ಬನ್ನೂರು ಚರ್ಚ್ ಪ್ರ.ಧರ್ಮಗುರು ಪ್ರಶಾಂತ್ ಫೆರ್ನಾಂಡೀಸ್ ಪದೋನ್ನತಿಯೊಂದಿಗೆ ಬೆಂಗಳೂರು ಚರ್ಚ್‌ಗೆ ವರ್ಗಾವಣೆ

0

ಪುತ್ತೂರು: ಬನ್ನೂರು ಸಂತ ಅಂತೋನಿ ಚರ್ಚ್ ನ ಪ್ರಧಾನ ಧರ್ಮಗುರು ಪ್ರಶಾಂತ್ ಫೆರ್ನಾಂಡೀಸ್ ರವರು ಬೆಂಗಳೂರಿನ ಸಂತ ಅಂತೋನಿ ಫ್ರಾಯರಿ ಚರ್ಚ್ ಗೆ ಪ್ರಧಾನ ಧರ್ಮಗುರುಗಳಾಗಿ ಫೆಬ್ರವರಿ ತಿಂಗಳಿನಲ್ಲಿ ವರ್ಗಾವಣೆಗೊಳ್ಳಲಿದ್ದಾರೆ. ಪ್ರಶಾಂತ್ ಫೆರ್ನಾಂಡೀಸ್ ರವರಿಂದ ತೆರವಾದ ಸ್ಥಾನಕ್ಕೆ ಪ್ರಧಾನ ಧರ್ಮಗುರುಗಳಾಗಿ ಬಾಲ್ತಜಾರ್ ಪಿಂಟೋರವರು ಆಗಮಿಸಲಿದ್ದಾರೆ.


ವರ್ಗಾವಣೆಗೊಳ್ಳಲಿರುವ ಪ್ರಶಾಂತ್ ರವರು 2017, ಜನವರಿಯಲ್ಲಿ ಬನ್ನೂರು ಚರ್ಚ್ ಗೆ ಪ್ರಧಾನ ಧರ್ಮಗುರುಗಳಾಗಿ ಆಗಮಿಸಿದ್ದರು. ಚಿಕ್ಕಮಗಳೂರು ಮೂಡಿಗೆರೆ ನಿವಾಸಿ ಬೆನೆಡಿಕ್ಟ್ ಫೆರ್ನಾಂಡೀಸ್ ಹಾಗೂ ಪ್ರೆಸಿಲ್ಲ ಫೆರ್ನಾಂಡೀಸ್ ರವರ ಪುತ್ರನಾಗಿರುವ ಪ್ರಶಾಂತ್ ರವರು ತಮ್ಮ ಎಸೆಸ್ಸೆಲ್ಸಿ ಶಿಕ್ಷಣವನ್ನು ಮೂಡಿಗೆರೆ ಸೈಂಟ್ ಮಾರ್ಥಾಸ್ ಪ್ರೌಢಶಾಲೆಯಲ್ಲಿ, ಪಿಯುಸಿ ಶಿಕ್ಷಣವನ್ನು ಗೋವಾದ ಪೋಂಡಾ ಎಜ್ಯುಕೇಶನಲ್ ಸೊಸೈಟಿಯಲ್ಲಿ, ಬಿಎ ಪದವಿ ಶಿಕ್ಷಣವನ್ನು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ, ಫಿಲಾಸಫಿ ಶಿಕ್ಷಣವನ್ನು ಬೆಂಗಳೂರಿನ ಸೈಂಟ್ ಆಂಟನೀಸ್ ಫ್ರಾನ್ಸಿಸ್ಕನ್ ಕಾಲೇಜಿನಲ್ಲಿ, ಥಿಯಾಲೋಜಿ ಶಿಕ್ಷಣವನ್ನು ವಿಜಯವಾಡದ ವಿಜ್ಞಾನ ನಿಲಯಂನಲ್ಲಿ, ಮೂರು ತಿಂಗಳ ಉಪ ಗುರುಗಳ ಸೇವೆಯನ್ನು ಭಟ್ಕಳದ ಅವರ್ ಲೇಡಿ ಆಫ್ ಲೂರ್ದ್ಸ್ ನಲ್ಲಿ ಪೂರೈಸಿದ್ದರು. ಬಳಿಕ 2012, ಏಪ್ರಿಲ್ 19 ರಂದು ಮೂಡಿಗೆರೆ ಸೈಂಟ್ ಆಂಟನಿ ಚರ್ಚ್ ನಲ್ಲಿ ಯಾಜಕ ದೀಕ್ಷೆಯನ್ನು ಪಡೆದು ಭಟ್ಕಳದ ಅವರ್ ಲೇಡಿ ಆಫ್ ಲೂರ್ದ್ಸ್ ಚರ್ಚ್(2012-13) ನಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ ಆರಂಭಿಸಿದ್ದರು. ಬಳಿಕ ಬೆಂಗಳೂರಿನಲ್ಲಿ ತಮ್ಮ ಪ್ರಾಂತ್ಯದ ಸಹಾಯಕ ಖಜಾಂಜಿ (2013-17) ಆಗಿ ಸೇವೆ ಸಲ್ಲಿಸಿದ್ದು, 2017ರಲ್ಲಿ ಬನ್ನೂರು ಸೈಂಟ್ ಆಂಟನಿ ಚರ್ಚ್ ಗೆ ಪ್ರಧಾನ ಧರ್ಮಗುರುಗಳಾಗಿ ಆಗಮಿಸಿದ್ದರು.

LEAVE A REPLY

Please enter your comment!
Please enter your name here