ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾ|ಘಟಕದ ಚುನಾವಣೆ ಹಿನ್ನೆಲೆ:ಚುನಾವಣಾ ಮೇಲುಸ್ತುವಾರಿಗಳಿಂದ ಮತದಾನದ ನಿಯಮಗಳ ಬಗ್ಗೆ ಮಾಹಿತಿ

0

 8 ಮಂದಿ ಸದಸ್ಯರಿದ್ದು, ಪುತ್ತೂರು ಪತ್ರಕರ್ತರ ಸಂಘದ ಹೆಸರಿನಲ್ಲಿ ಆಯ್ಕೆ ನಡೆದಿದೆ -ಸಿದ್ದೀಕ್ ನೀರಾಜೆ
 ಪರ್ಯಾಯ ಸಂಘದವರು ಮತದಾರರಾಗಿದ್ದು, ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ-ಲೋಕೇಶ್ ಬನ್ನೂರು
 ಪುತ್ತೂರು ಸಂಘದ ನೋಂದಾವಣೆ ನವೀಕರಣ ಆಗಿಲ್ಲ, ಅಸ್ತಿತ್ವದಲ್ಲಿ ಇದೆಯೋ?ಇಲ್ಲವೋ?-ಪುಷ್ಪರಾಜ್
 ಗೆದ್ದರೂ, ಸೋತರೂ ಸಂಘದ ವಿರುದ್ಧ ಹೋದರೆ ಸದಸ್ಯತ್ವತನ ರದ್ಧು ಮಾಡಬಹುದು-ರಮೇಶ್ ಕುಟ್ಟಪ್ಪ
 ಈ ಸಂಘ ಚಾಲೂ ಆದ ಬಳಿಕ ಸಂಘದ ಪ್ರಕ್ರಿಯೆ ಆರಂಭಗೊಳ್ಳುತ್ತದೆ-ಎನ್. ರವಿಕುಮಾರ್

ಪುತ್ತೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ಚುನಾವಣೆಯು ಡಿ.೫ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಮತದಾನದ ಕುರಿತು ಮಾಹಿತಿ ನೀಡುವ ನಿಟ್ಟಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಚುನಾವಣಾ ಮೇಲುಸ್ತುವಾರಿಯಾಗಿ ನಿಯೋಜನೆಗೊಂಡಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಮೇಶ್ ಕುಟ್ಟಪ್ಪ ಮತ್ತು ನಿಕಟಪೂರ್ವ ರಾಜ್ಯ ಸಹಾಯಕ ಚುನಾವಣಾಧಿಕಾರಿ ಎನ್.ರವಿಕುಮಾರ್ ಅವರು ಡಿ.3ರಂದು ಪುತ್ತೂರು ನಿರೀಕ್ಷಣಾ ಮಂದಿರದಲ್ಲಿ ಅರ್ಹ ಮತದಾರರಿಗೆ ಮತ್ತು ಕಣದಲ್ಲಿರುವ ಸ್ಪರ್ಧಿಗಳಿಗೆ ಮಾಹಿತಿ ನೀಡಿದರು.


ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿ ಸ್ಥಾನಗಳಿಗೆ ಈಗಾಗಲೇ ಅವಿರೋಧ ಆಯ್ಕೆಯಾಗಿದ್ದು, ಉಳಿದಿರುವ ಪ್ರಧಾನ ಕಾರ್ಯದರ್ಶಿ, ಕೋಶಾಧಿಕಾರಿ ಹಾಗೂ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಸಲು ಆಗಮಿಸಿದ ಚುನಾವಣಾ ಮೇಲುಸ್ತುವಾರಿಗಳಾದ ರಮೇಶ್ ಕುಟ್ಟಪ್ಪ ಹಾಗೂ ಎನ್.ರವಿಕುಮಾರ್ ಅವರು ಆರಂಭದಲ್ಲಿ ಕಣದಲ್ಲಿರುವ ಅಭ್ಯರ್ಥಿಗಳ ಹಾಗೂ ಮತದಾರರ ಅಭಿಪ್ರಾಯ ಪಡೆದು ಮಾತನಾಡಿದರು.

ಸಂಘಟನಾತ್ಮಕವಾಗಿ ಇರಬೇಕು: ನಿಕಟಪೂರ್ವ ರಾಜ್ಯ ಸಹಾಯಕ ಚುನಾವಣಾಧಿಕಾರಿ ಎನ್.ರವಿಕುಮಾರ್ ಅವರು ಮಾತನಾಡಿ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆದಷ್ಟು ಅವಿರೋಧ ಆಯ್ಕೆ ಆಗುವಂತೆ ನೋಡುವುದು ಉತ್ತಮ. ಎಲ್ಲರೂ ಸಂಘಟನಾತ್ಮಕವಾಗಿ ಇರಬೇಕು. ಕಾರ್ಯಕಾರಿ ಸಮಿತಿಯಲ್ಲಿ 8 ಸ್ಥಾನ ಇದೆ. ಆದರೆ 10 ಮಂದಿ ಸ್ಪರ್ಧಿಗಳಿದ್ದಾರೆ. ಇಂತಹ ಸಂದರ್ಭದಲ್ಲಿ ಇಬ್ಬರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡುವ ಮೂಲಕ ಅವಿರೋಧ ಆಯ್ಕೆಗೆ ಅವಕಾಶ ಇದೆ. ಈ ಬಗ್ಗೆ ತಮ್ಮೊಳಗೆ ಮಾತುಕತೆ ನಡೆಸಬಹುದು. ಉಳಿದಿರುವ ಸ್ಥಾನಗಳಿಗೂ ತಮ್ಮ ಅಧಿಕಾರವಧಿಯನ್ನು ಹಂಚಿಕೊಳ್ಳಲು ಅವಕಾಶವಿದೆ ಎಂದರು.

ಭಿನ್ನಾಭಿಪ್ರಾಯ ಇದ್ದರೆ ಮಾತುಕತೆ ಮೂಲಕ ಇತ್ಯರ್ಥ ಮಾಡಬೇಕು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಮೇಶ್ ಕುಟ್ಟಪ್ಪ ಅವರು ಮಾತನಾಡಿ, ಒಬ್ಬೊಬ್ಬರಿಗೆ ಒಂದೊಂದು ಶಕ್ತಿ ಇರುತ್ತದೆ. ಅವರ ಪ್ರತಿಭೆಗಳು ಸಂಘಕ್ಕೆ ಅವಶ್ಯಕತೆ ಇದೆ. ಅವರನ್ನು ಸಕ್ರಿಯವಾಗಿ ತೊಡಗಿಸಿಕೊಂಡಲ್ಲಿ ಸಂಘಟನೆ ಬೆಳೆಯುತ್ತದೆ. ಮೂರು ವರ್ಷದ ಅವಧಿಯಲ್ಲಿ ವೃತ್ತಿಗೆ ಸಂಬಂಧಿಸಿದ ಕಾರ್ಯಗಾರ, ಸಂವಾದ, ಸಮಾಜದ ಸಮಸ್ಯೆಗಳ ಕುರಿತ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮ ಆಯೋಜನೆ ಮಾಡಬಹುದು. ಇವೆಲ್ಲವೂ ಈಗಾಗಲೇ ಅವಿರೋಧವಾಗಿ ಆಯ್ಕೆಗೊಂಡ ಸಿದ್ದೀಕ್ ಅವರ ಕೈಯಲ್ಲಿದೆ. ಸದಸ್ಯರ ಒಮ್ಮತದ ನಿರ್ಧಾರದಿಂದ ಸಂಘ ಬಲಿಷ್ಠವಾಗಿ ರೂಪುಗೊಳ್ಳಲು ಸಾಧ್ಯವಿದೆ. ಸಂಘದ ಸದಸ್ಯರೆಲ್ಲರೂ ತೊಡಗಿಸಿಕೊಳ್ಳುವ ಹಾಗೆ ಮಾಡಬೇಕು ಎಂದರು. ಹಿಂದೆ ದ.ಕ. ಜಿಲ್ಲೆಯ ಬಹುತೇಕ ಸದಸ್ಯರು ರಾಜ್ಯಮಟ್ಟದಲ್ಲಿ ನಡೆಯುವ ಸಭೆಗೆ ಬರುತ್ತಿರಲಿಲ್ಲ. ಶ್ರೀನಿವಾಸ ನಾಯಕ್ ಇಂದಾಜೆ ಅವರು ಅಧ್ಯಕ್ಷರಾದ ಬಳಿಕ ಇವತ್ತು ಮಾದರಿ ಸಂಘವಾಗಿದೆ. ದ.ಕ.ಜಿಲ್ಲೆಯಲ್ಲಿ ರಾಜ್ಯ ಸಮ್ಮೇಳನ ಮಾಡಲಾಗಿದೆ. ಇದರಿಂದಾಗಿ ಗ್ರಾಮಕ್ಕೆ ದೊಡ್ಡ ಮಟ್ಟದ ಅನುದಾನ ತರುವ ಕೆಲಸ ಆಗಿದೆ. ಪುತ್ತೂರು ಸಂಘ ಪರಿಣಾಮಕಾರಿಯಾಗಿ ಬೆಳೆಯಲಿ, ಸದಾ ಒಳ್ಳೆಯ ಕೆಲಸ ಮಾಡಲಿ ಎಂದು ಬಯಸುತ್ತೇನೆ. ಯಾವುದೇ ಭಿನ್ನಾಭಿಪ್ರಾಯ ಇದ್ದರೂ ಮಾತುಕತೆ ಮೂಲಕ ಇತ್ಯರ್ಥ ಮಾಡಲು ಸಾಧ್ಯವಿದೆ. ನಮ್ಮಲ್ಲಿ ದ್ವೇಷ ಇದ್ದರೆ ಅದು ಸಂಘರ್ಷಕ್ಕೆ ಆಸ್ಪದ ಆಗುತ್ತದೆ. ನಾವು ಬೇರೆ ಬೇರ ಪತ್ರಿಕೆಯಲ್ಲಿ ಕೆಲಸ ಮಾಡುವವರು. ನಮ್ಮ ವಿಚಾರಧಾರೆ ಬೇರೆ ಬೇರೆ ಇರುತ್ತದೆ. ನಮ್ಮ ವಿಚಾರ ಸಂಘಟನೆ ಮುನ್ನಡೆಸಲು ಬಳಕೆಯಾಗಬೇಕು ವಿನಃ ಇನ್ನೊಬ್ಬರನ್ನು ಹತ್ತಿಕ್ಕಲು ಧ್ವನಿಯಾಗಬಾರದು. ನಾವು ಸಮಾಜಕ್ಕೆ ಮಾದರಿಯಾಗುವ, ರಾಜ್ಯಮಟ್ಟದ ಕಾರ್ಯಕ್ರಮ ಪುತ್ತೂರಿನಲ್ಲಿ ಮಾಡುವ ಮೂಲಕ ರಾಜ್ಯವನ್ನು ಪುತ್ತೂರಿಗೆ ಸೆಳೆಯುವಂತೆ ಮಾಡುವ ಎಂದರು.

ಇವತ್ತು, ನಾಳೆಯೊಳಗೆ ಮಾತುಕತೆಗೆ ಅವಕಾಶವಿದೆ: ಸಹಾಯಕ ಚುನಾವಣಾಧಿಕಾರಿ ಗಂಗಾಧರ ಕಲ್ಲಪಳ್ಳಿಯವರು ಮಾಹಿತಿ ನೀಡಿ, ಚುನಾವಣೆಯು ಡಿ.೫ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ತನಕ ನಡೆಯಲಿದೆ. ಬಳಿಕ 15 ನಿಮಿಷದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಬ್ಯಾಲೆಟ್ ಪೇಪರ್, ಗುರುತು ಮಾಡುವ ಬಗ್ಗೆ ಸರ್ವೇಶ್, ನಝೀರ್ ಕೊಲ, ದೀಪಕ್ ಅವರು ಪ್ರಸ್ತಾಪಿಸಿದರು. ಉತ್ತರಿಸಿದ ನಿಕಟಪೂರ್ವ ರಾಜ್ಯ ಸಹಾಯಕ ಚುನಾವಣಾಧಿಕಾರಿ ಎನ್.ರವಿಕುಮಾರ್ ಅವರು, ಮೂರು ಕಲರ್ ಬ್ಯಾಲೆಟ್ ಪೇಪರ್ ಇದೆ. ಅಭ್ಯರ್ಥಿಯ ಹೆಸರಿಗೆ ಗುರುತು ಮಾಡಬೇಕು ಮತ್ತು ಪ್ರತಿ ಮತ ಪತ್ರವನ್ನು ಮಡಚಿ ಕೊಡಲಾಗುತ್ತದೆ. ಎಲ್ಲಾ ಮತಗಳನ್ನು ಒಂದೇ ಮತಪೆಟ್ಟಿಗೆಗೆ ಹಾಕಲಾಗುವುದು. ಮಧ್ಯಾಹ್ನ 12 ಗಂಟೆಯ ವೇಳೆಗೆ 100 ಶೇ.ಮತದಾನ ಆಗಿದ್ದರೆ ಅಭ್ಯರ್ಥಿಗಳು ಮತ್ತು ಚುನಾವಣಾಧಿಕಾರಿಗಳ ಅನುಮತಿಯಂತೆ ಮತ ಎಣಿಕೆಯನ್ನು ಆಗಲೇ ಮಾಡಲಾಗುವುದು. ಅಭ್ಯರ್ಥಿ ಚುನಾವಣಾ ಕಣದಿಂದ ನಿವೃತ್ತಿ ಘೋಷಣೆ ಮಾಡಿದರೂ ಆತನಿಗೆ ಒಂದು ಮತ ಬಿದ್ದರೂ ಅದು ಲೆಕ್ಕಕ್ಕೆ ಬರುತ್ತದೆ. ಹಾಗಾಗಿ ಸೋಲು ಗೆಲುವಿನಲ್ಲಿ ವೈಷಮ್ಯ ಬರಬಾರದು ಎಂಬ ನಿಟ್ಟಿನಲ್ಲಿ ಮಾತುಕತೆ ನಡೆಸಿ. ಮನಸ್ತಾಪಗಳಿಗೆ ಅವಕಾಶ ಆಗಬಾರದು ಎಂಬುದು ಪ್ರಥಮ ಆದ್ಯತೆಯಾಗಿದೆ. ಒಮ್ಮತದ ಆಯ್ಕೆಗೆ ಮಾತುಕತೆ ನಡೆಸಿದರೆ ಉತ್ತಮ. ನಾಳೆ ಸಂಜೆಯವರೆಗೂ ಸಮಯಾವಕಾಶವಿದೆ ಎಂದರು.

ಜಿಲ್ಲಾ ಸಂಘದ ಕೋಶಾಧಿಕಾರಿ ಪುಷ್ಪರಾಜ್, ಉಪಾಧ್ಯಕ್ಷ ಭಾಸ್ಕರ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುತ್ತೂರು ಸಂಘದ ನೂತನ ಅಧ್ಯಕ್ಷ ಸಿದ್ದೀಕ್ ನಿರಾಜೆ, ಅಧ್ಯಕ್ಷ ಸ್ಥಾನದಿಂದ ನಾಮಪತ್ರ ಹಿಂಪಡೆದಿದ್ದ ಶ್ರವಣ್ ಕುಮಾರ್ ನಾಳ, ಉಪಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಎಂ.ಎಸ್.ಭಟ್, ಕಾರ್ಯದರ್ಶಿಯಾಗಿ ಆಯ್ಕೆಗೊಂಡಿರುವ ಮಹಮ್ಮದ್ ನಝೀರ್ ಕೊಯಿಲ, ಕಣದಲ್ಲಿರುವ ಅಭ್ಯರ್ಥಿಗಳಾದ ಲೋಕೇಶ್ ಬನ್ನೂರು, ಶೇಖ್ ಜೈನುದ್ದೀನ್, ಉಮಾಪ್ರಸಾದ್ ನಡುಬೈಲು, ಸದಸ್ಯ ದೀಪಕ್ ಉಪ್ಪಿನಂಗಡಿ ಉಪಸ್ಥಿತರಿದ್ದರು.

ಸಂಘಕ್ಕೆ ಪರ್ಯಾಯವಾದ ಸಂಘಟನೆಯಲ್ಲಿದ್ದರೆ ಸದಸ್ಯತ್ವ ರದ್ದು

ಜಿಲ್ಲಾ ಸಂಘದ ಅಡಿಯಲ್ಲಿ ಚುನಾವಣೆ ನಡೆಯುತ್ತಿರುವಾಗಲೇ ಪುತ್ತೂರಿನಲ್ಲಿ ಪರ್ಯಾಯವಾಗಿ ಸಂಘದ ಅಧ್ಯಕ್ಷ, ಪದಾಧಿಕಾರಿಗಳ ಘೋಷಣೆ ಮಾಡಲಾಗಿದೆ. ಅದರಲ್ಲಿ ಪದಾಧಿಕಾರಿಗಳಾದವರು ಈ ಸಂಘದ ಚುನಾವಣೆಯಲ್ಲೂ ಮತದಾರರು ಮತ್ತು ಸ್ಪರ್ಧಿಗಳೂ ಆಗಿದ್ದಾರೆ ಎಂದು ಲೋಕೇಶ್ ಬನ್ನೂರು ಪ್ರಸ್ತಾಪಿಸಿದರು. ಶೇಖ್ ಜೈನುದ್ದೀನ್ ಧ್ವನಿಗೂಡಿಸಿದರು. ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಸಿದ್ಧೀಕ್ ನೀರಾಜೆ ಅವರು ಮಾತನಾಡಿ, ಈ ಸಂಘದಲ್ಲಿ 32 ಮಂದಿ ಸದಸ್ಯರಿದ್ದಾರೆ. ಅವತ್ತು ಬರೇ 8 ಮಂದಿ ಸದಸ್ಯರಿದ್ದು ಆಯ್ಕೆ ಪ್ರಕ್ರಿಯೆ ನಡೆದಿದೆ. ಅದು ಪುತ್ತೂರು ಪತ್ರಕರ್ತರ ಸಂಘ ಎಂಬ ಹೆಸರಿನಲ್ಲಿದೆ. ಅದು ಮೊದಲೇ ಇದ್ದ ಸಂಘಟನೆ. ಆದರೆ ಅವರೆಲ್ಲರೂ ಜಿಲ್ಲಾ ಸಂಘದ ಸದಸ್ಯರೂ ಆಗಿದ್ದಾರೆ. ಪುತ್ತೂರಿನಲ್ಲಿ ಈ ಹಿಂದೆ ರಾಜ್ಯ ಸಂಘದ ಘಟಕ ಇರಲಿಲ್ಲ ಎಂದು ಸ್ಪಷ್ಟನೆ ನೀಡಿದರು.

ಈಗ ಅಧಿಕೃತವಾಗಿ ಪುತ್ತೂರಿನಲ್ಲಿ ರಾಜ್ಯ ಮತ್ತು ಜಿಲ್ಲಾ ಸಂಘದ ಅಡಿಯಲ್ಲೇ ಸಂಘದ ಚುನಾವಣೆ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಆ ಸಂಘ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ವಿಚಾರವೂ ಸಭೆಯಲ್ಲಿ ಪ್ರಸ್ತಾಪಗೊಂಡಿತು. ಇದಕ್ಕೆ ಉತ್ತರಿಸಿದ ನಿಕಟಪೂರ್ವ ರಾಜ್ಯ ಸಹಾಯಕ ಚುನಾವಣಾಧಿಕಾರಿ ಎನ್.ರವಿಕುಮಾರ್ ಅವರು, ಈ ಸಂಘ ಚಾಲೂ ಆದ ಬಳಿಕ ಸಂಘದ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಪತ್ರಕರ್ತ ಸಂಘಟನೆಗೆ ಪರ್ಯಾಯವಾಗಿ ತಾಲೂಕಿನಲ್ಲಿ ಬೇರೆ ಸಂಘ ಇರಕೂಡದು ಎಂದು ಇಲ್ಲಿ ನಿರ್ಣಯ ಮಾಡಬೇಕು. ಅದನ್ನು ಜಿಲ್ಲೆಗೆ ಅಲ್ಲಿಂದ ರಾಜ್ಯಕ್ಕೆ ಕಳುಹಿಸಬೇಕು. ಸದಸ್ಯರುಗಳಿಗೆ ಪ್ರಥಮವಾಗಿ ನೋಟೀಸ್ ಕೊಡಬೇಕು. ಈ ಸಂಘಟನೆಯಲ್ಲಿ ಇರಬೇಕಾದರೆ ಬೇರೆ ಯಾವ ಪರ್ಯಾಯ ಸಂಘಟನೆಯಲ್ಲಿ ಇರಕೂಡದು ಎಂದು ನಿರ್ಣಯ ಮಾಡಬೇಕು. ಮತ್ತೂ ಅವರು ಕೇಳದೆ ಬೇರೆಯೇ ಹೋಗುತ್ತಿದ್ದಾರೆ ಎಂದಾದರೆ ಇಲ್ಲಿ ನಿರ್ಣಯ ಮಾಡಿ ಜಿಲ್ಲಾ ಸಂಘಕ್ಕೆ ಕಳುಹಿಸಬೇಕು. ಬಳಿಕ ಅಲ್ಲಿ ಕಾರಣ ನೀಡಿ ಅವರನ್ನು ಕೈ ಬಿಡಬಹುದು ಎಂದರು. ಜಿಲ್ಲಾ ಸಂಘದ ಕೋಶಾಧಿಕಾರಿ ಪುಷ್ಪರಾಜ್ ಅವರು ಮಾತನಾಡಿ, ಪುತ್ತೂರಿನ ಸಂಘದ ಬಗ್ಗೆ ಪರಿಶೀಲನೆ ಮಾಡಿದಾಗ ಅದು ನೋಂದಾವಣೆ ನವೀಕರಣ ಆಗಿಲ್ಲ. ಹಾಗಾಗಿ ಅದು ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ ಎಂದು ನೋಡಬೇಕು. ಅದೂ ಅಲ್ಲದೆ ಅದು ಹಿಂದೆ ರಾಜ್ಯ ಸಂಘದ ಜೊತೆಯೂ ಇರಲಿಲ್ಲ ಎಂದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಮೇಶ್ ಕುಟ್ಟಪ್ಪ ಅವರು ಮಾತನಾಡಿ ಹಾಗಿದ್ದರೆ ಪ್ರಸ್ತುತ ಅವರು ಈ ಚುನಾವಣೆಯಲ್ಲಿ ಭಾಗವಹಿಸಿದ್ದರೆ ಅವರು ಈ ಸಂಘದ ಬೈಲಾ ಒಪ್ಪಿಕೊಂಡಂತಾಯಿತು. ಒಂದು ವೇಳೆ ಅವರು ಗೆದ್ದರೂ, ಸೋತರೂ ಮುಂದೆ ಅವರು ಸಂಘದ ಚಟುವಟಿಕೆಗಳಿಗೆ ವಿರುದ್ಧವಾಗಿ ಹೋಗುತ್ತಾರೆ ಎಂದಾದರೆ ಸದಸ್ಯತ್ವ ರದ್ದು ಮಾಡಬಹುದು ಎಂದರು.

LEAVE A REPLY

Please enter your comment!
Please enter your name here