ಕಾರ್ಯನಿರತ ಪತ್ರಕರ್ತರಿಗೆ ಅಂಚೆ ಮತದಾನಕ್ಕೆ ಅವಕಾಶ ನೀಡಿದ ಚುನಾವಣಾ ಆಯೋಗ

0

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಕಾರ್ಯ ನಿರತ ಪತ್ರಕರ್ತರಿಗೆ ಅಂಚೆ ಮತದಾನ (ಪೋಸ್ಟಲ್ ವೋಟಿಂಗ್) ಮಾಡಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಈ ಕುರಿತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ)ಮಾಡಿದ ಮನವಿ ಪುರಸ್ಕರಿಸಿರುವ ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ಇಂಥದ್ದೊಂದು ಅವಕಾಶ ಕಲ್ಪಿಸಿದೆ.

ಇದರಿಂದಾಗಿ ನಾನಾ ಕಡೆಯಲ್ಲಿ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಯನಿರತ ಪತ್ರಕರ್ತರು ಮತದಾನ ವಂಚಿತರಾಗುವುದು ತಪ್ಪಿದಂತಾಗಿದೆ.ಕರ್ತವ್ಯ ನಿರತರಾಗಿದ್ದಲ್ಲಿಂದಲೇ (ಅಗತ್ಯವಿದ್ದವರು) ತಮ್ಮ ಮತವಿರುವ ಕ್ಷೇತ್ರದಲ್ಲಿ ಮತದಾನ ಮಾಡಲು ಅವಕಾಶ ದೊರೆತಿರುವುದು ಅನುಕೂಲವಾಗಿದೆ ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ತಿಳಿಸಿದ್ದಾರೆ.

ಆನ್‌ಲೈನ್ ವೋಟಿಂಗ್ ಅವಕಾಶ ಕೋರಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಕೆಯುಡಬ್ಲ್ಯೂಜೆ ಪತ್ರ ಬರೆದಿತ್ತು. ದೃಶ್ಯ, ಮುದ್ರಣ, ರೇಡಿಯೋ ಮಾಧ್ಯಮಗಳ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುವ ಪತ್ರಕರ್ತರು ಪ್ರತಿ ಚುನಾವಣೆ ವೇಳೆಯಲ್ಲೂ ಮತದಾನದಿಂದ ವಂಚಿತರಾಗುತ್ತಿದ್ದಾರೆ ಎನ್ನುವ ವಿಷಯವನ್ನು ಸಂಘ ಆಯೋಗದ ಗಮನಕ್ಕೆ ತಂದಿತ್ತು. ಕಾರ್ಯದೊತ್ತಡದ ನಡುವೆ ತಮ್ಮ ಸ್ವಂತ ಕ್ಷೇತ್ರಗಳಿಗೆ ಹೋಗಿ ಮತದಾನ ಮಾಡಲು ಆಗುತ್ತಿಲ್ಲ.ಹೀಗಾಗಿ ಬಹುತೇಕ ಪತ್ರಕರ್ತರು ಮತದಾನದಿಂದ ದೂರವೇ ಉಳಿಯುತ್ತಿದ್ದಾರೆ.ಆದ್ದರಿಂದ ಅಗತ್ಯವಿರುವ ಪತ್ರಕರ್ತರಿಗೂ ಆನ್ ಲೈನ್ ಮೂಲಕ ಮತದಾನ ಮಾಡುವ ವ್ಯವಸ್ಥೆ ಮಾಡಿಕೊಡಬೇಕು ಎಂದು ಕೆಯುಡಬ್ಲ್ಯೂಜೆ ವಿನಂತಿಸಿಕೊಂಡಿತ್ತು.ಪತ್ರಕರ್ತರ ಬೇಡಿಕೆ ಪರಿಗಣಿಸಿ ಪೋಸ್ಟಲ್ ವೋಟಿಂಗ್ ಅವಕಾಶ ಮಾಡಿಕೊಟ್ಟಿರುವ ಚುನಾವಣಾ ಆಯೋಗಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಧನ್ಯವಾದ ಸಲ್ಲಿಸುವುದಾಗಿ ಕೆಯುಡಬ್ಲ್ಯೂಜೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here