![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಹಿರೇಬಂಡಾಡಿ: ಸರಕಾರಿ ಪ್ರೌಢಶಾಲೆ ಹಿರೇಬಂಡಾಡಿ ಇಲ್ಲಿ ವಿದ್ಯಾರ್ಥಿಗಳಲ್ಲಿ ಶಾಲಾ ಕಾರ್ಯ ಚಟುವಟಿಕೆ ನಿರ್ವಹಣೆ, ನಾಯಕತ್ವ ಗುಣ, ವ್ಯಕ್ತಿತ್ವ ವಿಕಸನ, ಪ್ರಜಾಪ್ರಭುತ್ವ ಹಾಗೂ ಮತದಾನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಇತ್ತೀಚೆಗೆ ಶಾಲಾ ಸಂಸತ್ತು ಚುನಾವಣೆ ನಡೆಸಲಾಯಿತು.
![](https://puttur.suddinews.com/wp-content/uploads/2023/06/herebandady.jpg)
ಚುನಾವಣೆಗೆ ಮುಂಚಿತವಾಗಿ ಚುನಾವಣಾ ಅಧಿಸೂಚನೆ ಹೊರಡಿಸಲಾಯಿತು. ಶಾಲಾ ನಾಯಕ ಸ್ಥಾನಕ್ಕೆ ಹತ್ತನೇ ತರಗತಿಯಿಂದ ದೀಕ್ಷಿತ್ ಹಾಗೂ ಗ್ರೇಷ್ಮಾ ಮತ್ತು ಉಪನಾಯಕ ಸ್ಥಾನಕ್ಕೆ ಒಂಭತ್ತನೇ ತರಗತಿಯ ಶ್ರೀರಕ್ಷಾ ಹಾಗೂ ಜಯರಾಜ್ ಎಚ್. ಎಮ್. ನಾಮಪತ್ರ ಸಲ್ಲಿಸಿದ್ದರು. ಅಭ್ಯರ್ಥಿಗಳಿಗೆ ಚುನಾವಣಾ ಪ್ರಚಾರಕ್ಕೆ ಅವಕಾಶ ಕಲ್ಪಿಸಲಾಯಿತು. ಶಾಲಾ ಆವರಣದಲ್ಲಿ ಚುನಾವಣಾ ವಾತಾವರಣ ಸೃಷ್ಟಿಸಿ ಮತಗಟ್ಟೆ ನಿರ್ಮಿಸಿ ಇವಿಎಂ ವೋಟಿಂಗ್ ಮೆಷಿನ್ ಆಪ್ ಮೂಲಕ ಚುನಾವಣೆ ನಡೆಸಲಾಯಿತು. ಚುನಾವಣಾ ಪ್ರಕ್ರಿಯೆ ನಂತರ ಫಲಿತಾಂಶವನ್ನು ಪ್ರದರ್ಶನ ಮಾಡಿ ವಿದ್ಯಾರ್ಥಿಗಳ ಕುತೂಹಲಕ್ಕೆ ತೆರೆ ಎಳೆಯಲಾಯಿತು. ಮತ ಎಣಿಕೆ ಚುನಾವಣಾ ಫಲಿತಾಂಶ ಘೋಷಣೆ ಒಟ್ಟಾರೆಯಾಗಿ ಎಲ್ಲಾ ಚುನಾವಣಾ ಪ್ರಕ್ರಿಯೆಗಳು ನೈಜತೆಯನ್ನು ಬಿಂಬಿಸುವಂತಿತ್ತು. ಒಟ್ಟಿನಲ್ಲಿ ಇಡೀ ಚುನಾವಣಾ ಪ್ರಕ್ರಿಯೆ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದಲ್ಲಿ ಚುನಾವಣೆಯ ಮಹತ್ವದ ಅರಿವು ಮೂಡಿಸುವಲ್ಲಿ ಯಶಸ್ವಿಯಾಯಿತು.
ದೀಕ್ಷಿತ್ ಶಾಲಾ ನಾಯಕನಾಗಿಯೂ ಜಯರಾಜ್ ಎಚ್.ಎಂ. ಶಾಲಾ ಉಪನಾಯಕನಾಗಿಯೂ, ಗ್ರೇಷ್ಮಾ ಪ್ರತಿಪಕ್ಷದ ನಾಯಕಿ ಹಾಗೂ ಶ್ರೀರಕ್ಷಾ ಪ್ರತಿಪಕ್ಷದ ಉಪನಾಯಕಿಯಾಗಿ ಚುನಾಯಿತರಾದರು. ಪ್ರಭಾರ ಮುಖ್ಯ ಶಿಕ್ಷಕರಾದ ಹರಿಕಿರಣ್ ಕೆ ರವರು ಚುನಾವಣಾ ಫಲಿತಾಂಶ ಘೋಷಿಸಿದರು. ಸಮಾಜ ವಿಜ್ಞಾನ ಶಿಕ್ಷಕಿ ಲಲಿತಾ ಕೆ.ರವರು ಚುನಾವಣಾ ಅಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ವಿಜ್ಞಾನ ಶಿಕ್ಷಕರಾದ ಮನೋಹರ ಎಂ. ತಾಂತ್ರಿಕ ನೆರವು ನೀಡಿ ಸಹಕರಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮ ಗೌಡ .ಬಿ, ಆಂಗ್ಲ ಭಾಷಾ ಶಿಕ್ಷಕ ವಸಂತಕುಮಾರ್ ಪಿ. ಅತಿಥಿ ಶಿಕ್ಷಕಿಯರಾದ ಶ್ವೇತಕುಮಾರಿ ಹಾಗೂ ಆರತಿ ವೈ.ರವರು ಮತಗಟ್ಟೆ ಅಧಿಕಾರಿಗಳಾಗಿ ಸಹಕರಿಸಿದರು.