ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿಂದ ಫ್ಯಾಕಲ್ಟಿ ಡೆವಲಪ್ಮೆಂಟ್ ಕಾರ್ಯಕ್ರಮ

0

ಮೌಲ್ಯಗಳು ಪ್ರತಿಯೊಬ್ಬನ ಬದುಕಿಗೂ ಆಧಾರ ಸ್ತಂಭಗಳು : ಡಾ. ಗುರುರಾಜ ಕರಜಗಿ

ಪುತ್ತೂರು: ಬುದ್ಧಿಗೆ ಬೋಧಕವಾದ ವಿಚಾರಗಳು ಅಲ್ಪ ಸಮಯ ಮಾತ್ರ ಉಳಿದುಕೊಳ್ಳುತ್ತವೆ. ಆದರೆ ಮನಸ್ಸಿಗೆ ಬೋಧಕವಾದ ವಿಚಾರ ಶಾಶ್ವತವಾಗಿ ಉಳಿದುಕೊಳ್ಳುತ್ತದೆ. ಆದ್ದರಿಂದ ಮನಸ್ಸಿನಲ್ಲಿ ಅಚ್ಚೊತ್ತಬಹುದಾದ ಜೀವನಮೌಲ್ಯಗಳು ಪ್ರತಿಯೊಬ್ಬನಿಗೂ ಅತ್ಯಂತ ಅಗತ್ಯ. ಎಲ್ಲರ ಜೀವನದಲ್ಲೂ ಮೌಲ್ಯಗಳು ಮಹತ್ವದ ಪಾತ್ರವಹಿಸುತ್ತದೆ. ಅವುಗಳೇ ಬದುಕಿಗೆ ಆಧಾರ ಸ್ತಂಭಗಳಾಗಿವೆ. ನುಡಿದಂತೆ ನಡೆಯುವ, ನಡೆವಂತೆ ನುಡಿಯುವ ವ್ಯಕ್ತಿತ್ವ ಎಲ್ಲರಿಂದಲೂ ಗೌರವಕ್ಕೆ ಪಾತ್ರವಾಗುತ್ತದೆ ಎಂದು ಶಿಕ್ಷಣ ತಜ್ಞ, ಹಿರಿಯ ಪ್ರಾಧ್ಯಾಪಕ ಡಾ.ಗುರುರಾಜ ಕರಜಗಿ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಸಿ.ಬಿ.ಎಸ್.ಇ ವಿದ್ಯಾಲಯದ ಆವರಣದಲ್ಲಿರುವ ಶ್ರೀ ಶಂಕರ ಸಭಾವನದಲ್ಲಿ ಶನಿವಾರದಂದು ಬೋಧಕ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮೌಲ್ಯಗಳನ್ನು ಬೋಧಿಸುವುದಕ್ಕೆ ಸಾಧ್ಯವಿಲ್ಲ. ರಾಂಕ್ ಗಳಿಸಿದ ತಕ್ಷಣ ಮೌಲ್ಯಗಳು ರೂಢಿಯಾಗಬೇಕಿಲ್ಲ. ಹಾಗಾಗಿ ಮೌಲ್ಯಗಳಿಗಾಗಿ ತುಡಿಯುವ, ಅವುಗಳನ್ನು ಬದುಕಿನಲ್ಲಿ ಅಳವಡಿಸುವ ಕಾರ್ಯವನ್ನು ಪ್ರತಿಯೊಬ್ಬನೂ ಮಾಡಬೇಕಿದೆ ಎಂದರಲ್ಲದೆ ಸಂಪರ್ಕವೇ ಸಂಬಂಧವೆನಿಸಿಕೊಳ್ಳುವುದಿಲ್ಲ. ಸಂಬಂಧಗಳ ಅರ್ಥವ್ಯಾಪ್ತಿ ವಿಶಾಲವಾದದ್ದು. ಸಂಬಂಧ ಪ್ರೀತಿಯ ಆಧಾರದಲ್ಲಿ ಬೆಳೆಯುತ್ತದೆ. ಸಂಪರ್ಕ ಸಂವಹನದ ಭಾಗವಾಗಿ ಉಳಿದುಕೊಳ್ಳುತ್ತದೆ. ಎಲ್ಲೆಡೆಯೂ ಒಳ್ಳೆಯದನ್ನು ಕಾಣುವ ಮನಃಸ್ಥಿತಿ ನಮ್ಮದಾಗಬೇಕು. ಹೇಗೆ ಜೇನ್ನೊಣಗಳು ಹೂವಿನಿಂದ ಮಕರಂದ ಹೀರುತ್ತವೋ ಹಾಗೆ ನಾವು ಒಳ್ಳೆಯ ವಿಚಾರಗಳನ್ನು ಮತ್ತೊಬ್ಬರಿಗೆ ಹಾನಿಯಾಗದ ರೀತಿಯಲ್ಲಿ ಸಂಗ್ರಹಿಸಿಕೊಳ್ಳಬೇಕು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಯುವಜನಾಂಗ ತಮ್ಮ ಪ್ರತಿಭೆ ಹಾಗೂ ವಿದ್ಯೆಯಿಂದ ಸಾಂಸ್ಕೃತಿಕವಾಗಿ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸರ್ವರೀತಿಗಳಲ್ಲೂ ದೇಶವನ್ನು ಬೆಳಗಬೇಕು. ರಾಷ್ಟ್ರವನ್ನು ಪರಿಪೂರ್ಣತೆಯತ್ತ ಕೊಂಡೊಯ್ಯಬೇಕು ಮತ್ತು ವಿಶ್ವಗುರು ಭಾರತವನ್ನಾಗಿಸಬೇಕು ಎಂದರು.

ಈ ಸಂದರ್ಭದಲ್ಲಿ ಅಂಬಿಕಾ ಸಂಸ್ಥೆಯ ಹಿರಿಯ ವಿದ್ಯಾರ್ಥಿ, ಏರ್‌ಪೋರ್ಸ್ ಅಧಿಕಾರಿ ಸ್ಕ್ವಾಡ್ರನ್ ಲೀಡರ್ ಶರತ್ ಪಿ ಮಾಧವ್ ಅವರನ್ನು ಸನ್ಮಾಯಿಸಲಾಯಿತು. ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಸದಸ್ಯರಾದ ಪ್ರಸನ್ನ ಭಟ್, ಸುರೇಶ್ ಶೆಟ್ಟಿ, ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲೆ ಸುಚಿತ್ರಾ ಪ್ರಭು, ಅಂಬಿಕಾ ಸಿ.ಬಿ.ಎಸ್.ಇ ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ ಉಪಸ್ಥಿತರಿದ್ದರು.


ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳಾದ ಶರಧಿ, ವೈ?ವಿ, ವಿಧಾತ್ರಿ ಪ್ರಾರ್ಥಿಸಿ, ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಸ್ವಾಗತಿಸಿದರು. ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ವಂದಿಸಿ, ಅಂಬಿಕಾ ಪದವಿ ಮಹಾವಿದ್ಯಾಲಯದ ಐಕ್ಯೂಎಸಿ ಘಟಕದ ಸಂಯೋಜನಾಧಿಕಾರಿ ಚಂದ್ರಕಾಂತ ಗೋರೆ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here