ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯಲ್ಲಿ ವಿವೇಕಾನಂದ ಜಯಂತಿ ಆಚರಣೆ

0

ಖಾಲಿಯಾದ ವ್ಯಕ್ತಿತ್ವಗಳಿಗೆ ಸತ್ವ ತುಂಬಲು ಆದರ್ಶ ಪುರುಷರು ಬೇಕು : ರಾಕೇಶ್ ಕಮ್ಮಜೆ

ಪುತ್ತೂರು: ಹಳೆಯ ಮನೆಗಳ ಭಿತ್ತಿಗಳಲ್ಲಿ ಅನೇಕಾನೇಕ ಮಾದರಿಯೆನಿಸುವ ವ್ಯಕ್ತಿಗಳ ಫೋಟೋಗಳಿರುತ್ತಿದ್ದವು. ಆದರೆ ಹೊಸ ಮನೆಗಳನ್ನು ಕಟ್ಟಿಕೊಂಡಂತೆಲ್ಲ ಗೋಡೆಗಳು ಖಾಲಿಯಾಗುತ್ತಿವೆ. ಅತಿಯಾದ ಮೊಬೈಲ್ ಬಳಕೆಯಿಂದ ಗ್ರಂಥಾಲಯಗಳು ಖಾಲಿಯಾಗುತ್ತಿವೆ. ಪರಿಣಾಮವಾಗಿ ನಮ್ಮ ಜ್ಞಾನವೂ ಖಾಲಿಯಾಗಿ ವ್ಯಕ್ತಿತ್ವಗಳೂ ಖಾಲಿಯೆನಿಸುತ್ತಿವೆ. ಹೀಗೆ ಖಾಲಿಯಾದ ವ್ಯಕ್ತಿತ್ವಗಳನ್ನು ತುಂಬಿಕೊಳ್ಳುವುದಕ್ಕೆ ಸ್ವಾಮಿ ವಿವೇಕಾನಂದರಂತಹ ವ್ಯಕ್ತಿತ್ವಗಳ ಆದರ್ಶಗಳು ಬೇಕಾಗಿವೆ ಎಂದು ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ್ ಕುಮಾರ್ ಕಮ್ಮಜೆ ಹೇಳಿದರು.‌

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯಲ್ಲಿ ಜ.12ರಂದು  ಆಯೋಜಿಸಲಾದ ಸ್ವಾಮಿ ವಿವೇಕಾನಂದ ಜಯಂತಿ – ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.


ನೈತಿಕತೆ, ಪ್ರಾಮಾಣಿಕತೆ, ಇಂತಹ ಮೌಲ್ಯವನ್ನು ಭಾಷಣಗಳಲ್ಲಿ ಹೇಳುವುದು ಸುಲಭ ಆದರೆ ಆಚರಣೆಯಲ್ಲಿ ಎಡವುತ್ತೇವೆ. ಭಾರತದಲ್ಲಿ ಉತ್ತಮವಾದ, ಉದಾತ್ತವಾದ ಮೌಲ್ಯಗಳಿವೆ. ಇಂತಹ ವ್ಯಕ್ತಿತ್ವ ರೂಪಿಸುವ ಮೌಲ್ಯಗಳು ಕೇವಲ ಶಿಕ್ಷಿತರಲ್ಲಷ್ಟೇ ಅಲ್ಲ, ಅಶಿಕ್ಷಿತರಲ್ಲೂ ಬೆಳಗುತ್ತಿರುತ್ತವೆ. ಹಾಗಾಗಿ ಮೌಲ್ಯಗಳಿಗಾಗಿ ಬದುಕುತ್ತೇನೆ ಎಂದು ನಿರ್ಣಯಿಸಿದರೆ ಮಾತ್ರ ಉತ್ಕೃಷ್ಟ ಬದುಕನ್ನು ರೂಪಿಸಿಕೊಳ್ಳಬಹುದು. ಸ್ವಾಮಿ ವಿವೇಕಾನಂದರು ಜಗತ್ತಿನಾದ್ಯಂತ ಭಾರತೀಯ ಮೌಲ್ಯಗಳನ್ನು ಪಸರಿಸುವ ಕಾರ್ಯವನ್ನು ಕೈಗೆತ್ತಿಕೊಂಡು ಯಶಸ್ವಿಯಾದವರು ಎಂದು ನುಡಿದರು.

ಯುವ ಸಮೂಹವನ್ನು ಬಡಿದೆಬ್ಬಿಸುವಂತಹ ಅಸಂಖ್ಯ ಮಾತುಗಳನ್ನು ಸ್ವಾಮಿ ವಿವೇಕಾನಂದರು ನೀಡಿದ್ದಾರೆ. ನಮ್ಮೊಳಗಿನ ಶಕ್ತಿಯನ್ನು ಪ್ರೇರೇಪಿಸಿಕೊಳ್ಳುವಲ್ಲಿ ಅವರ ಮಾತುಗಳು ಉಪಯುಕ್ತವಾಗಿವೆ. ನಮ್ಮಲ್ಲಿನ ಅದಮ್ಯವಾದ ಚೇತನವನ್ನು ಗುರುತಿಸಲು ಮತ್ತು ಸಾಧನೆಯ ಹಠ ಬೆಳೆಸಿಕೊಳ್ಳಲು ವಿವೇಕಾನಂದರಂತಹ ವ್ಯಕ್ತಿತ್ವಗಳು ಕಣ್ಣಮುಂದಿರಬೇಕಾದ್ದು ಅಗತ್ಯ ಎಂದರಲ್ಲದೆ ತಮ್ಮ ಚಿಂತನೆಗಳಿಂದ ನಮ್ಮ ಆತ್ಮ ಸಾಕ್ಷಿಯನ್ನು ತಟ್ಟಿದವರು ವಿವೇಕಾನಂದರು ಎಂದು ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಮಾತನಾಡಿ ಯಾವುದನ್ನೇ ಆಗಲಿ ನಾವು ಕೇವಲ ಆಚರಣೆಯನ್ನು ಮಾಡಿ ಅದನ್ನು ಮರೆತುಬಿಡಬಾರದು. ಆಚರಿಸಿದ್ದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮುಖ್ಯ. ನಾವು ನಮ್ಮನ್ನು ಅರಿತುಕೊಳ್ಳುವುದರ ಜೊತೆ ಜೊತೆಗೆ ನಮ್ಮಲ್ಲಿ ಇರುವ ಶಕ್ತಿಯನ್ನು ನಾವು ತಿಳಿದುಕೊಳ್ಳಬೇಕು. ಗುರಿ ಇಲ್ಲದವರಿಗೆ ಯಶಸ್ಸು ಸಿಗುವುದಿಲ್ಲ. ಏಕಾಗ್ರತೆ ಇದ್ದರೆ ನಾವು ಏನನ್ನು ಬೇಕಾದರೂ ಸಾಧಿಸಬಹುದು. ಸ್ಪಷ್ಟ ಗುರಿಯನ್ನಿರಿಸಿಕೊಂಡು ನಮ್ಮ ಜೀವದ ಕಣ-ಕಣವನ್ನು ಅದಕ್ಕಾಗಿ ಮುಡಿಪಾಗಿಟ್ಟರೆ ಏನನ್ನಾದರೂ ಸಾಧಿಸಬಹುದು ಎಂದರು.

ಏಳನೇ ತರಗತಿ ವಿದ್ಯಾರ್ಥಿನಿ ನಿಹಾರಿಕ, ಮೂರನೇ ತರಗತಿ ವಿದ್ಯಾರ್ಥಿನಿಯರಾದ ಆರಾಧ್ಯ ಹಾಗೂ ತನ್ವಿಕಾ ವಿವೇಕಾನಂದರ ಕುರಿತು ಭಾಷಣವನ್ನು ಪ್ರಸ್ತುತಪಡಿಸಿದರು. ಆರನೇ ತರಗತಿಯ ವಿದ್ಯಾರ್ಥಿಗಳು ಸನ್ಯಾಸಿ ಗೀತೆಯನ್ನು ಹಾಡಿದರು ಹಾಗೂ ವಿವೇಕಾನಂದರ ಕುರಿತಾದ ಕಿರು ನಾಟಕವನ್ನು ಪ್ರದರ್ಶಿಸಲಾಯಿತು. ಅಂತೆಯೇ ವಿವೇಕಾನಂದ ಜಯಂತಿಯ ಪ್ರಯುಕ್ತ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ನೀಡಿ ಪ್ರೋತ್ಸಾಹಿಸಲಾಯಿತು.

ಪ್ರಾಂಶುಪಾಲೆ ಮಾಲತಿ.ಡಿ ಭಟ್ ಹಾಗೂ ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅರುಂಧತಿ ಎಲ್ ಆಚಾರ್ಯ ಸ್ವಾಗತಿಸಿ, ಭಾರ್ಗವಿ ವಂದಿಸಿದರು. ಕಾರ್ಯಕ್ರಮವನ್ನು ಖುಷಿ, ಚಂದನಾ ಹಾಗೂ ಯಶಸ್ವಿ ನಿರ್ವಹಿಸಿದರು.

LEAVE A REPLY

Please enter your comment!
Please enter your name here