ರೋಹಿತ್ ಚಕ್ರತೀರ್ಥರನ್ನು ವೇಣೂರು ಬ್ರಹ್ಮಕಲಶಕ್ಕೆ ಕರೆಸುವ ಮೂಲಕ ಶಾಸಕ ಹರೀಶ್ ಪೂಂಜಾರಿಂದ ಬಿಲ್ಲವ ಸಮುದಾಯಕ್ಕೆ ಅವಮಾನ – ಅಮಳ ರಾಮಚಂದ್ರ

0

ಪುತ್ತೂರು: ನಾರಾಯಣ ಗುರುಗಳ ಅಭಿಮಾನಿಗಳ ವಿರೋಧವಿದ್ದರೂ ರೋಹಿತ್ ಚಕ್ರತೀರ್ಥರನ್ನು ವೇಣೂರು ಬ್ರಹ್ಮಕಲಶಕ್ಕೆ ಕರೆಸುವ ಮೂಲಕ ಶಾಸಕ ಹರೀಶ್ ಪೂಂಜಾರಿಂದ ಬಿಲ್ಲವ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಮಳ ರಾಮಚಂದ್ರ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಎಲ್ಲಾ ರಂಗದಲ್ಲೂ ಕೇಸರಿಕರಣ ಮಾಡಲು ಹೋಗಿ ಪಠ್ಯ ಪುಸ್ತಕದಲ್ಲಿ ಕೇಸರಿಕರಣ ಮಾಡಿದೆ. ನಾಡಗೀತೆಗೆ ಅವಮಾನ, ಪೈಗಂಬರ್ ನಿಂದನೆ ಮಾಡಿದ ತೃತೀಯ ದರ್ಜೆಯ ಲೇಖಕ ರೋಹಿತ್ ಚಕ್ರತೀರ್ಥ ಪಠ್ಯಪುಸ್ತಕದ ಸಮಿತಿ ಅಧ್ಯಕ್ಷರಾಗಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಿ ಅದರಲ್ಲಿ ಅನೇಕ ಲೋಪಗಳನ್ನು ಮಾಡಿದ್ದಾರೆ. ನಾರಾಯಣಗುರುಗಳ ಸಂದೇಶವನ್ನು ಪಠ್ಯಪುಸ್ತಕದಿಂದ ತೆಗೆದ ಹಿನ್ನಲೆಯಲ್ಲಿ ಅವರ ವಿರುದ್ಧ ಹಲವು ಕಡೆ ಪ್ರತಿಭಟನೆ ನಡೆಯಿತು. ಆದರೆ ಚಕ್ರತೀರ್ಥ ಮಾತ್ರ ಅದನ್ನು ಸಮರ್ಥನೆ ಮಾಡುತ್ತಿದ್ದರು.

ಇತ್ತೀಚೆಗೆ ಬೆಳ್ತಂಗಡಿಯ ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಅವರನ್ನು ಕರೆಸುವ ತೀರ್ಮಾನವನ್ನು ಬಿಜೆಪಿ ಶಾಸಕ ಹರೀಶ್ ಪೂಂಜಾ ಮಾಡಿದ್ದರು. ಆದರೆ ಅಲ್ಲಿನ ಸಮಿತಿ ಮತ್ತು ಬಿಲ್ಲವ ಸಮುದಾಯ ವಿರೋಧ ವ್ಯಕ್ತಪಡಿಸಿದರೂ ಶಾಸಕ ಹರೀಶ್ ಪೂಂಜಾ ಅವರನ್ನು ಭದ್ರತೆಯೊಂದಿಗೆ ಕರೆಸಿದ್ದಾರೆ. ಹಾಗೆ ಬಂದ ರೋಹಿತ್ ಚಕ್ರತೀರ್ಥ ಅವರು ತಮ್ಮ ಭಾಷಣದಲ್ಲಿ ಪಠ್ಯ ಪುಸ್ತಕದ ವಿಚಾರದಲ್ಲಿ ನನ್ನ ಮೇಲೆ ವಿವಾದಗಳು ಸೃಷ್ಟಿಯಾದಾಗ ನನ್ನ ಬೆನ್ನ ಹಿಂದೆ ನಿಂತು ಶಕ್ತಿ ನೀಡಿದವರು ಬೆಳ್ತಂಗಡಿ ಶಾಸಕರ ಹರೀಶ್ ಪೂಂಜಾ ಎಂದು ಹೇಳುವ ಮೂಲಕ ಹರೀಶ್ ಪೂಂಜಾ ಅವರ ನಿಲುವು ಏನೆಂದು ನಮಗೆ ಸ್ಪಷ್ಟವಾಗಿದೆ. ನಮ್ಮೆಲ್ಲಾ ದಾರ್ಶನಿಕರಿಗೆ ಅವಮಾನ ಆಯಿತೋ ಅದರ ಹಿಂದೆ ಹರೀಶ್ ಪೂಂಜಾ ಇರುವುದು ಸ್ಪಷ್ಟವಾಗಿದೆ. ಹಾಗಾಗಿ ಶಾಸಕ ಹರೀಶ್ ಪೂಂಜಾ ಬಿಲ್ಲವ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಅವರು ಮಾತನಾಡಿ ಪಠ್ಯ ಪುಸ್ತಕ ರಚಿಸುವ ಸಂದರ್ಭದಲ್ಲಿ ಬಹುಭಾಷಾ, ಧರ್ಮದ ದೇಶದಲ್ಲಿ ದಾರ್ಶನಿಕರು ಅನೇಕ ಸಂದೇಶ ನೀಡಿದ್ದಾರೆ. ನಾರಾಯಣ ತತ್ವ ಆದರ್ಶ, ವಿಶ್ವ ಮಾನವ ಸಂದೇಶ ನೀಡಿದ ಕುವೆಂಪು, ಸಂವಿಧಾನ ನೀಡಿದ ಅಂಬೇಡ್ಕರ್, ತುಳುನಾಡ ಸಂಸ್ಕೃತಿಯ ಕೈಯಾರ ಕಿಂಞಣ್ಣ ರೈ ಅವರ ವಿಚಾರಗಳನ್ನು ಮುಂದಿನ ತಲೆಮಾರಿಗೆ ತಿಳಿಸಲು ಪಠ್ಯಪುಸ್ತಕದಲ್ಲಿ ಅಳವಡಿಸಲಾಗಿತ್ತು. ಆದರೆ ಅದನ್ನು ಏಕಾಏಕಿ ತೆಗೆದು ಹಾಕಿರುವುದು ಮಾದ್ಯಮಗಳ ಮೂಲಕ ತಿಳಿದ ವಿಚಾರ. ಆ ನಂತರ ಪಠ್ಯಪುಸ್ತಕದಿಂದ ತೆಗೆಸಿದ ವ್ಯಕ್ತಿಗೆ ಅನೇಕ ಕಡೆ ಪ್ರತಿಭಟನೆ ನಡೆಯಿತು. ಆದರೂ ಅವರನ್ನು ಬೆಳ್ತಂಗಡಿಗೆ ಕರೆಸಿರುವುದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಹಿಂದುಳಿದ ಘಟಕದ ಅಧ್ಯಕ್ಷ ಹರೀಶ್ ಕೋಟ್ಯಾನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here