![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು:ಎರಡು ತಿಂಗಳ ಹಿಂದೆಯಷ್ಟೆ ವಿವಾಹವಾಗಿದ್ದ ನವ ವಿವಾಹಿತೆಯೋರ್ವರು ತವರು ಮನೆಯಲ್ಲಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಗುಡ್ಡಕೋಡಿ ಬಾಳಪ್ಪ ಪೂಜಾರಿಯವರ ಪುತ್ರಿ ಹರ್ಷಿತಾ(28ವ.)ಮೃತಪಟ್ಟವರು. ಹರ್ಷಿತಾ ಮತ್ತು ಬಲ್ನಾಡು ದಿ.ನಾರಾಯಣ ಪೂಜಾರಿಯವರ ಮಗ, ಕೆಮ್ಮಿಂಜೆ ದೇವಳದ ಮ್ಯಾನೇಜರ್ ಆಗಿರುವ ಪ್ರಶಾಂತ್ ಅವರ ವಿವಾಹ ಇದೇ ಫೆ.10ರಂದು ನಡೆದಿತ್ತು. ಮದುವೆಯಾದ ಬಳಿಕ ಗಂಡನ ಮನೆಯಲ್ಲಿ ವಾಸ್ತವ್ಯವಿದ್ದ ಹರ್ಷಿತಾರವರು ಏ.23ರಂದು ತನ್ನ ತಾಯಿ ಮನೆಯ ನೆರೆಮನೆಯಲ್ಲಿ ನಡೆದ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹೋಗಲೆಂದು ಪತಿ ಮನೆಯಿಂದ ತಾಯಿ ಮನೆಗೆ ಹೋಗಿದ್ದರು.ಅಲ್ಲಿ ಏ.24ರಂದು ರಾತ್ರಿ ಸುಮಾರು 11 ಗಂಟೆಗೆ ಬಚ್ಚಲು ಮನೆಗೆ ಹೋಗಿ ಬಂದ ಆಕೆ, ತಾನು ಕ್ರಿಮಿನಾಶಕ ವಿಷ ಪದಾರ್ಥವನ್ನು ಸೇವಿಸಿರುವುದಾಗಿ ತಾಯಿಯೊಂದಿಗೆ ಹೇಳಿ ಅಸೌಖ್ಯಗೊಂಡಿದ್ದರು. ಬಳಿಕ ತಾಯಿ, ಮಗ ಮತ್ತು ಸಂಬಂಧಿ ಅಣ್ಣ ಚೆನ್ನಪ್ಪ ಅಂಚನ್ರವರು ಮಂಗಳೂರು ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದ ಹರ್ಷಿತಾ ಅವರು ಏ.25ರಂದು 2.30 ಗಂಟೆಗೆ ಮೃತಪಟ್ಟಿದ್ದರು. ಮಗಳು ಹರ್ಷಿತಾ ಮಾನಸಿಕ ಖಿನ್ನತೆಯಿಂದ ಯಾವುದೋ ಕ್ರಿಮಿನಾಶಕ ವಿಷಪದಾರ್ಥವನ್ನು ಸೇವಿಸಿ ಅಸೌಖ್ಯಗೊಂಡು ಚಿಕಿತ್ಸೆ ಸಮಯ ಮೃತಪಟ್ಟಿದ್ದು ಆಕೆಯ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲ ಎಂದು ಮೃತರ ತಾಯಿ ಯಶೋಧಾ ಅವರು ನೀಡಿರುವ ದೂರಿನಂತೆ ಪುತ್ತೂರು ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.