಲೆಯಿರುವ ಭಾಷೆಯನ್ನು ನಾವು ಬಳಸಿ, ಬೆಳೆಸಿ, ಉಳಿಸಬೇಕು ಮತ್ತು ಮುಂದಿನ ಪೀಳಿಗೆಗೆ ಈ ಭಾಷೆಯ ಸೌರಭವನ್ನು ಸ್ವಲ್ಪವು ಕಳೆಗುಂದದಂತೆ ಹಸ್ತಾಂತರಿಸಬೇಕು ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಮಣ್ಯ ನಟ್ಟೋಜ ಮಾತನಾಡಿ ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಇರುವ ಸೊಬಗು ಇತರ ಯಾವ ಭಾಷೆಗೂ ಇಲ್ಲ. ಕನ್ನಡ ಭಾಷೆಯು ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ರಚನೆಯಾಗಿದ್ದು ಸಂಸ್ಕೃತದ ಕ್ಲಿಷ್ಟವಾದ ಶ್ಲೋಕಗಳನ್ನು ಓದುವ ಸಾಮರ್ಥ್ಯ ಕನ್ನಡಿಗನಿಗಿದೆ. ಬನವಾಸಿ ಕನ್ನಡದ ಪ್ರಥಮ ರಾಜಧಾನಿಯಾಗಿದ್ದು ಬನವಾಸಿಯಲ್ಲಿ ಮೈನವಿರೇಳಿಸುವ ಕನ್ನಡದ ಶಿಲ್ಪಕಲೆಗಳು ನಿರ್ಮಾಣವಾಗಿವೆ. ಇಂದಿನ ಆಧುನಿಕ ವಿದ್ಯಾಮಾನಗಳನ್ನು ಬಿತ್ತರಿಸುವ ಕನ್ನಡ ವಾರ್ತವಾಹಿನಿಗಳು ಕನ್ನಡದ ಕಗ್ಗೋಲೆಯನ್ನು ಮಾಡುತ್ತಿವೆ. ಕನ್ನಡವು ತನ್ನ ಭಾಷಾ ಶುದ್ಧತೆಯನ್ನು ಕಳೆದುಕೊಂಡು ಆಂಗ್ಲ ಭಾಷೆಯ ಮೋಹಕ್ಕೆ ಸಿಲುಕಿ ಕಂಗ್ಲೀಷ್ ಆಗಿ ವಿರಾಜಿಸುತ್ತಿದೆ ಎಂದರು.
ಭಾಷಾ ದುರಭಿಮಾನ ಬೆಳೆದರೆ ಮುಂದಿನ ಜನಾಂಗ ಕನ್ನಡ ಪದಗಳನ್ನು ಬೇರೆ ಭಾಷೆಯಿಂದ ಹುಡುಕಿ ತೆಗೆಯುವ ಅಗತ್ಯತೆ ಬರಬಹುದು ಹಾಗೂ ಕನ್ನಡ ಭಾಷೆಯನ್ನು ಬಳಸುವವರೆ ಇಲ್ಲದೆ ಅದು ಕಣ್ಮರೆಯಾಗಬಹುದು. ಆದ್ದರಿಂದ ಇಂದಿನ ಸಮಾಜಕ್ಕೆ ಸ್ವಾಭಿಮಾನಿ ಕನ್ನಡಿಗನ ಅಗತ್ಯವಿದೆ. ನಾವು ದೈನಂದಿನ ವ್ಯವಹಾರಗಳಲ್ಲಿ ಹೆಚ್ಚು ನಮ್ಮ ಕನ್ನಡ ಭಾಷೆಯನ್ನು ಬಳಸಿ ಅದನ್ನು ಸಮೃದ್ಧಗೊಳಿಸಬೇಕು. ನಾವು ಯಾವುದೇ ಭಾಷೆಯನ್ನು ಕಲಿತರೂ ಎಲ್ಲೇ ಉದ್ಯೋಗ ಅರಸಿ ಹೋದರೂ ನಾವು ಎಂದೆಂದಿಗೂ ಕನ್ನಡಿಗರಾಗಿಯೇ ಇರಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಸುಚಿತ್ರಾ ಪ್ರಭು, ಉಪಪ್ರಾಂಶುಪಾಲ ಗಣೇಶ್ ಪ್ರಸಾದ್ ಡಿ ಎಸ್. ಹಾಗೂ ಉಪನ್ಯಾಸಕ, ಉಪನ್ಯಾಸಕೇತರ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಥಮ ಪಿಯುಸಿ ವಿದ್ಯಾರ್ಥಿನಿ ಶ್ರಾವ್ಯ ಪಾರ್ಥಿಸಿದರು. ಕನ್ನಡ ಪ್ರಾಧ್ಯಪಕ ಸತೀಶ್ ಇರ್ದೆ ಸ್ವಾಗತಿಸಿ, ರಸಾಯನ ಶಾಸ್ತ್ರ ಉಪನ್ಯಾಸಕಿ ಸುಚೇತ ರತ್ನ ವಂದಿಸಿದರು. ವಿದ್ಯಾರ್ಥಿನಿ ಅಂಶಿತಾ ನಿರೂಪಿಸಿದರು.

LEAVE A REPLY

Please enter your comment!
Please enter your name here