ವಿಜೃಂಭಣೆಯಿಂದ ನಡೆದ ತೆಗ್ಗು ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ

0

ಪುತ್ತೂರು: : ಸುಮಾರು 300 ಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಅತ್ಯಂತ ಕಾರಣಿಕತೆಯಿಂದ ಕೂಡಿರುವ ಕೆಯ್ಯೂರು ಗ್ರಾಮದ ತೆಗ್ಗು ಶಾಲಾ ಬಳಿಯ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.29 ರಂದು ವಿಜೃಂಭಣೆಯಿಂದ ಜರಗಿತು. ಕೋಡಂಬು ಕುಟುಂಬಸ್ಥರಾದ ಪಕೀರರವರು ಆರಾಧಿಸಿಕೊಂಡು ಬಂದಿರುವ ಶ್ರೀವಿಷ್ಣುಮೂರ್ತಿ ದೈವದ ಒತ್ತೆಕೋಲವನ್ನು ಅವರ ಬಳಿಕ ಪೊಡಿಯ, ಕುಂಞರವರುಗಳು ನಡೆಸಿಕೊಂಡು ಬಂದರು. ಪ್ರಸ್ತುತ ಬಾಬು ತೆಗ್ಗು ಹಾಗೂ ಕುಟುಂಬಸ್ಥರು ಊರಪರವೂರ ಭಕ್ತಾಧಿಗಳ, ದಾನಿಗಳ ಸಹಕಾರ ಪಡೆದುಕೊಂಡು ನಡೆಸಿಕೊಂಡು ಬರುತ್ತಿದ್ದಾರೆ. ಅಪಾರ ಕಾರಣಿಕತೆಯನ್ನು ಹೊಂದಿರುವ ಇಲ್ಲಿನ ಶ್ರೀ ವಿಷ್ಣುಮೂರ್ತಿ ದೈವವು ನಂಬಿದ ಭಕ್ತರ ಸಕಲ ಇಷ್ಟಾರ್ಥಗಳನ್ನು ಈಡೇರಿಸುತ್ತದೆ ಎಂಬ ನಂಬಿಕೆ ಇದೆ.

ಬೆಳಿಗ್ಗೆ ಗಣಪತಿ ಹೋಮ ನಡೆದು ಸಂಜೆ ಭಂಡಾರ ತೆಗೆಯುವ ಕಾರ್ಯಕ್ರಮ ನಡೆಯಿತು. ರಾತ್ರಿ ಮೇಲರಿಗೆ ಅಗ್ನಿಸ್ಪರ್ಶ ಕಾರ್ಯಕ್ರಮ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಬಳಿಕ ಕುಳಿಚ್ಚಾಟು ದೈವದ ನರ್ತನ ಸೇವೆ ನಡೆಯಿತು. ಮಾ.30 ರಂದು ಪ್ರಾತಃಕಾಲ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ ನಡೆದು ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆಯಿತು. ಬೆಳಿಗ್ಗೆ ಗುಳಿಗ ಕೋಲ ನಡೆಯಿತು. ಊರ ಪರವೂರ ಸಾವಿರಾರು ಭಕ್ತರು ಆಗಮಿಸಿ ಶ್ರೀ ದೈವದ ಗಂಧ ಪ್ರಸಾದದೊಂದಿಗೆ ಅನ್ನಪ್ರಸಾದ ಸ್ವೀಕರಿಸಿದರು.

ಮನರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು
ಒತ್ತೆಕೋಲದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ರಾತ್ರಿ ಊರ ಹಾಗೂ ಪರವೂರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾಜ್ಯಪ್ರಶಸ್ತಿ ಪುರಸ್ಕೃತ ನೃತ್ಯತಂಡ ಮಂಜು ಬ್ರದರ‍್ಸ್ ಸುಳ್ಯ ಬಳಗದವರ ನೃತ್ಯ ಕಾರ್ಯಕ್ರಮ ಮನರಂಜಿಸಿತು. ಶಾರದಾ ಆರ್ಟ್ಸ್ ತಂಡ ಐಸಿರಿ ಕಲಾವಿದೆರ್ ಮಂಜೇಶ್ವರ ಅಭಿನಯದ ಜಿಲ್ಲಾ ಪ್ರಶಸ್ತಿ ವಿಜೇತ ರವಿ ರಾಮಕುಂಜ ನಾಯಕತ್ವದಲ್ಲಿ ನಡೆದ ‘ ಮಲ್ಲ ಸಂಗತಿಯೇ ಅತ್ತ್’ ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು. ನಾಟಕ, ಮಕ್ಕಳ ನೃತ್ಯ ಕಾರ್ಯಕ್ರಮವನ್ನು ನೂರಾರು ಮಂದಿ ವೀಕ್ಷಿಸಿದರು.

LEAVE A REPLY

Please enter your comment!
Please enter your name here