ಪುತ್ತೂರುನಲ್ಲಿ ಬಿಜೆಪಿ ಮಹಿಳಾ ಸಮಾವೇಶ

0

ಮಹಿಳಾ ಶಕ್ತಿಯ ಅವಕಾಶ ಸದುಪಯೋಗವಾಗಲಿ-ಡಾ.ಭಾರತಿಪ್ರವೀಣ್ ಪವಾರ್

  • ಹಿಂದುತ್ವಕ್ಕೆ ಧೈರ್ಯ ತುಂಬುವ ಕೆಲಸ ಬಿಜೆಪಿಯಿಂದಾಗಿದೆ-ಆಶಾ ತಿಮ್ಮಪ್ಪ
  • ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದೇವೆ -ಪ್ರತಾಪಸಿಂಹ ನಾಯಕ್
  • ಪುತ್ತೂರಿನಲ್ಲಿ ಸವಾಲನ್ನು ಎದುರಿಸಬೇಕು -ಮಠಂದೂರು
  • ತನ್ನ ಗೆಲುವಿನ ಜೊತೆಗೆ ಲೋಕ ಸುಭಿಕ್ಷೆಗೆ ಪ್ರಾರ್ಥನೆ ಮಾಡಿದ ಆಶಕ್ಕ -ಧನಲಕ್ಷ್ಮೀ ಗಟ್ಟಿ
  • ಪ್ರಯತ್ನವಿದ್ದರೆ ಯಾವುದನ್ನೂ ಕೂಡಾ ಅಚೀವ್ ಮಾಡಬಹುದು -ಮಲ್ಲಿಕಾಪ್ರಸಾದ್

ಪುತ್ತೂರು: ಪ್ರಧಾನಿ ನರೇಂದ್ರ ಮೋದಿ ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯ ನೀಡುವ ಮುಖಾಂತರ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ದೇಶದ ಅತ್ಯಂತ ದೊಡ್ಡ ಗೌರವದ ಸ್ಥಾನವಾದ ರಾಷ್ಟ್ರಪತಿ ಸ್ಥಾನವನ್ನು ಕಟ್ಟಕಡೆಯ ದಲಿತ ಮಹಿಳೆ ದ್ರೌಪದಿ ಮುರ್ಮು ಅವರಿಗೆ ನೀಡಿದ್ದು ಬಿಜೆಪಿ ಸರಕಾರ. ಆದರೆ ಕಾಂಗ್ರೆಸ್ ದಲಿತ ಮಹಿಳೆಯನ್ನು ರಾಷ್ಟ್ರಪತಿ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿ ತನ್ನದೇ ಇನ್ನೊಂದು ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಮಹಿಳೆಯರ ಬಗ್ಗೆ ಮಾತನಾಡುವ ಕಾಂಗ್ರೆಸ್‌ನವರಿಗೆ ಮಹಿಳೆಯರು ಈ ವಿಚಾರವನ್ನು ಪ್ರಶ್ನಿಸಬೇಕೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಡಾ.ಭಾರತಿ ಪ್ರವೀಣ್ ಪವಾರ್ ಹೇಳಿದರು.

ಪುತ್ತೂರು ಜೈನಭವನದಲ್ಲಿ ಏ.26ರಂದು ನಡೆದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು.‘ಮಾಂತೆರೆಗ್ಲ ನಮಸ್ಕಾರ, ಎಂಚ ಉಲ್ಲರ್’ ಎಂದು ಮಾತು ಆರಂಭಿಸಿದ ಸಚಿವರು, ನನಗೆ ತುಳು ಭಾಷೆಯನ್ನು ಕಲಿಸಿಕೊಟ್ಟವರು ಸಂಜೀವಣ್ಣ ಎಂದರು. ಕೇಂದ್ರದ ಮೋದಿ ಸರಕಾರ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಆ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿದೆ. ಆದರೆ ಕಾಂಗ್ರೆಸ್ ಕೇವಲ ಭಾಷಣದಲ್ಲಿ ಮಾತ್ರ ಮಹಿಳೆಯರ ಸಮ್ಮಾನದ ಬಗ್ಗೆ ಮಾತನಾಡುತ್ತಿದೆ. ಇದಕ್ಕೆ ಒಂದು ಉದಾಹರಣೆ ದೇಶದ ರಾಷ್ಟ್ರಪತಿ ಚುನಾವಣೆ ಎಂದರು. ಜನಧನ್, ಜನೌಷಧಿ, ಅಂತ್ಯೋದಯ ಹಾಗು ಇತರ ಜನೋಪಕಾರಿ ಯೋಜನೆಗಳನ್ನು ಕೇಂದ್ರ ಸರಕಾರ ಜಾರಿಗೆ ತಂದಿದ್ದು, ಇದರ ಸದುಪಯೋಗವನ್ನು ದೇಶದ ಜನ ಪಡೆದುಕೊಳ್ಳುತ್ತಿದ್ದಾರೆ ಎಂದ ಅವರು, ದೇಶದಲ್ಲಿ ಆರ್ಥಿಕವಾಗಿ ಮಹಿಳೆಯರು ಮುಂದೆ ಬರಬೇಕು. ಅವರಿಗೆ ಸಮಾಜದಲ್ಲಿ ಮಾನ್-ಸಮ್ಮಾನ್ ಸಿಗಬೇಕು. ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರು ಶಿಕ್ಷಣ, ಸಾಮಾಜಿಕ, ಆರ್ಥಿಕವಾಗಿ ಮುಂದೆ ಬರಬೇಕು.ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ರಾಜಕೀಯವಾಗಿ ಮಹಿಳೆಯರಿಗೆ ಶಕ್ತಿ ನೀಡಿದಾಗ ಸಾಮಾಜಿಕ, ಶಿಕ್ಷಣ, ಆರ್ಥಿಕ ಪ್ರಗತಿ ಸಾಧ್ಯ ಎಂದು ಚಿಂತನೆ ಮಾಡಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಇದಕ್ಕೆ ಉದಾಹರಣೆಯಾಗಿ ನಾನೇ ನಿಮ್ಮ ಮುಂದೆ ನಿಂತಿದ್ದೇನೆ ಎಂದರು. ಪುತ್ತೂರಿನ ಶಾಸಕರಾದ ಸಂಜೀವ ಮಠಂದೂರು ಕ್ಷೇತ್ರಕ್ಕಾಗಿ ಹಲವು ಜನಪರ ಕಾರ್ಯಗಳನ್ನು ಮಾಡಿದ್ದು, 200 ಅಂಗನವಾಡಿ ಕೇಂದ್ರಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವ ಮೂಲಕ ಮಕ್ಕಳ ಆರೋಗ್ಯದ ಕಾಳಜಿಯನ್ನೂ ವಹಿಸಿದ್ದಾರೆ ಎಂದು ಸಚಿವೆ ಡಾ.ಪವಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಹಿಂದುತ್ವಕ್ಕೆ ಧೈರ್ಯ ತುಂಬುವ ಕೆಲಸ ಬಿಜೆಪಿಯಿಂದಾಗಿದೆ: ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಮಾತನಾಡಿ ಬಿಜೆಪಿ ಸರಕಾರ ಬಂದ ಬಳಿಕ ಸಾಮಾನ್ಯ ಮಹಿಳೆಗೂ ಅವಕಾಶ ನೀಡಿ ಆಕೆಗೆ ಶಕ್ತಿ ತುಂಬುವ ಕೆಲಸ ಆಗಿದೆ. ಮನೆಯೊಳಗಿದ್ದ ಮಹಿಳೆ ಇವತ್ತು ಹೇಗೆ ಎಲ್ಲರನ್ನು ಸಮಾನವಾಗಿ ನೋಡುತ್ತಾಳೋ ಅದೇ ಚಿಂತನೆಗೆ ಪೂರಕವಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡಿದ್ದಾರೆ. ನಮ್ಮನ್ನು ಚುನಾವಣಾ ಕಣಕ್ಕಿಳಿಸಿದ್ದಾರೆ. ಇದರ ಜೊತೆಗೆ ಕಟ್ಟಕಡೆಯ ವ್ಯಕ್ತಿಯೂ ಗ್ರಾ.ಪಂ ಸದಸ್ಯೆಯಾದಾಗ ಬಳಿಕ ಆಕೆಯ ಜೀವನ ನಿರ್ವಹಣೆಗೆ ಗೌರವ ಧನವನ್ನು ಏರಿಸಿದ್ದಾರೆ. ಒಟ್ಟಿನಲ್ಲಿ ಬಿಜೆಪಿ ಬಂದ ಬಳಿಕ ತಾಯಿಗೆ ಹೆಚ್ಚಿನ ಪ್ರೋತ್ಸಾಹ ಸಿಕ್ಕಿದೆ. ಇದರ ಜೊತೆಗೆ ಮಹಿಳೆ ಹಾಗೂ ಮಕ್ಕಳು ನಿರ್ಭೀತವಾಗಿ ರಸ್ತೆಯಲ್ಲಿ ಓಡಾಡುವಂತಾಗಿದೆ. ಹಿಂದುತ್ವಕ್ಕೆ ಧೈರ್ಯ ತುಂಬುವ ಕೆಲಸವನ್ನು ಬಿಜೆಪಿ ಮಾಡುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಮಹಿಳೆಯರು ಮನೆ ಮನೆಗೆ ತೆರಳಿ ಸರ್ಕಾರದ ಯೋಜನೆಯನ್ನು ತಿಳಿಸಿ ಮನಪರಿವರ್ತನೆ ಮಾಡುವ ಮೂಲಕ ಎಲ್ಲರೂ ಒಟ್ಟಾಗಿ ಪುತ್ತೂರನ್ನು ಗೆಲ್ಲಿಸುವ ಅಗತ್ಯವಿದೆ ಎಂದರು. ನಮ್ಮ ಶಾಸಕ ಸಂಜೀವ ಮಠಂದೂರು ಅವರು ಹಲವು ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ಅವರ ಋಣವನ್ನು ತೀರಿಸುವ ಕೆಲಸ ಆಗಬೇಕಾಗಿದೆ ಎಂದರು.

ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದೇವೆ: ವಿಧಾನ ಪರಿಷತ್ತು ಶಾಸಕ ಪ್ರತಾಪಸಿಂಹ ನಾಯಕ್ ಅವರು ದಿಕ್ಸೂಚಿ ಭಾಷಣ ಮಾಡಿದರು. ದೇಶದ ಪ್ರಗತಿ ಆಗಬೇಕಾದರೆ ಪುರುಷರಿಗೆ ಸಮಾನವಾಗಿ ಮಹಿಳೆಯರೂ ಇರಬೇಕು. ಈ ನಿಟ್ಟಿನಲ್ಲಿ ಹೆಚ್ಚಿಗೆ ಇರುವ ತಾಯಂದಿರಿಗೆ, ಮಹಿಳೆಯರಿಗೆ ನ್ಯಾಯ ಸಮಾನ ಅವಕಾಶ ಸಿಗಬೇಕೆಂಬ ಭಾವನೆ ಮೊದಲಿಂದಲೂ ಬಹಳ ಗಟ್ಟಿಯಾಗಿದೆ. ಹಾಗಾಗಿ ಈ ಚುನಾವಣೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಮಹಿಳೆಯರಿಂದ ಪ್ರಾರಂಭವನ್ನು ಬಿಜೆಪಿ ಮಾಡಿದೆ. ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮಗಿದೆ. ಹಾಗೆಂದು ಕಾಂಗ್ರೆಸ್ ಕೂಡಾ ಮಹಿಳೆಯರಿಗೆ ಸ್ಥಾನ ಮಾನ ಕೊಟ್ಟಿದೆ ಮತ್ತು ಮಹಿಳೆ ಪ್ರಧಾನ ಮಂತ್ರಿ ಆಗಿಲ್ವ ಎಂದು ಪ್ರಶ್ನಿಸಬಹುದು. ಆದರೆ ಇದು, ನೆಹರುರವರ ಏಕ ಮಾತ್ರ ಹೆಣ್ಣು ಮಗಳೆಂದು ಮಾಡಿದ್ದು ಎಂದು ಎಲ್ಲರಿಗೂ ತಿಳಿದಿರಲಿ ಎಂದರು. ಇವತ್ತು ಜಿಲ್ಲೆಯಲ್ಲಿ ಆಡಳಿತ ಮಾಡಿದ ಮಹಿಳೆಗೆ ವಿಧಾನಸಭೆ ಪ್ರವೇಶಿಸಲು ಅವಕಾಶ ನೀಡಬೇಕು. ಮಹಿಳೆಯರಿಗೆ ಸ್ಥಾನ ಕೊಟ್ಟ ಕೂಡಲೇ ಅಪಹಾಸ್ಯದ ಮಾತನ್ನು ಮಾತನಾಡುವುದಾದರೆ ವಿಧಾನಪರಿಷತ್ ಸ್ಥಾನದಲ್ಲಿ 85 ಮಂದಿಯಲ್ಲಿ 3 ಮಂದಿ ಬಿಜೆಪಿ ಮಹಿಳಾ ಸದಸ್ಯರಿದ್ದಾರೆ. ಇವತ್ತು ಬಿಜೆಪಿಯ ಭದ್ರಕೋಟೆಯಲ್ಲಿ ಮಹಿಳೆಗೆ ಅವಕಾಶ ನೀಡಿದೆ. ಎಲ್ಲಿ ಸಂಘಟನೆಯ ಬಲವಿದೆ ಅಲ್ಲಿ ತಾಯಂದಿರಿಗೆ ಅವಕಾಶ ಮಾಡಿಕೊಡುವುದು ಬಿಜೆಪಿ ಎಂದ ಅವರು, 2023ರ ವಿಧಾನಸಭೆ ಚುನಾವಣೆಯ ಗೆಲುವು 2024ರ ಲೋಕಸಭೆ ಚುನಾವಣೆಯ ಪಂಚಾಂಗವಾಗಲಿದೆ. ಸಾಮಾನ್ಯ ಕುಟುಂಬದಿಂದ ಬಂದ ಆಶಾ ತಿಮ್ಮಪ್ಪ ಗೌಡ ಅವರಿಗೆ ಈ ಬಾರಿ ಅವಕಾಶ ನೀಡಲಾಗಿದೆ.ಅವರನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮದು. ನರೇಂದ್ರ ಮೋದಿ ಒಂದೊಂದು ಕಾರ್ಯಕ್ರಮ ಮಹಿಳೆಯರನ್ನು ಸಶಸ್ತೀಕರಣ ಮಾಡುವಲ್ಲಿ ಪ್ರಾಶಸ್ತ್ಯ ಕೊಟ್ಟಿದೆ.ವಿಧಾನ ಸಭೆಯಿಂದ ರಾಷ್ಡ್ರಪತಿಯ ತನಕವೂ ಮಹಿಳೆಗೆ ಅವಕಾಶ ಕೊಟ್ಟಿರುವುದು ಬಿಜೆಪಿ ಮಾತ್ರ. ಪುತ್ತೂರು ಕ್ಷೇತ್ರದಲ್ಲಿ ಪ್ರತಿ ಮನೆಗೂ ಹೋಗಿ ಮಹಿಳಾ ಅಭ್ಯರ್ಥಿಯನ್ನು ಗೆಲ್ಲಿಸುವ ಶಪಥವನ್ನು ಮಾಡಬೇಕೆಂದರು.

ಪುತ್ತೂರಿನಲ್ಲಿ ಸವಾಲನ್ನು ಎದುರಿಸಬೇಕು: ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಈ ಚುನಾವಣೆ ಮಹಿಳೆಯರದ್ದು, ಮುಂದಿನ 13 ದಿನಗಳಲ್ಲಿ ಮತದಾರರ ಬಳಿಗೆ ಹೋಗಿ ಆಶಾಕ್ಕನನ್ನು ಗೆಲ್ಲಿಸುವ ಕೆಲಸ ಆಗಬೇಕು. ನಮ್ಮ ಜಿಲ್ಲೆಯಲ್ಲಿ ಮಹಿಳೆಗೆ ಸ್ಥಾನ ಕೊಟ್ಟಿರುವುದು ಇದೇ ಮೊದಲಲ್ಲ.ಈ ಹಿಂದೆ ಶಕುಂತಳಾ ಶೆಟ್ಟಿಯವರಿಗೆ ಅವಕಾಶ ನೀಡಿ ಅವರನ್ನು ಗೆಲ್ಲಿಸಿತ್ತು.ಆದರೆ ಅವರು ಕೈ ಕೊಟ್ಟರು.ಬಳಿಕ ಮಲ್ಲಿಕಾಪ್ರಸಾದ್ ಅವರಿಗೆ ಅವಕಾಶ ನೀಡಲಾಯಿತು.ಅವರು ಇವತ್ತು ವೇದಿಕೆಯಲ್ಲಿದ್ದಾರೆ.ಇದೀಗ ಆಶಾಕ್ಕನಿಗೆ ಅವಕಾಶ ನೀಡಲಾಗಿದೆ.ಹಾಗಾಗಿ ಪುತ್ತೂರಿನಲ್ಲಿ ಸವಾಲನ್ನು ಎದುರಿಸಬೇಕು ಎಂದರು.

ತನ್ನ ಗೆಲುವಿನ ಜೊತೆಗೆ ಲೋಕಸುಭೀಕ್ಷೆಗೆ ಪ್ರಾರ್ಥನೆ ಮಾಡಿದ ಆಶಕ್ಕ: ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಧನಲಕ್ಷ್ಮೀ ಗಟ್ಟಿ ಅವರು ಮಾತನಾಡಿ ತನ್ನ ಗೆಲುವಿನ ಪ್ರಾರ್ಥನೆಯ ಜೊತೆಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೀಯಾಳಾಭಿಷೇಕ ಮಾಡುವ ಮೂಲಕ ಲೋಕದ ಸುಭಿಕ್ಷೆಗೆ ವರುಣನ ಕೃಪೆಗಾಗಿ ಪ್ರಾರ್ಥನೆ ಮಾಡುವ ಮೂಲಕ ಮಹಿಳೆಗಿರುವ ಸಮಾಜದ ಕಳಕಳಿಯನ್ನು ಆಶಾಕ್ಕ ವ್ಯಕ್ತಪಡಿಸಿದ್ದಾರೆ.ಯಾಕೆಂದರೆ ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷಕ್ಕಿಂತ ದೇಶ ಮುಖ್ಯ ಎಂಬ ತತ್ವ ಸಿದ್ದಾಂತದಡಿಯಲ್ಲಿ ಆಶಾಕ್ಕ ಬೆಳೆದು ಬಂದವರು. ಇವತ್ತು ಪಕ್ಷ ಮಹಿಳೆಗೆ ರಾಜಕೀಯವಾಗಿ ಬೆಳೆಯಲು ಅವಕಾಶ ಕೊಟ್ಟಿದೆ. ಹಾಗಾಗಿ ಕಾರ್ಯಕರ್ತೆಯರು ಬಿಜೆಪಿ ಪಕ್ಷದ ಗೆಲುವಿಗೆ ಪೂರ್ಣಾವಧಿ ಕೆಲಸ ಮಾಡಬೇಕು. ಮುಂದಿಟ್ಟ ಹೆಜ್ಜೆಯನ್ನು ಹಿಂದಿಡುವ ಪ್ರಶ್ನೆಯೇ ಇಲ್ಲ ಎಂದರು.

ಪ್ರಯತ್ನವಿದ್ದರೆ ಯಾವುದನ್ನೂ ಕೂಡಾ ಅಚೀವ್ ಮಾಡಬಹುದು: ಮಾಜಿ ಶಾಸಕಿ ಮಲ್ಲಿಕಾಪ್ರಸಾದ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಬಿಜೆಪಿಯಲ್ಲಿ ಮಹಿಳೆಯರು ಯಾವಾಗಲು ಇದೇ ರೀತಿ ಒಗ್ಗಟ್ಟಾಗಿ ಜೀವನದಲ್ಲಿ ಬಿಜೆಪಿಯನ್ನು ಪ್ರೀತಿಸಿ. ನಮ್ಮ ಅಭ್ಯರ್ಥಿ ಆಶಾ ತಿಮ್ಮಪ್ಪರವರನ್ನು ಗೆಲ್ಲಿಸಬೇಕು. ಅದಕ್ಕಾಗಿ ಪ್ರತಿ ಮನೆ ಮನೆಗೆ ಹೋಗಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸರಾಜ್ ಬೊಮ್ಮಾಯಿ, ಶಾಸಕ ಸಂಜೀವ ಮಠಂದೂರು ಅವರು ಪುತ್ತೂರು ಕ್ಷೇತ್ರಕ್ಕೆ ನೀಡಿದ ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ನೀಡಿ.ಮುಂದೆ ರಾಜ್ಯದಲ್ಲಿ ಇನ್ನಷ್ಟು ಅನುದಾನ ಬರಬೇಕಾದರೆ ನಮ್ಮದೇ ಸಿ.ಎಂ.ಇರಬೇಕು. ಈ ನಿಟ್ಟಿನಲ್ಲಿ ನಮ್ಮ ಕಾರ್ಯ ನಡೆಯಬೇಕು. ಪ್ರಯತ್ನ ಇದ್ದರೆ ಯಾವುದನ್ನು ಕೂಡಾ ಅಚೀವ್ ಮಾಡಬಹುದು ಎಂದರು.

ಜಿಲ್ಲಾ ಮಹಿಳಾ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಡಾ.ಮಂಜುಳಾ, ಚುನಾವಣಾ ಪ್ರಭಾರಿ ರಾಜೇಶ್ ಕಾವೇರಿ, ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ್, ಸುಧೀರ್ ಶೆಟ್ಟಿ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯೆ ಬಿಂದು ಹರೀಶ್, ಬಿಜೆಪಿ ಪುತ್ತೂರು ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಎಸ್.ಅಪ್ಪಯ್ಯ ಮಣಿಯಾಣಿ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್, ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಸೇವಂತಿಶ್ರೀಯಾನ್, ತ್ರಿವೇಣಿ ಪೆರ‍್ವೋಡಿ ಉಪಸ್ಥಿತರಿದ್ದರು.ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳಾದ ನಾಗವೇಣಿ, ಜಯಶ್ರೀ ನಾಯಕ್, ಭಾರತಿ, ಮಂಡಲದ ಪದಾಽಕಾರಿಗಳಾದ ಜಯಶ್ರೀ ಎಸ್.ಶೆಟ್ಟಿ, ರಮಣಿ ಗಾಣಿಗ, ಚಿತ್ರಪ್ರಸಾದ್ ರೈ, ಉಷಾ ಮುಳಿಯ, ಮೀನಾಕ್ಷಿ ಮಂಜುನಾಥ್, ವನಜಾಕ್ಷಿ ಭಟ್, ಪ್ರೇಮಲತಾ ರಾವ್, ದಿವ್ಯಾ ಪುರುಷೋತ್ತಮ್ ಅತಿಥಿಗಳಿಗೆ ಪಕ್ಷದ ಶಾಲು ಹಾಕಿ ಗೌರವಿಸಿದರು.ಬಿಜೆಪಿ ನಗರ ಮಂಡಲದ ಮಹಿಳಾ ಮೋರ್ಚಾದ ಅಧ್ಯಕ್ಷೆ ಶರಾವತಿ ರವಿ ನಾರಾಯಣ ಸ್ವಾಗತಿಸಿದರು. ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಯಶೋದಾ ವಂದಿಸಿದರು. ಮಹಿಳಾ ಮೋರ್ಚಾದ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರೀ ವಂದೇ ಮಾತರಂ ಹಾಡಿದರು. ನಗರಸಭೆ ಸದಸ್ಯೆ ಗೌರಿ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾಯಕ್ರಮದ ಬಳಿಕ ರಾಷ್ಟ್ರಗೀತೆಯೊಂದಿಗೆ ಸಮಾವೇಶ ಮುಕ್ತಾಯವಾಯಿತು. ಸಭಾ ಕಾರ್ಯಕ್ರಮದ ಆರಂಭದಲ್ಲಿ ಆಶಯಗೀತೆ ಹಾಡಲಾಯಿತು.

ಆಶಾ ತಿಮ್ಮಪ್ಪರನ್ನು ಮತದಾರರು ಬೆಂಬಲಿಸಿ
ಪುತ್ತೂರಿಗೆ ಈ ಬಾರಿ ಬಿಜೆಪಿ ಮಹಿಳೆಯನ್ನು ಕಣಕ್ಕಿಳಿಸಿದ್ದು, ಮತದಾರರು ಆಶಾ ತಿಮ್ಮಪ್ಪರನ್ನು ಬೆಂಬಲಿಸಬೇಕು.ದೇಶದಲ್ಲಿ ಅತೀ ಹೆಚ್ಚು ಮಹಿಳೆಯರು ಎಂ.ಪಿ, ಎಂಎಲ್‌ಎ ಆಗಿ ಆಯ್ಕೆಯಾಗಿರುವುದು ಅದು ಬಿಜೆಪಿ ಪಕ್ಷದಿಂದ ಮಾತ್ರ.ಪುತ್ತೂರಿಗೂ ಮಹಿಳಾ ಶಕ್ತಿಯ ಅವಕಾಶ ಸಿಕ್ಕಿದೆ.ಅದನ್ನು ಸದುಪಯೋಗ ಮಾಡಬೇಕೆಂದು ಸಚಿವೆ ಡಾ.ಭಾರತಿ ಪ್ರವೀಣ್ ಪವಾರ್ ಹೇಳಿದರು.

ಸಮಾವೇಶದಲ್ಲಿ ಬಿಜೆಪಿಗೆ ಜೈಕಾರ

ಬಿಜೆಪಿ ಸಮಾವೇಶಕ್ಕೆ ಕೇಂದ್ರ ಸಚಿವೆ ಡಾ.ಭಾರತಿ ಪ್ರವೀಣ್ ಪವಾರ್ ಅವರು ಆಗಮಿಸುತ್ತಿದ್ದಂತೆ ಅವರನ್ನು ಪಕ್ಷದ ವತಿಯಿಂದ ಸ್ವಾಗತಿಸಲಾಯಿತು. ಸಭೆಯಲ್ಲಿದ್ದ ಎಲ್ಲರೂ ಎದ್ದು ನಿಂತು ಜೈಕಾರ ಹಾಕಿದರು.ಸಚಿವರು ವೇದಿಕೆಯಲ್ಲಿ ಆಸೀನರಾದ ಬಳಿಕ ಎಲ್ಲರೂ ಕೈ ಮೇಲೆತ್ತಿ ಬಿಜೆಪಿಗೆ ಜೈಕಾರ ಹಾಕಿದರು.

LEAVE A REPLY

Please enter your comment!
Please enter your name here