ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯಲ್ಲಿ ರೋಬೋಟಿಕ್ಸ್ ಹಾಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ತರಬೇತಿ

0

ಪುತ್ತೂರಿನಲ್ಲಿ ಮೊಟ್ಟಮೊದಲ ಬಾರಿಗೆ ವಿದ್ಯಾರ್ಥಿಗಳಿಗೆ ವಿನೂತನ ಪರಿಕಲ್ಪನೆ

ಪುತ್ತೂರು: ಪುತ್ತೂರಿನಲ್ಲಿ ವಿದ್ಯಾರ್ಥಿಗಳಿಗೆ, ಧಾರ್ಮಿಕ ಚಿಂತನೆ, ಶೈಕ್ಷಣಿಕ ಸಾಧನೆ ಮತ್ತು ರಾಷ್ಟ್ರಭಕ್ತಿ ಉದ್ದೀಪನಗೊಳಿಸುವ ಸಮಗ್ರ ಶಿಕ್ಷಣದ ಜೊತೆಗೆ ಸಮಾಜಕ್ಕೆ ಹೊಸತನವನ್ನೇ ಪರಿಚಯಿಸುತ್ತಾ ಬಂದಿರುವ ನಟ್ಟೋಜ ಫೌಂಡೇಶನ್ ಟ್ರಸ್ಟ್, ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಸಿಬಿಎಸ್‌ಇ ಶಿಕ್ಷಣ ಸಂಸ್ಥೆಯಾದ ಅಂಬಿಕಾ ವಿದ್ಯಾಲಯದಲ್ಲಿ ಇದೀಗ ರೋಬೋಟಿಕ್ಸ್ ಮತ್ತು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ತರಬೇತಿಯನ್ನು ನೀಡುವ ನಿರ್ಣಯ ಕೈಗೊಂಡಿದೆ. ಶೈಕ್ಷಣಿಕ ವರ್ಷದಲ್ಲಿ ಈ ತರಬೇತಿ ಅನುಷ್ಠಾನಗೊಳ್ಳಲಿದೆ.


ವಿದ್ಯಾರ್ಥಿಗಳಲ್ಲಿ ಎಳವೆಯಿಂದಲೇ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಪೂರಕ:
ಪತ್ರಿಕಾಗೋಷ್ಠಿಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಅವರು ಮಾತನಾಡಿ ಹೊಸತನ ಹಾಗೂ ವಿನೂತನ ಕಲ್ಪನೆಗಳ ಸಾಕಾರ ಕೇಂದ್ರವೆನಿಸಿರುವ ಸಂಸ್ಥೆಯಲ್ಲಿ ಮುಂದಿನ ದಿನಗಳಲ್ಲಿ ವಿಜ್ಞಾನ ಹಾಗೂ ತಾಂತ್ರಿಕ ಕ್ಷೇತ್ರಕ್ಕೆ ವಿದ್ಯಾರ್ಥಿಗಳನ್ನು ತಯಾರು ಮಾಡುವ, ತನ್ಮೂಲಕ ವೈಜ್ಞಾನಿಕ ರಂಗದಲ್ಲಿ ತನ್ನ ಛಾಪನ್ನೊತ್ತುವ ನೆಲೆಯಲ್ಲಿ ನೂತನ ಕಾರ್ಯಯೋಜನೆ ಹಮ್ಮಿಕೊಂಡಿದೆ. ಆ ನೆಲೆಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ಸಂಸ್ಥೆಯಲ್ಲಿ ರೋಬೋಟಿಕ್ಸ್ ಹಾಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಅನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡುವ ನಿರ್ಣಯ ಕೈಗೊಳ್ಳಲಾಗಿದೆ. ಪುತ್ತೂರಿನಲ್ಲಿ ಮೊತ್ತಮೊದಲ ಬಾರಿಗೆ ವಿದ್ಯಾಲಯವೊಂದರಲ್ಲಿ ಇಂತಹದ್ದೊಂದು ಕಲಿಕೆ ಆರಂಭಗೊಳ್ಳುತ್ತಿದೆ ಎಂದು ಅವರು ಹೇಳಿದರು.


ವಿದ್ಯಾರ್ಥಿಗಳಿಗೆ ಏನು ಲಾಭ?
ರೋಬೋಟಿಕ್ಸ್ ಹಾಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಈಗ ಸಾಕಷ್ಟು ಪ್ರವರ್ಧಮಾನಕ್ಕೆ ಬರುತ್ತಿದ್ದು ವೈಜ್ಞಾನಿಕ ಕ್ಷೇತ್ರದಲ್ಲಿ ಸದ್ದು ಮಾಡುತ್ತಿವೆ. ಮುಂದಿನ ದಿನಗಳಲ್ಲಿ ವಿಜ್ಞಾನ ಕ್ಷೇತ್ರ ಈ ಎರಡು ಸಂಗತಿಗಳ ನೆಲೆಯಲ್ಲಿಯೇ ಬೆಳೆದುಬರಲಿದೆ. ಈಗಾಗಲೇ ಇಂಜಿನಿಯರಿಂಗ್‌ನಂತಹ ಕಾಲೇಜುಗಳಲ್ಲಿ ಈ ವಿಷಯದಲ್ಲೇ ಪದವಿ ಶಿಕ್ಷಣ ಕೈಗೆತ್ತಿಕೊಳ್ಳಲಾಗಿದ್ದು ಆನೇಕ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಹಾಗೂ ಅಪಾರ ಬೇಡಿಕೆ ಈ ಕ್ಷೇತ್ರಕ್ಕಿದೆ. ಜತೆಗೆ, ಇದು ವಿದ್ಯಾರ್ಥಿಗಳಲ್ಲಿ ಎಳವೆಯಿಂದಲೇ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಪೂರಕವಾಗಲಿದೆ. ಕಂಪ್ಯೂಟರ್ ಚಿಪ್ಸ್ ತಯಾರಿ, ರೋಬೋಟ್ ನಿರ್ಮಾಣದಂತಹ ಕಾರ್ಯಗಳನ್ನು ಈವರೆಗೆ ಇಂಜಿನಿಯರಿಂಗ್ ಓದುತ್ತಿರುವ ಆಥವ ಓದಿದ ವಿದ್ಯಾರ್ಥಿಗಳು ಕೈಗೆತ್ತಿಕೊಳ್ಳುವ ಸಂದರ್ಭವಿದ್ದರೆ ಇನ್ನು ಮುಂದೆ ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಅಂತಹ ಮಾರ್ಗದರ್ಶನ, ಪ್ರೇರಣೆ ದೊರಕಲಿದೆ. ಮನೆಯಲ್ಲಿಯೇ ವಿವಿಧ ಬಗೆಯ ನ್ಯಾನೋ ತಂತ್ರಜ್ಞಾನ ಹಾಗೂ ರೋಬೋಟಿಕ್ ತಂತ್ರಜ್ಞಾನವನ್ನು ರೂಪಿಸುವ ಕಲೆ ವಿದ್ಯಾರ್ಥಿಗಳಿಗೆ ಸಿದ್ಧಿಸಲಿದೆ. ಇದರಿಂದಾಗಿ ವಿಜ್ಞಾನ ಕ್ಷೇತ್ರಕ್ಕೆ ಅಂಬಿಕಾ ವಿದ್ಯಾಲಯ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗುವುದಲ್ಲದೆ ವಿದ್ಯಾರ್ಥಿಗಳನ್ನು ವಿಜ್ಞಾನಿಗಳನ್ನಾಗಿ ಪರಿವರ್ತಿಸುವ ಕಾರ್ಯ ಈ ತರಬೇತಿಯಿಂದ ನಡೆಯಲಿದೆ. ಇದಲ್ಲದೆ ತಮ್ಮ ಮುಂದಿನ ಶಿಕ್ಷಣದ ಸಂದರ್ಭದಲ್ಲಿ ರೋಬೋಟಿಕ್ ಹಾಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ವಿಷಯಗಳನ್ನು ಆಯ್ಕೆ ಮಾಡುವ ವಿದ್ಯಾರ್ಥಿಗಳಿಗೆ ಆ ಅಧ್ಯಯನ ಸುಲಭ ಸಾಧ್ಯವಾಗಲಿದೆ. ಅಂಬಿಕಾ ವಿದ್ಯಾಲಯದಲ್ಲಿ ಈ ತರಬೇತಿಯನ್ನು ಪಡೆದಿರುವುದು. ಅವರ ಭವಿಷ್ಯಕ್ಕೆ ಬಹುದೊಡ್ಡ ಪ್ರಯೋಜನವನ್ನೊದಗಿಸಲಿದೆ ಎಂದು ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.


ದೇಶಕ್ಕೂ ಇದೆ ಪ್ರಯೋಜನ:
ಇಂದು ನ್ಯಾನೋ ತಂತ್ರಜ್ಞಾನದಲ್ಲಿ ಚೀನಾ ಇಡಿಯ ಪ್ರಪಂಚದಲ್ಲೇ ಪ್ರಭುತ್ವವನ್ನು ಸಾಧಿಸಲು ಹೊರಟಿದ. ಯಾವುದೇ ವಸ್ತುಗಳ ತಯಾರಿಕೆ, ಅದರ ನ್ಯಾನೋ ಭಾಗಗಳ ಸಿದ್ಧಪಡಿಸುವಿಕೆಯಲ್ಲಿ ಚೀನಾ ಮೇಲುಗೈ ಎನಿಸುತ್ತಿದೆ. ಈ ವಿಚಾರವನ್ನು ನಾವು ಲಘುವಾಗಿ ಪರಿಗಣಿಸಿದಲ್ಲಿ ಮುಂದಿನ ದಿನಗಳಲ್ಲಿ, ಚೀನಾದ ತಾಂತ್ರಿಕ ದಾಸ್ಯಕ್ಕೆ ಪ್ರಪಂಚವೇ ಒಳಗಾಗಬೇಕಾದ ಅಪಾಯವಿದೆ. ಇಂತಹ ಸಂದರ್ಭದಲ್ಲಿ ಚೀನಾಕ್ಕೆ ಸಡ್ಡು ಹೊಡೆಯುವ ಬುದ್ಧಿಮತ್ತೆ ಮತ್ತು ಸಾಧ್ಯತೆ ಭಾರತಕ್ಕಷ್ಟೇ ಇದೆ ಎಂಬುದು ಜಗತ್ತಿಗೇ ತಿಳಿದಿದೆ. ಹಾಗೂ ಭಾರತದಿಂದ ನಿರೀಕ್ಷೆ ಸಾಕಷ್ಟಿದೆ. ಹಾಗಾಗಿ ನಮ್ಮ ಮಕ್ಕಳನ್ನು ಎಳವೆಯಿಂದಲೇ ರೂಪಿಸಲು ಅಂಬಿಕಾ ವಿದ್ಯಾಲಯ ಸಜ್ಜಾಗಿದೆ. ದೇಶ ಮೊದಲು ಎಂಬ ಕಲ್ಪನೆಯಡಿ ಶಿಕ್ಷಣದ ಪ್ರಸರಣದಲ್ಲಿ ತೊಡಗಿರುವ ಅಂಬಿಕಾ ವಿದ್ಯಾಲಯ, ಇದೀಗ ಆಧುನಿಕ ತಂತ್ರಜ್ಞಾನ ಆಧಾರಿತ ಶಿಕ್ಷಣದೊಂದಿಗೆ ಅದಕ್ಕೆ ಪೂರಕವಾದ ಮತ್ತೊಂದು ಮಹತ್ತರ ಹೆಜ್ಜೆಯನ್ನಿರಿಸಿದೆ ಎಂದು ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.


ಮಕ್ಕಳಿಗೆ ನೈಪುಣ್ಯತೆ ಕೊಡಬೇಕು:
ಸ್ವಾಭಿಮಾನ, ಸ್ವಾವಲಂಭನೆಯನ್ನು ನಮ್ಮಲ್ಲಿ ಮಕ್ಕಳಿಗೆ ಕಲಿಸುತ್ತೇವೆ. ಮಕ್ಕಳನ್ನು ಪರೀಕ್ಷೆಗೆ ತಯಾರು ಮಾಡುವುದಲ್ಲ. ನೈಪುಣ್ಯತೆಯಲ್ಲಿ ತನ್ನ ಕಾಲ ಮೇಲೆ ನಿಲ್ಲುವಂತೆ ಅವಕಾಶ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಅಂಬಿಕಾ ಸಂಸ್ಥೆ ದಾಪುಕಾಲು ಇಡುತ್ತಿದೆ. ಪ್ರತಿಯೊಂದು ಶಿಕ್ಷಣ ಸಂಸ್ಥೆ ಇದನ್ನು ಅನುಕರಣೆ ಮಾಡಬೇಕೆಂದು ಸುಬ್ರಹ್ಮಣ್ಯ ನಟ್ಟೋಜ ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಅಂಬಿಕಾ ವಿದ್ಯಾಲಯದ ಖಜಾಂಜಿ ರಾಜಶ್ರೀ ನಟ್ಟೋಜ, ಪದವಿ ಕಾಲೇಜಿನ ಪ್ರಾಂಶುಪಾಲ ಗಣೇಶ್, ಸಿಬಿಎಸ್‌ಇ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲೆ ಮಾಲತಿ, ಸಂಸ್ಥೆಯ ನಿರ್ದೇಶಕ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.

ಎಲ್‌ಕೆಜಿಯಿಂದಲೇ ಜೀವನ ಶಿಕ್ಷಣ
ಪುತ್ತೂರಿನ ಶಿಕ್ಷಣ ಕ್ಷೇತ್ರದಲ್ಲಿ ಆನೇಕ ಮೊದಲುಗಳನ್ನು ಸಂಸ್ಥೆ ಹುಟ್ಟುಹಾಕಿದೆ. ಪುತ್ತೂರು ತಾಲೂಕಿನಲ್ಲಿನ ಶಿಕ್ಷಣ ಸಂಸ್ಥೆಗಳ ಪೈಕಿ ಈಜು ಕೊಳ ಹೊಂದಿರುವ ಏಕೈಕ ಶಿಕ್ಷಣ ಸಂಸ್ಥೆ ಅಂಬಿಕಾ ವಿದ್ಯಾಲಯ, ಅಂತೆಯೇ ನಿಗದಿತ ಪಠ್ಯದೊಂದಿಗೆ ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣ ಕೊಡುವ, ಬದುಕಿನ ಅನುಭವ ಕಟ್ಟಿಕೊಡುವ ಕಾರ್ಯದಲ್ಲೂ ಅಂಬಿಕಾ ಸಂಸ್ಥೆ ತೊಡಗಿಕೊಂಡಿದೆ. ಹಾಗಾಗಿ, ಇಲ್ಲಿ ಎಲ್.ಕೆ.ಜಿ ತರಗತಿಗೆ ದಾಖಲಾತಿ ಹೊಂದುವ ವಿದ್ಯಾರ್ಥಿಯೊಬ್ಬ ಆ ವರ್ಷದಿಂದಲೇ ಜೀವನ ಶಿಕ್ಷಣವನ್ನೂ ಕರಗತ. ಮಾಡಿಕೊಳ್ಳುತ್ತಾನೆ.
ಸುಬ್ರಹ್ಮಣ್ಯ ನಟ್ಟೋಜ, ಸಂಚಾಲಕರು ಅಂಬಿಕಾ ವಿದ್ಯಾಲಯ

ಪ್ರತಿ ತರಗತಿಗೆ ಇಂಟರಾಕ್ಟಿವ್ ಸ್ಕಾರ್ಟ್ ಬೋರ್ಡ್
ವಿದ್ಯಾರ್ಥಿಗಳು ಅಧ್ಯಯನ ಸಾಧ್ಯತೆಯನ್ನು ವಿಸ್ತರಿಸುವುದಕ್ಕಾಗಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಇಂಟರಾಕ್ಟಿವ್ ಸ್ಟಾರ್ಟ್ ಬೋರ್ಡ್‌ಗಳನ್ನು ಅಳವಡಿಸಲಾಗುತ್ತಿದೆ. ಇಂತಹ ಒಂದು ಸ್ಮಾರ್ಟ್ ಬೋರ್ಡ್‌ಗೆ ಸುಮಾರು ರೂ.೧.೭ ಲಕ್ಷಕ್ಕಿಂತಲೂ ಅಧಿಕ ಬೆಲೆಯಿದೆ. ಈ ಬೋರ್ಡ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮೂಲಕ ಕಾರ್ಯ ನಿರ್ವಹಿಸುತ್ತಿದ್ದು, ೩ ಡಿ ತಂತ್ರಜ್ಞಾನ, ೪ ಕೆ ರೆಸಲ್ಯೂಶನ್ ಜತೆಗೆ ಅತ್ಯಂತ ಆಧುನಿಕ ಇಂಟರಾಕ್ಟಿವ್, ತಂತ್ರಜ್ಞಾನ ಹೊಂದಿದೆ. ಇದರಿಂದಾಗಿ ವಿದ್ಯಾರ್ಥಿಗಳ ಕಲಿಕಾ ಮತ್ತು ಗ್ರಹಿಕಾ ಸಾಮರ್ಥ್ಯ ಗಣನೀಯವಾಗಿ ಹೆಚ್ಚಾಗಲಿದ್ದು, ಪಠ್ಯವನ್ನು ಸುಲಲಿತವಾಗಿ ಅರ್ಥ ಮಾಡಿಕೊಳ್ಳುವಲ್ಲಿ ಈ ಬೋರ್ಡ್ ಉಪಯುಕ್ತವೆನಿಸಲಿದೆ.
ಸುಬ್ರಹ್ಮಣ್ಯ ನಟ್ಟೋಜ, ಸಂಚಾಲಕರು ಅಂಬಿಕಾ ವಿದ್ಯಾಲಯ

LEAVE A REPLY

Please enter your comment!
Please enter your name here