ಬೀರ್ನಹಿತ್ಲು ಶಾಲೆಯ ಪ್ರವಾಸದ ವಿವಾದ: ಸುರಕ್ಷಿತವಾಗಿ ಮನೆಗೆ ತಲುಪಿದ ವಿದ್ಯಾರ್ಥಿಗಳು

0

ಪುತ್ತೂರು: ಕ್ಷೇತ್ರ ಶಿಕ್ಷಣಾಧಿಕಾರಿಯವರಿಗಾಗಲೀ, ಮುಖ್ಯೋಪಾಧ್ಯಾರಿಗಾಗಲೀ, ಎಸ್‌ಡಿಎಂಸಿಯವರಿಗಾಗಲೀ ತಿಳಿಸದೆ ಸಹಶಿಕ್ಷಕಿಯೋರ್ವರು ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡ ಹೋಗಿ ಆತಂಕ ಸೃಷ್ಠಿಸಿದ್ದ ಘಟನೆ ಸುಖಾಂತ್ಯ ಕಂಡಿದೆ.


ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಕ್ಕಮುಡ್ನೂರು ಗ್ರಾಮದ ಬೀರ‍್ನಹಿತ್ಲು ಎಂಬಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಭಾರತಿ ಎಂಬವರು ಶಾಲೆಯ 28 ವಿದ್ಯಾರ್ಥಿಗಳನ್ನು ಬಸ್ಸಿನಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗಿರುವ ಘಟನೆ ಫೆ.4ರಂದು ಬೆಳಿಗ್ಗೆ ಬೆಳಕಿಗೆ ಬಂದಿತ್ತು. ಶಿಕ್ಷಕಿ ಭಾರತಿಯವರು ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಯವರಿಗಾಗಲೀ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯವರಿಗಾಗಲೀ, ಮುಖ್ಯ ಶಿಕ್ಷಕರಿಗಾಗಲೀ ಮಾಹಿತಿ ಇರಲಿಲ್ಲ. ಫೆ.4ರಂದು ಸುಮಾರು 38 ಮಕ್ಕಳು ಶಾಲೆಗೆ ಗೈರು ಹಾಜರಾಗಿದ್ದರು. ಇದರಲ್ಲಿ ಕೆಲವು ವಿದ್ಯಾರ್ಥಿಗಳು ಶಾಲೆಗೆ ರಜೆ ಮಾಡಿ ಕೆಮ್ಮಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರೆಗೆ ತೆರಳಿದ್ದರು. ಉಳಿದ ವಿದ್ಯಾರ್ಥಿಗಳು ಶಿಕ್ಷಕಿ ಭಾರತಿಯವರೊಂದಿಗೆ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸಕ್ಕೆ ಅಧಿಕೃತವಾಗಿ ಎಷ್ಟು ಮಕ್ಕಳು ತೆರಳಿದ್ದಾರೆ ಎಂಬ ಮಾಹಿತಿ ಸಂಜೆಯವರೆಗೂ ಸಂಬಂಧಿಸಿದವರಿಗೆ ಗೊತ್ತಾಗಿರಲಿಲ್ಲ. ಮಧ್ಯಾಹ್ನದವರೆಗೆ ಶಿಕ್ಷಕಿ ಭಾರತಿಯವರನ್ನು ಸಂಪರ್ಕಿಸಲು ಮುಖ್ಯ ಶಿಕ್ಷಕಿ ಪುಷ್ಪಾ ಮತ್ತು ಎಸ್‌ಡಿಎಂಸಿ ಅಧ್ಯಕ್ಷೆ ನಳಿನಿ ರಾಜೇಶ್ ಅವರು ಪ್ರಯತ್ನಿಸಿದರೂ ಭಾರತಿಯವರ ಮೊಬೈಲ್ ಫೋನ್ ಸ್ವಿಚ್ಛ್ ಆಫ್ ಆಗಿತ್ತು. ಪ್ರವಾಸಕ್ಕೆ ತೆರಳಿರುವ ಬಸ್‌ನ ಮಾಹಿತಿಯೂ ಸಿಕ್ಕಿರಲಿಲ್ಲ. ಇದರಿಂದಾಗಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಶಾಲೆಯಲ್ಲಿ 6 ಮತ್ತು 7ನೇ ತರಗತಿಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಭಾರತಿಯವರು 3ರಿಂದ 7ನೇ ತರಗತಿಯವರೆಗಿನ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು. ವಾರದ ಹಿಂದೆಯೇ ಇವರು ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಲು ಸಿದ್ಧತೆ ನಡೆಸಿದ್ದರು ಎನ್ನಲಾಗಿದ್ದು ಈ ಬಗ್ಗೆ ಯಾರಿಗೂ ಹೇಳದಂತೆ ವಿದ್ಯಾರ್ಥಿಗಳಿಗೆ ಹೇಳಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಶಾಲೆಯಿಂದ ಅಧಿಕೃತ ಪ್ರವಾಸ ಹೋಗಲಾಗುತ್ತಿದೆ ಎಂದು ತಿಳಿದು ಮಕ್ಕಳನ್ನು ಪೋಷಕರು ಕಳುಹಿಸಿಕೊಟ್ಟಿದ್ದರು. ಆದರೆ, ಘಟನೆ ಬೆಳಕಿಗೆ ಬಂದಾಗ ಪೋಷಕರು ಆತಂಕಕ್ಕೀಡಾಗಿದ್ದರು. ಈ ಕುರಿತು ಮಾಹಿತಿ ಪಡೆದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಅವರು ಶಾಲೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೆ, ಪೊಲೀಸ್ ಇಲಾಖೆಗೆ ಮೌಖಿಕ ಮಾಹಿತಿ ನೀಡಿದ್ದಾರೆ. ‘ಪ್ರವಾಸಕ್ಕೆ ಹೋಗುವ ಕುರಿತು ಯಾವುದೇ ನಿರ್ಧಾರ ಆಗಿಲ್ಲ. ಪ್ರವಾಸ ಹೋಗಲು ಯಾರಿಗೂ ಒಪ್ಪಿಗೆ ನೀಡಿಲ್ಲ. ಅನಧಿಕೃತವಾಗಿ ಶಿಕ್ಷಕಿ ಭಾರತಿ ಅವರು ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದು ಈ ಬಗ್ಗೆ ದೂರು ನೀಡಲಿದ್ದೇವೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷೆ ನಳಿನಿ ರಾಜೇಶ್ ತಿಳಿಸಿದ್ದಾರೆ.

ಶಾಲೆಗೆ ಭೇಟಿ ನೀಡಿದ ಪೋಷಕರು: ಪ್ರವಾಸದ ಚೀಟಿ ಪತ್ತೆ

ಶಿಕ್ಷಕಿ ಭಾರತಿ ಅವರು ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿರುವ ವಿಷಯ ಸುದ್ದಿ ವೆಬ್ ನ್ಯೂಸಲ್ಲಿ ಪ್ರಕಟಗೊಂಡಿತ್ತು. ಈ ವಿಚಾರ ಪ್ರಚಾರ ಆದ ಕೂಡಲೇ ಹಲವು ಪೋಷಕರು ಶಾಲೆಗೆ ಭೇಟಿ ನೀಡಿ ಶಿಕ್ಷಕರನ್ನು ವಿಚಾರಿಸಿದ್ದಾರೆ. ಪ್ರವಾಸಕ್ಕೆ ತೆರಳುವ ವೇಳೆ ಶಿಕ್ಷಕಿ ಭಾರತಿಯವರು ಚೀಟಿ ಬರೆದಿಟ್ಟಿದ್ದು ಈ ವೇಳೆ ಕಂಡು ಬಂದಿದೆ. ಚೀಟಿಯಲ್ಲಿ ‘ದಿನಾಂಕ 04-02-2023ರ ಶನಿವಾರ ಬೆಳಿಗ್ಗೆ 8.00 ಗಂಟೆಗೆ ಶಾಲೆ ಬಳಿ ತಲುಪುವುದು.‌ ಬರುವಾಗ ಬಣ್ಣದ ಡ್ರೆಸ್, ಬ್ಯಾಗ್ ನಲ್ಲಿ ನೀರಿನ ಬಾಟಲು, ಒಂದು ಬಟ್ಟಲು ಮತ್ತು ಲೋಟ ತರುವುದು.‌ ವಾಂತಿ ಆಗುವವರು ನಿಂಬೆ ಹಣ್ಣು ಮತ್ತು ಪ್ಲಾಸ್ಟಿಕ್ ತೊಟ್ಟೆಗಳನ್ನು ಬ್ಯಾಗ್ ನಲ್ಲಿ ಇಟ್ಟುಕೊಳ್ಳುವುದು, ತಿಂಡಿ ಇದ್ದಲ್ಲಿ ಬ್ಯಾಗ್ ನಲ್ಲಿ ಹಾಕಿಕೊಳ್ಳುವುದು’ ಎಂದು ಚೀಟಿಯಲ್ಲಿ ಬರೆಯಲಾಗಿದೆ. ಅಲ್ಲದೆ ಕರೆ ಮಾಡಲು ಮೊಬೈಲ್ ಫೋನ್ ನಮೂದಿಸಲಾಗಿದೆ. ಅಲ್ಲದೆ, ಚಾಕಲೇಟು ಫ್ಯಾಕ್ಟರಿ‌ ಕೆಮ್ಮಿಂಜೆ, ಸ್ನೇಹಶಾಲೆ ಸುಳ್ಯ, ಹನುಮಗಿರಿ, ಬಿಸಿ ನೀರಿನ ತೀರ್ಥ ಇರ್ದೆ ಎಂದು ಚೀಟಿಯಲ್ಲಿ ಬರೆಯಲಾಗಿದೆ

ಮನೆಗೆ ತಲುಪಿದ ಮಕ್ಕಳು

ಶಿಕ್ಷಕಿ ಭಾರತಿ ಅವರ ಜತೆ ಪ್ರವಾಸಕ್ಕೆ ತೆರಳಿದ್ದ ವಿದ್ಯಾರ್ಥಿಗಳು ಸಂಜೆ ವೇಳೆಗೆ‌ ಮನೆಗೆ ಸುರಕ್ಷಿತವಾಗಿ ತೆರಳಿದ್ದಾರೆ.‌ಎಸ್.ಡಿ.ಎಂ.ಸಿ.‌ಅಧ್ಯಕ್ಷೆ ನಳಿನಿ ರಾಜೇಶ್, ಮುಖ್ಯಗುರು ಪುಷ್ಪಾ ಮತ್ತು ಗ್ರಾಮ‌ ಪಂಚಾಯತ್ ಜನಪ್ರತಿನಿಧಿಗಳು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿಯಲ್ಲಿ ಮಾತುಕತೆ ನಡೆಸುತ್ತಿದ್ದ ವೇಳೆ ಬೀರ್ನಹಿತ್ಲು ಶಾಲೆಗೆ ಶಿಕ್ಷಕಿ ಭಾರತಿ ಮತ್ತು‌ ವಿದ್ಯಾರ್ಥಿಗಳು ಆಗಮಿಸಿದ್ದಾರೆ.ನಂತರ‌ ಮಕ್ಕಳನ್ನು‌ ಮನೆಗೆ ಕಳುಹಿಸಿಕೊಡಲಾಗಿದೆ. ಶಿಕ್ಷಕಿ ಭಾರತಿಯವರ ವರ್ತನೆ ಕುರಿತು‌ ಇಲಾಖಾ ತನಿಖೆ ನಡಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಮಾಹಿತಿ‌ ಲಭ್ಯವಾಗಿದೆ.

LEAVE A REPLY

Please enter your comment!
Please enter your name here