ಪುತ್ತೂರು, ಬಂಟ್ವಾಳ ಉಪವಿಭಾಗದ ಸಾಮಾಜಿಕ ಜಾಲತಾಣ ನಿಗಾ ಘಟಕಗಳ ಬಲವರ್ಧನೆ-ಎಸ್‌ಪಿ ಡಾ.ಅಮಟೆ ವಿಕ್ರಂ

0

ಸಾಮಾಜಿಕ ಜಾಲತಾಣಗಳಲ್ಲಿ ಸಮಾಜದ ಶಾಂತಿ ಕದಡುವ ಸಂದೇಶ ಹಾಕುವವರ ಮೇಲೆ ಎಫ್‌ಐಆರ್
ಸಮಾಜಘಾತುಕರ ಮೇಲೆ ಕಟ್ಟುನಿಟ್ಟಿನ ನಿಗಾ
ಗಡಿಭಾಗದಲ್ಲಿ ಸಿಸಿ ಕ್ಯಾಮರಾ
ಪೊಲೀಸ್ ಬೀಟ್ ವ್ಯವಸ್ಥೆ ಬಲವರ್ಧನೆ
ಸ್ಯಾಟಲೈಟ್ ಫೋನ್ ಬಳಕೆ ತಂಡಗಳಿಂದ ತನಿಖೆ
ಸಂಚಾರ ನಿಯಮ ಉಲ್ಲಂಸುವವರಿಗೆ ಕೌನ್ಸೆಲಿಂಗ್

ಮಂಗಳೂರು:ಸಾಮಾಜಿಕ ಜಾಲತಾಣಗಳ ಮೇಲೆ ಹೆಚ್ಚಿನ ನಿಗಾ ಇಡುವುದಕ್ಕಾಗಿ ಪುತ್ತೂರು, ಬಂಟ್ವಾಳ ಉಪವಿಭಾಗಗಳಲ್ಲಿರುವ `ಸಾಮಾಜಿಕ ಜಾಲತಾಣ ನಿಗಾ ಘಟಕ’ಗಳನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದು ದ.ಕ.ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕ ಡಾ.ಅಮಟೆ ವಿಕ್ರಮ್ ತಿಳಿಸಿದ್ದಾರೆ.


ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚೋದನಕಾರಿ, ಸಂದೇಹದ ಸಂದೇಶಗಳನ್ನು ಹರಡಿಸುವುದರಿಂದ ಸಮಾಜದ ಶಾಂತಿ ಕದಡುವ ಅಪಾಯ ವಿದ್ದು ಈ ರೀತಿಯ ಸಂದೇಶ ಹಾಕುವವರ ಮೇಲೆ ಎಫ್‌ಐಆರ್ ದಾಖಲಿಸಿಕೊಳ್ಳಲಾಗುವುದು ಮಾತ್ರವಲ್ಲದೆ ಇಂಥವರ ಮೇಲೆ ನಿರಂತರ ನಿಗಾ ಇಡಲು ಜಿಲ್ಲಾ ಕೇಂದ್ರದಲ್ಲಿ ಸಾಮಾಜಿಕ ಜಾಲತಾಣ ನಿಗಾ ಘಟಕ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ.ಇದೇ ರೀತಿ ಪುತ್ತೂರು ಮತ್ತು ಬಂಟ್ವಾಳ: ಉಪವಿಭಾಗಗಳ ಘಟಕಗಳನ್ನು ಕೂಡಾ ಬಲಪಡಿಸಲಾಗುವುದು ಎಂದು ತಿಳಿಸಿದರು.


ಸಮಾಜ ಘಾತುಕರ ಮೇಲೆ ಕಟ್ಟುನಿಟ್ಟಿನ ನಿಗಾ:

ರೌಡಿಶೀಟರ್‌ಗಳು, ಜೈಲಿನಿಂದ ಬಿಡುಗಡೆಯಾದವರು, ಅಪರಾಧ ಹಿನ್ನೆಲೆಯಲ್ಲಿರುವವರು, ವದಂತಿಗಳನ್ನು ಹಬ್ಬಿಸುವವರು ಮೊದಲಾದ ಸಮಾಜ ಘಾತುಕರ ಮೇಲೆ ಕಟ್ಟುನಿಟ್ಟಿನ ಕಣ್ಗಾವಲು ಇರಿಸಲಾಗುವುದು, ಸದ್ಯ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಲಾಗುವುದು.ಮುಂದಿನ ದಿನಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು, ಸಂಘಟಿತ ಅಪರಾಧಗಳ ತಡೆಗೂ ವಿಶೇಷ ಗಮನ ನೀಡಲಾಗುವುದು.ಸಾರ್ವಜನಿಕರು, ಸಂಘ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸಲಾಗುವುದು ಎಂದು ಡಾ.ಅಮಟೆ ವಿಕ್ರಮ್ ತಿಳಿಸಿದರು.


ಗಡಿಭಾಗದಲ್ಲಿ ಸಿಸಿ ಕೆಮರಾ:

ಕೇರಳ-ಕರ್ನಾಟಕ ಗಡಿ ಭಾಗದ ರಸ್ತೆಗಳಲ್ಲಿ ಹೆಚ್ಚಿನ ನಿಗಾ ಇಡುವುದಕ್ಕಾಗಿ ಹೆಚ್ಚುವರಿಯಾಗಿ ಸಿಸಿ ಕೆಮರಾ ಅಥವಾ ಇನ್ನಿತರ ಕ್ರಮಗಳ ಅಗತ್ಯವಿದ್ದರೆ ಜಿಲ್ಲಾಧಿಕಾರಿಯವರೊಂದಿಗೆ ಮಾತನಾಡಿ ನಿರ್ಧಾರ ತೆಗೆದುಕೊಳ್ಳಲಾಗುವುದು.ಈಗಾಗಲೇ ಅಂತರ್ರಾಜ್ಯ ಚೆಕ್ ಪೋಸ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ, ಅಲ್ಲಿ ಈಗಾಗಲೇ ಇರುವ ಸಿಸಿ ಕ್ಯಾಮರಾಗಳ ಸ್ಥಿತಿಗತಿ ಪರಿಶೀಲನೆ ನಡೆಸಲಾಗುವುದು ಎಂದು ಎಸ್ಪಿಯವರು ತಿಳಿಸಿದರು.


ಬೀಟ್ ಬಲವರ್ಧನೆ:

ಪೊಲೀಸ್ ಬೀಟ್ ವ್ಯವಸ್ಥೆ ಬಲವರ್ಧನೆ ಮಾಡಲಾಗುವುದು. ಮುಖ್ಯವಾಗಿ ಹಿರಿಯ ನಾಗರಿಕರು, ಒಂಟಿ ಮನೆಗಳಿರುವ ಪ್ರದೇಶಗಳಲ್ಲಿ ಪೊಲೀಸ್ ಬೀಟ್ ಕಟ್ಟುನಿಟ್ಟುಗೊಳಿಸಲಾಗುವುದು.ಗ್ರಾಮೀಣ ಭಾಗಗಳಲ್ಲಿ ವಿದ್ಯಾರ್ಥಿಗಳನ್ನು ಹನಿಟ್ರ್ಯಾಪ್‌ಗೆ ಒಳಪಡಿಸುವ, ಅನೈತಿಕ ಪೊಲೀಸ್ ಗಿರಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಅವರು ತಿಳಿಸಿದರು.


ಸಂಚಾರ ನಿಯಮ ಉಲ್ಲಂಸುವವರಿಗೆ ಕೌನ್ಸೆಲಿಂಗ್:

ಹಲ್ಲೆಟ್ ಧರಿಸದೆ ಸಂಚರಿಸುವುದು ಸೇರಿದಂತೆ ವಾಹನ ಸಂಚಾರ ನಿಯಮ ಉಲ್ಲಂಸುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ಜತೆಗೆ ಪದೇ ಪದೇ ನಿಯಮ ಉಲ್ಲಂಸುವವರನ್ನು ಕೌನ್ಸೆಲಿಂಗ್‌ಗೆ ಒಳಪಡಿಸಿ ವಿಶೇಷ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುವುದು ಎಂದು ಎಸ್ಪಿಯವರು ತಿಳಿಸಿದರು.


ಸ್ಯಾಟಲೈಟ್ ಫೋನ್ ಬಳಕೆ ತಂಡಗಳಿಂದ ತನಿಖೆ:

ದ.ಕ. ಜಿಲ್ಲೆ ಸೇರಿದಂತೆ ಹಲವೆಡೆ ನಿಷೇಧಿತ ಸ್ಟಾಟಲೈಟ್ ಫೋನ್ ಬಳಕೆಯಾಗಿರುವ ಸಿಗ್ನಲ್ ದೊರೆತಿರುವ ಬಗ್ಗೆ ಗುಪ್ತಚರ ಇಲಾಖೆ, ಎನ್‌ಐಎ, ಎಎನ್‌ಎಫ್ ಮತ್ತು ಪೊಲೀಸ್ ತಂಡಗಳು ತನಿಖೆ ನಡೆಸುತ್ತಿವೆ ಎಂದು, ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಾ ತಿಳಿಸಿದರು.ಈ ಸಂದರ್ಭದಲ್ಲಿ, ಡಿಸಿಆರ್‌ಬಿ ಡಿವೈಎಸ್‌ಪಿ ಡಾ| ಗಾನ ಪಿ. ಕುಮಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here