ಒಟ್ಟಾಗಿ ಗದ್ದೆಗಿಳಿದು ಬೇಸಾಯ ಮಾಡಿದರು… ಫಸಲನ್ನು ಎಲ್ಲರಿಗೂ ಹಂಚಿದರು…

0

  • ಹಡೀಲು ಗದ್ದೆಯಲ್ಲಿ ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದಿಂದ ಬೆಳೆದ ಅಕ್ಕಿಯ ವಿತರಣೆ

ಪುತ್ತೂರು:`ಗದ್ದೆಗೆ ಇಳಿಯೋಣ ಬೇಸಾಯ ಮಾಡೋಣ’ ಎಂಬ ವಿಶೇಷ ಪರಿಕಲ್ಪಣೆಯಲ್ಲಿ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವತಿಯಿಂದ ಹಡೀಲು ಗದ್ದೆಯಲ್ಲಿ ನಾಟಿ ಮಾಡಿ ಬೆಳೆದ ಭತ್ತದ ಅಕ್ಕಿಯನ್ನು ನಾಟಿ, ಕಟಾವು ಸೇರಿದಂತೆ ಗದ್ದೆ ಕಾರ್ಯದಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಹಂಚುವ ಮೂಲಕ ಮಾದರಿಯಾಗಿದ್ದಾರೆ.


ಮಹಾಲಿಂಗೇಶ್ವರ ದೇವಸ್ಥಾನದ ಮಾರ್ಗದರ್ಶನದಲ್ಲಿ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಹಾಗೂ ಸಂಪ್ಯ ನವಚೇತನ ಯುವಕ ಮಂಡಲ ಜಂಟಿಯಾಗಿ ಭಕ್ತಾದಿಗಳ ಸಹಕಾರದೊಂದಿಗೆ ಸಂಪ್ಯ ತೇಜಸ್‌ರವರ ಗದ್ದೆಯಲ್ಲಿ ನಾಟಿ ಮಾಡಲಾಗಿತ್ತು. ಸಾಂಪ್ರದಾಯಿಕವಾಗಿ ನಡೆದ ನಾಟಿಯಲ್ಲಿ ಶಾಸಕ ಸಂಜೀವ ಮಠಂದೂರು ನೇಗಿಲ ಹಿಡಿದು ಉಳುಮೆ ಮಾಡುವ ಮೂಲಕ ಗಮನ ಸೆಳೆದಿದ್ದರು. ಹಡೀಲು ಗದ್ದೆಯಲ್ಲಿ ನಾಟಿಯ ಭತ್ತದಿಂದ ಸುಮಾರು ಏಳು ಕ್ವಿಂಟಾಳ್ ಅಕ್ಕಿ ಸಂಗ್ರಹವಾಗಿದೆ. ಈ ಅಕ್ಕಿಯನ್ನು ಬೆಳೆಯುವಲ್ಲಿ ಸಂಪ್ಯ ನವಚೇತನ ಯುವಕ ಮಂಡಲದ ಸದಸ್ಯರು ದೇವಸ್ಥಾನದ ಭಕ್ತಾದಿಗಳು ಸೇರಿಂದತೆ ಸಾಕಷ್ಟು ಮಂದಿ ಶ್ರಮಹಿಸಿದ್ದಾರೆ. ಬೆಳೆದ ಫಲವೂ ಶ್ರಮಿಸಿದಿ ಪ್ರತಿಯೊಬ್ಬರಿಗೂ ಸಲ್ಲಬೇಕು. ಹೀಗಾಗಿ ಗದ್ದೆಯಲ್ಲಿ ನಾಟಿ ಹಾಗೂ ಕಟಾವು ಸೇರಿದಂತೆ ಗದ್ದೆ ಕೆಲಸದಲ್ಲಿ ಭಾಗವಹಿಸಿ, ಸಹಕರಿಸಿದ ಪ್ರತಿಯೊಬ್ಬರಿಗೂ ಗದ್ದೆಯ ಬೆಳೆಯನ್ನು ಹಂಚುವ ಅದ್ಬುತ ಯೋಜನೆಯನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಹಾಗೂ ಸಮಿತಿ ಸದಸ್ಯರು ತೀರ್ಮಾಣಿಸಿದ್ದು ಅದರಂತೆ ಜ.೨೩ರಂದು ದೇವಸ್ಥಾನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.


ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಯೋಜನಾಧಿಕಾರಿ ಉಮೇಶ್‌ರವರು ನಾಟಿಗೆ ಗದ್ದೆ ನೀಡಿದ ತೇಜಸ್‌ರವರಿಗೆ ಸಾಂಕೇತಿಕವಾಗಿ ಅಕ್ಕಿ ವಿತರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಗದ್ದೆ ಕೃಷಿ ಕಾರ್ಯ ದೂರವಾಗುತ್ತಿರುವ ಸಮಯದಲ್ಲಿ ಯುವಕರನ್ನು ಸೆಳೆಯುವ ಮೂಲಕ ನಾವು ಉನ್ನುವ ಅಕ್ಕಿಯನ್ನು ನಾವೇ ಬೆಳೆಯಬೇಕು ಎಂಬ ಹೊಸ ಯೋಜನೆ ಮಹಾವಿಷ್ಣುಮೂರ್ತಿ ದೇವಸ್ಥಾನದ ಮಖಾಂತರ ನಡೆದಿದೆ. ಇದರಲ್ಲಿ ಲಾಭವನ್ನು ನೋಡದೆ ಎಲ್ಲರೂ ಸಹಕರಿಸಿದ್ದಾರೆ. ಗದ್ದೆಯಲ್ಲಿ ಬೆಳೆದ ಬೆಳೆಯನ್ನು ಕೃಷಿಯಲ್ಲಿ ದುಡಿದವರಿಗೆ ನೀಡುವ ಪುಣ್ಯಕಾರ್ಯ ವ್ಯವಸ್ಥಾಪನಾ ಸಮಿತಿಯಿಂದ ನಡೆದಿದೆ ಎಂದರು.


ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾರ್ಗದರ್ಶನ, ಶಾಸಕರ ವಿಶೇಷ ಮುತುವರ್ಜಿ, ಸಲಹೆ, ಧರ್ಮಸ್ಥಳ ಯೋಜನೆ, ನವಚೇತನ ಯುವಕ ಮಂಡಲ ಹಾಗೂ ಊರವರ ಸಹಕಾರದಿಂದ ಉತ್ತಮ ಬೆಳೆ ಬೆಳೆಯುವಲ್ಲಿ ಸಹಕಾರಿಯಾಗಿದೆ. ಗದ್ದೆ ಬೇಸಾಯದಲ್ಲಿ ಸಾಕಷ್ಟು ಮಂದಿ ಭಾಗವಹಿಸಿ ಸಹಕರಿಸಿದ್ದಾರೆ. ಹೀಗಾಗಿ ಗದ್ದೆಯಲ್ಲಿ ಬೆಳೆದ ಭತ್ತವನ್ನು ಅಕ್ಕಿಯನ್ನಾಗಿ ಮಾಡಿ ದೇವರ ಪ್ರಸಾದ ರೂಪದಲ್ಲಿ ಇತರಿಸಲಾಗುತ್ತಿದೆ.

ಸಂಪ್ಯ ನವಚೇತನ ಯುವಕ ಮಂಡಲದ ಅಧ್ಯಕ್ಷ ವಿಜಯ ಬಿ.ಎಸ್. ಮಾತನಾಡಿ, ಗದ್ದೆಯಲ್ಲಿ ಎಲ್ಲರೂ ಒಟ್ಟಾಗಿ ದುಡಿದು ಫಸಲನ್ನು ಎಲ್ಲರಿಗೂ ಹಂಚುಕೊಂಡ ತಿನ್ನಲಾಗುತ್ತದೆ ಎಂದರು. ಉತ್ಸವ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಇಳಂತಾಜೆ ಮಾತನಾಡಿ, ಎಲ್ಲರ ಒಗ್ಗೂಡುವಿಕೆಯ ಪ್ರಯತ್ನದ ಫಲವಾಗಿ ಇಂದು ಹಡೀಲು ಗದ್ದೆಯಲ್ಲಿ ಉತ್ತಮ ಫಸಲು ಪಡೆಯುವಲ್ಲಿ ಸಹಕಾರಿಯಾಗಿದೆ. ದೇವಸ್ಥಾನದ ವತಿಯಿಂದ ನಡೆದ ಗದ್ದೆಯ ಫಸಲನ್ನು ಪ್ರಸಾದ ರೂಪವಾಗಿ ವಿತರಿಸುವ ಯೋಜನೆ ಶ್ಲಾಘನೀಯವಾದುದು ಎಂದರು.

ಸನ್ಮಾನ:
ಹಡೀಲು ಗದ್ದೆಯಲ್ಲಿ ಕೃಷಿ ಕಾರ್ಯಗಳಿಗೆ ಉತ್ತಮ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಯೋಜನಾಧಿಕಾರಿ ಉಮೇಶ್, ಗದ್ದೆ ನೀಡಿದ ತೇಜಸ್ ಸಂಪ್ಯ ಹಾಗೂ ಸಹಕರಿಸಿದ ನವಚೇತನ ಯುವಕ ಮಂಡಲದ ಅಧ್ಯಕ್ಷ ವಿಜಯ ಬಿ.ಎಸ್‌ರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಉತ್ಸವ ಸಮಿತಿ ಗೌರವಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಉಪಾಧ್ಯಕ್ಷ ಭೀಮಯ್ಯ ಭಟ್, ಜತೆ ಕಾರ್ಯದರ್ಶಿ ಹರಿಣಿ ಪುತ್ತೂರಾಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಲಕ್ಷ್ಮಣ ಬೈಲಾಡಿ, ವಿನ್ಯಾಸ್ ಯು.ಎಸ್., ಪ್ರೇಮ, ಜಗದೀಶ ಎಂ., ಉತ್ಸವ ಸಮಿತಿ ಗೌರವ ಸಲಹೆಗಾರರಾದ ಕೆ.ಕೃಷ್ಣಪ್ಪ, ರಮೇಶ್ ರೈ ಮೊಟ್ಟೆತ್ತಡ್ಕ, ರಾಜೇಶ್ ರೈ ಸಂಪ್ಯದಮೂಲೆ, ನಾಗೇಶ್ ಸಂಪ್ಯ, ನಾರಾಯಣ ನಾಕ್, ಮುರಳೀಧರ ಆಚಾರ್ಯ ಸಂಪ್ಯ, ಸೀತಾರಾಮ ಸಂಪ್ಯ, ನವೀನ್ ಕುಕ್ಕಾಡಿ, ವಸಂತ ಗೌಡ ಕುಕ್ಕಾಡಿ, ಉಮೇಶ್ ಆಚಾರ್ಯ ಕುಕ್ಕಾಡಿ, ರವಿಂದ್ರ ಸಂಪ್ಯ, ಸುಧಾಕರ ರೈ ಮೊಟ್ಟೆತ್ತಡ್ಕ ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವ್ಯವಸ್ಥಾಪನಾ ಸಮಿತಿ ಸದಸ್ಯ ಸೀತಾರಾಮ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಮೇಶ್ ಎಸ್.ಕೆ ವಂದಿಸಿದರು.

LEAVE A REPLY

Please enter your comment!
Please enter your name here