ಪುತ್ತೂರು :ಸಾಲ್ಮರ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಗಳ ಅಧೀನದ ದಾರುಲ್ ಫಲಾಹ್ ಮದ್ರಸ ವಿದ್ಯಾರ್ಥಿಗಳ ರಬೀಅ ಪ್ರಯುಕ್ತ ಕಲಾ ಪ್ರತಿಭಾ ಕಾರ್ಯಕ್ರಮ ಶಾಲಾ ಮೈದಾನದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯು. ಮುಹಮ್ಮದ್ ಹಾಜಿಯವರು ಪ್ರವಾದಿಯವರ ಶಾಂತಿಯ ಸಂದೇಶದ ಬಗ್ಗೆ ವಿವರಿಸಿದರು. ಸಂಸ್ಥೆಯ ಸಂಚಾಲಕ ಹಾಜಿ ಮುಹಮ್ಮದ್ ಸಾಬ್ ಕಾರ್ಯಕ್ರಮ ಉದ್ಗಾಟಿಸಿ ಪ್ರವಾದಿಯವರು ಕಲಿಸಿ ಕೊಟ್ಟ ಬದುಕಿನ ಶಿಸ್ತಿನ ಬಗ್ಗೆ ವಿವರಿಸಿದರು. ಸಂಸ್ಥೆಯ ಪ್ರಾಂಶುಪಾಲ ಮುಸ್ತಫಾ ಮುಖ್ಯ ಭಾಷಣ ಮಾಡಿ ಪ್ರವಾದಿ ಬದುಕು, ಬೊಧನೆಯ ಬಗ್ಗೆ ವಿವರಿಸಿದರು.
ಮೌಂಟನ್ ವ್ಯೂ ದಾರುಲ್ ಫಲಾಹ್ ಮದ್ರಸ ವಿದ್ಯಾರ್ಥಿಗಳಿಂದ ಬುರ್ಧಾ ಮತ್ತು ವಿವಿಧ ಸಾಹಿತ್ಯ ಕಲಾ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಅಝಾದ್, ಟ್ರಸ್ಟ್ ಸದಸ್ಯ ಯು.ಅಬ್ದುಲ್ಲಾ ಹಾಜಿ, ಉದ್ಯಮಿ ಝಕರಿಯಾ ಮಾಂತೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರತಿಭಾ ಪ್ರದರ್ಶನದಲ್ಲಿ ಭಾಗವಹಿಸಿದ್ದ ಹಾಗೂ ವಿವಿಧ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅಶ್ರಫ್, ಯೂಸುಫ್ ವಿವಿಧ ಕಾರ್ಯಕ್ರಮಗಳಲ್ಲಿ ಸಹಕರಿಸಿದರು. ಸಂಸ್ಥೆಯ ಶಿಕ್ಷಕ ಶಿಕ್ಷಕಿಯರು, ಶಿಕ್ಷಕೇತರ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉದ್ಯಮಿ ಝಕರಿಯಾ ಮಾಂತೂರು ಪ್ರಾಯೋಜಕತ್ವದಲ್ಲಿ ಸಿಹಿತಿಂಡಿ ವಿತರಿಸಲಾಯಿತು. ಉಸ್ತಾದ್ ಕೆ.ಎಂ.ಎ. ಕೊಡುಂಗಾಯಿ ಫಾಝಿಲ್ ಹನೀಫಿ ಸ್ವಾಗತಿಸಿ ಶಾಲಾ ಶಿಕ್ಷಕ ರವೂಫ್ ಮತ್ತು ಮದ್ರಸ ಶಿಕ್ಷಕ ನಝೀರ್ ಅರ್ಶದಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿ ಶೀಸ್ ಕಿರಾಅತ್ ಪಠಿಸಿದರು. ಶಾಲಾ ಶಿಬ್ಬಂದಿ ಹಮೀದ್ ವಂದಿಸಿದರು.