ಮೇ.2-3: ಕುಂಜೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರೋತ್ಸವದ ಸಂಭ್ರಮ

0

ಪುತ್ತೂರು: ಸುಮಾರು 800 ವರ್ಷಗಳ ಇತಿಹಾಸವಿರುವ ಆರ್ಯಾಪು ಗ್ರಾಮದ ಕುಂಜೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವಗಳು ಮೇ 2 ಹಾಗೂ 3 ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ವಿವಿಧ ವೈದಿಕ, ತಾಂತ್ರಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.


ಮೇ.2ರಂದು ಬೆಳಿಗ್ಗೆ ಗಣಪತಿ ಹೋಮ, ವಿಶೇಷ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಮಹಾಪೂಜೆ, ಶ್ರೀಭೂತ ಬಲಿ ಉತ್ಸವ, ವಸಂತ ಪೂಜೆ, ಅಶ್ವತ್ಥ ಪೂಜೆ, ಕುಂಜೂರು ಬೆಡಿ ಪ್ರದರ್ಶನ ಹಾಗೂ ಅನ್ನಸಂತರ್ಪಣೆ ಬಳಿಕ ಶ್ರೀದುರ್ಗಾ ಫ್ರೆಂಡ್ಸ್ ಕ್ಲಬ್ ಪ್ರಾಯೋಜಕತ್ವದಲ್ಲಿ ಸನ್ನಿಧಿ ಕಲಾವಿದರು ಉಡುಪಿ ಅಭಿನಯಿಸುವ ‘ಅಪ್ಪೆ ಮಂತ್ರದೇವತೆ ತುಳು ಭಕ್ತಿ ಪ್ರಧಾನ ನಾಟಕ ನಡೆಯಲಿದೆ.


ಮೇ.3ರಂದು ಬೆಳಿಗ್ಗೆ ಗಣಪತಿ ಹೋಮ, ಶ್ರೀ ದೇವರ ಬಲಿ ಹೊರಟು ದರ್ಶನ ಬಲಿ, ಮಧ್ಯಾಹ್ನ ಬಟ್ಟಲು ಕಾಣಿಕೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ರಂಗಪೂಜೆ, ದೈವಗಳಿಗೆ ತಂಬಿಲ, ದೈವಗಳ ಭಂಡಾರ ತೆಗೆದು, ಅನ್ನಸಂತರ್ಪಣೆ ನಡೆದ ಬಳಿಕ ವ್ಯಾಘ್ರಚಾಮುಂಡಿ ದೈವದ ನೇಮೋತ್ಸವ ನಡೆಯಲಿದೆ.


ನೂತನ ಪಲ್ಲಕ್ಕಿ ಸಮರ್ಪಣೆ:
ಶ್ರೀ ಕ್ಷೇತ್ರದಲ್ಲಿ ನಡೆಯುವ ಈ ವರ್ಷದ ಜಾತ್ರೋತ್ಸವದಲ್ಲಿ ದೇವಿಗೆ ಸುಮಾರು 3ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಪಲ್ಲಕ್ಕಿಯೂ ಸಮರ್ಪಣೆಯಾಗಲಿದೆ. ಜಾತ್ರೋತ್ಸವದ ಪ್ರಥಮ ದಿನವಾದ ಮೇ.2ರಂದು ರಾತ್ರಿ ನಡೆಯುವ ಉತ್ಸವದಲ್ಲಿ ದೇವಿಯ ಪಲ್ಲಕ್ಕಿ ಉತ್ಸವವೂ ನಡೆಯಲಿದೆ.

ಸ್ವಯಂವರ ಪಾರ್ವತಿ ಪೂಜೆ ವಿಶೇಷತೆ:
ಅವಿವಾಹಿತರಿಗೆ ಮಾಂಗಲ್ಯ ಭಾಗ್ಯ ಕರುಣಿಸುವ ಪಾರ್ವತಿ ಸ್ವಯಂವರ ಪೂಜೆ ಕುಂಜೂರು ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ನಡೆಯುವ ವಿಶೇಷ ಸೇವೆಯಾಗಿದೆ. ಕ್ಷೇತ್ರದಲ್ಲಿ ಸ್ವಯಂವರ ಪೂಜೆ ಮಾಡಿಸಿದ ಭಕ್ತಾದಿಗಳಿಗೆ ಮಾಂಗಲ್ಯ ಭಾಗ್ಯ ಲಭಿಸಿದ ಹಲವು ನಿದರ್ಶನಗಳಿವೆ. ಅಲ್ಲದೆ ಇಲ್ಲಿ ನಡೆಯುವ ರಂಗ ಪೂಜೆಯು ಬಹಳಷ್ಟು ವಿಶೇಷತೆಯಿಂದ ಕೂಡಿದೆ. ದೇವಿಗೆ ವಿಶೇವಾಗಿ ಹೂವಿನ ಪೂಜೆ, ದುರ್ಗಾಪೂಜೆ, ಸಪ್ತಸತಿ ಪಾರಾಯಣ, ಧನುಪೂಜೆ, ಸರಸ್ವತಿ ಪೂಜೆ ಮೊದಲಾದ ಸೇವೆಗಳು ಇಲ್ಲಿನ ವಿಶೇಷ ಸೇವೆಗಳಾಗಿದೆ. ಹರಕೆ ರೂಪದಲ್ಲಿ ದೇವಿಗೆ ಸೀರೆಯನ್ನು ಅರ್ಪಿಸುವುದು ಇಲ್ಲಿನ ಮತ್ತೊಂದು ವಿಶೇಷತೆಯಾಗಿದೆ.


ಕ್ಷೇತ್ರದಲ್ಲಿ ನವರಾತ್ರಿಯ ಒಂಬತ್ತು ದಿನಗಳ ಕಾಲ ದೇವಿಗೆ ವಿಶೇಷ ಪೂಜೆಗಳು ನಡೆಯುತ್ತಿದೆ. ಪ್ರತಿದಿನ ಬೆಳಿಗ್ಗೆ ಗಣಪತಿ ಹೋಮ, ಪೂಜೆ, ಬಳಿಕ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆ, ಮಧ್ಯಾಹ್ನ ನವರಾತ್ರಿ ವಿಶೇಷ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ರಂಗಪೂಜೆ ನಡೆಯುತ್ತದೆ. ವಿಶೇಷವಾಗಿ ಒಂದು ದಿನ ಸಾಮೂಹಿಕ ಚಂಡಿಕಾ ಯಾಗವು ನಡೆಯುತ್ತದೆ. ಧನುರ್ಮಾಸದಲ್ಲಿ ಬೆಳಿಗ್ಗೆ ಧನುಪೂಜೆ, ವಿಷು ಸಂಕ್ರಮಣ, ಮಕರ ಸಂಕ್ರಮಣದಲ್ಲಿ ವಿಶೇಷ ಸೇವೆಗಳು ನಡೆಯುತ್ತಿದೆ. ದೇವಸ್ಥಾನದಲ್ಲಿ ಪ್ರತಿ ಶುಕ್ರವಾರ ವಿಶೇಷ ಪೂಜೆ, ಅನ್ನದಾನ ಸೇವೆಗಳು ವಿಶೇಷವಾಗಿ ನಡೆಯುತ್ತಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here