ಕರ್ತವ್ಯದ ಜೊತೆ ಸೇವಾ ಮನೋಭಾವ ಇರಲಿ-ಕಂದಾಯ ದಿನಾಚರಣೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ

0

ಜನನದಿಂದ ಮರಣದ ತನಕ ಸೇವಾಕಾಶ ನಮ್ಮ ಪುಣ್ಯ – ಗಿರೀಶ್‌ನಂದನ್

ಪುತ್ತೂರು: ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಒಂದಕ್ಕೊಂದು ಕೊಂಡಿಯಂತೆ ಕೆಲಸ ಮಾಡಿದಾಗ ಜನರಿಗೆ ಉತ್ತಮ ಸೇವೆ ದೊರೆಯುತ್ತದೆ. ಈ ನಿಟ್ಟಿನಲ್ಲಿ ಇಲಾಖೆಯಲ್ಲಿ ಕರ್ತವ್ಯ ಮತ್ತು ಸೇವೆ ಜೊತೆಯಲ್ಲಿ ಹೋದಲ್ಲಿ ಮಾತ್ರ ಬಡವರಿಗೆ ನ್ಯಾಯ ಸಿಗುವ ಕೆಲಸ ಆಗುತ್ತದೆ. ಕರ್ತವ್ಯದ ಜೊತೆ ಸೇವಾ ಮನೋಭಾವ ಇರಲಿ ಎಂದು ಶಾಸಕ ಅಶೋಕ್ ಕುಮಾರ್ ರೈ ಅವರು ಹೇಳಿದರು.


ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿ ನಡೆದ ಕಂದಾಯ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಕಂದಾಯ ದಿನಾಚರಣೆಗೆ ಉತ್ತಮ ಅರ್ಥವಿದೆ. ಭೂಮಿಯನ್ನು ರಕ್ಷಣೆ ಪೊಲೀಸ್ ಮಾಡಿದರೆ. ಅದರ ನಿರ್ವಹಣೆ ಕಂದಾಯದ ಮೇಲಿದೆ. ಇಲ್ಲಿ ಕರ್ತವ್ಯದ ಜೊತೆಗೆ ಸೇವಾ ಮನೋಭಾವನೆ ಇರಲಿ. ಬಡವರು ಬಂದರೆ ತಡ ಮಾಡದೆ ಸೇವೆ ನೀಡಿ. ಅಲ್ಲಿ ಕಾನೂನಿನ ಅಡಚಣೆ ಇದ್ದರೆ. ಅದಕ್ಕೆ ಪರಿಹಾರ ಬೇರೆ ರೀತಿಯಲ್ಲೂ ಇದೆ. ಜನಪರವಾಗಿ ನಾವು ಜನ ಸೇವೆ ಮಾಡಬೇಕು. ಅಧಿಕಾರಿಗಳ ಸ್ಪಂಧನೆ ಸಿಗದಿದ್ದಾಗ ಜನಪ್ರತಿನಿಧಿಗಳು ಏನು ಮಾಡಲು ಆಗುವುದಿಲ್ಲ. ನಾನು ಅಧಿಕಾರಿಗಳ ವಿರೋಧಿ ಅಲ್ಲ. ಅಧಿಕಾರಿಗಳು ನಮ್ಮ ಶಕ್ತಿ. ಕರ್ತವ್ಯ ಮತ್ತು ಸೇವೆ ಜೊತೆಯಲ್ಲಿ ಇರಲಿ ಎಂದ ಅವರು ಕಂದಾಯ ಇಲಾಖೆಯ ಹೊಸ ವರ್ಷದಲ್ಲಿ ಹಳೆ ಕಡತ ಯಾವುದು ಕೂಡಾ ಇಲ್ಲ ಎಂದು ಭಾವಿಸಿದ್ದೇನೆ. ಮುಂದಿನ ದಿನ ನಿಮ್ಮೆಲ್ಲರ ಸಹಕಾರ ಬೇಕೆಂದರು.


ಜನನದಿಂದ ಮರಣದ ತನಕ ಸೇವಾವಕಾಶ ನಮ್ಮ ಪುಣ್ಯ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಾಯಕ ಕಮೀಷನರ್ ಗಿರೀಶ್ ನಂದನ್ ಅವರು ಮಾತನಾಡಿ ನಮ್ಮ ಇಲಾಖೆಯಲ್ಲಿ ಒಬ್ಬ ವ್ಯಕ್ತಿಯ ಜನನದಿಂದ ಮರಣದ ತನಕ ಎಲ್ಲಾ ಸೇವೆಗೆ ಅವಕಾಶವಿದೆ. ಇದು ನಮ್ಮ ಪುಣ್ಯ. ಜನರಿಗೆ ಸ್ಪಂಧಿಸಿ ಸೇವೆ ಮಾಡುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಶಾಸಕರು ಹೇಳಿದಂತೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಜೊತೆಯಲ್ಲಿ ಕೆಲಸ ಮಾಡಬೇಕಾಗಿದ್ದು ನಮ್ಮ ಕಾರ್ಯಾಂಗ ವ್ಯವ್ಯಸ್ಥೆಯಲ್ಲಿ ಬಹಳಷ್ಟು ಮುಖ್ಯವಾಗಿದೆ. ನಾನ ನೌಕಪಡೆಯಲ್ಲಿ 15 ವರ್ಷ, ಕಾರ್ಪೋರೇಟ್ ವಿಭಾಗದಲ್ಲಿ 9 ವರ್ಷ ಮತ್ತು ಇಲ್ಲಿಗೆ ಬಂದ ಅವಧಿಯಲ್ಲಿ ಕೆಲಸಕ್ಕೆ ಉತ್ತಮ ಗೌರವ ನೀಡುತ್ತೇನೆ. ಯಾಕೆಂದರೆ ಇಲ್ಲಿ ಚಾಲೆಂಜಿಂಗ್ ಇದೆ. ಚುನಾವಣೆ ಸಂದರ್ಭದಲ್ಲಿ ಉತ್ತಮ ಕಾರ್ಯನಿರ್ವಹಣೆ ಮಾಡಲಾಗಿದೆ. ಜು.1ರಿಂದ ಹೊಸ ವರ್ಷದಂತೆ ಎಲ್ಲಾ ಕೆಲಸ ಉತ್ತಮ ರೀತಿಯಲ್ಲಿ ನಡೆಯಲಿದೆ ಎಂದರು. ತಹಶೀಲ್ದಾರ್ ಜೆ.ಶಿವಶಂಕರ್, ಭೂಮಾಪನ ಇಲಾಖೆಯ ಸೂಪರ್‌ವೈಸರ್ ಮಹೇಶ್ ಕುಮಾರ್, ಉಪಖಜಾನೆಯ ಸಹಾಯಕ ನಿರ್ದೇಶಕ ಮಹೇಶ್ ಎಸ್, ಉಪನೋಂದನಾಧಿಕಾರಿ ಸತ್ಯೇಶ್ ಪಿ ಮಾತನಾಡಿದರು.


ಅಭಿನಂದನಾ ಕಾರ್ಯಕ್ರಮ:
ಇಲಾಖೆಯಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿರುವ ಪಡ್ನೂರು ಗ್ರಾಮ ಸಹಾಯಕ ಬಾಲಕೃಷ್ಣ ಗೌಡ, ಗ್ರೂಪ್ ಡಿ ಸಿಬ್ಬಂದಿ ರಾಧಾಕೃಷ್ಣ, ಕಬಕ ಗ್ರಾಮ ಆಡಳಿತ ಅಧಿಕಾರಿ ಜಂಗಪ್ಪ, ತಾಲೂಕು ಕಚೇರಿಯ ಸಿಬ್ಬಂದಿ ಚೈತ್ರ ಡಿ ನಾಯಕ್ ಕಾರ್ಕಳ, ಸಹಾಯಕ ಆಯುಕ್ತರ ಕಚೇರಿಯಲ್ಲಿರುವ ಪ್ರತಿಕ್ಷಾ ಪಿ ಎಸ್, ಭೂಮಾಪನಾ ಇಲಾಖೆಯ ಮಂಜುನಾಥ ಟಿ ಎಸ್ ಅವರಿಗೆ ಪ್ರಶಂಸ ಪತ್ರ ನೀಡಿ ಅಭಿನಂದಿಸಲಾಯಿತು. ಕಂದಾಯ ಅಧಿಕಾರಿ ದಯಾನಂದ ಅಭಿನಂದನಾ ಕಾರ್ಯಕ್ರಮ ನಿರ್ವಹಿಸಿದರು. ಕಂದಾಯ ಅಧಿಕಾರಿ ದಯಾನಂದ, ಉಪತಹಸೀಲ್ದಾರ್ ಚೆನ್ನಪ್ಪ, ಕಂದಾಯ ನಿರೀಕ್ಷಕ ಗೋಪಾಲ್, ರಮೇಶ್, ಮರಿಯಪ್ಪ, ರಾಧಾಕೃಷ್ಣ ಅತಿಥಿಗಳನ್ನು ಗೌರವಿಸಿದರು. ತಾಲೂಕು ಕಚೇರಿಯ ಚೈತ್ರ ಪ್ರಾರ್ಥಿಸಿದರು. ಗ್ರೇಡ್ 2 ತಹಸೀಲ್ದಾರ್ ಲೋಕೇಶ್ ಸ್ವಾಗತಿಸಿದರು. ಕಂದಾಯ ನಿರೀಕ್ಷಕ ಗೋಪಾಲ್ ಅವರು ವಂದಿಸಿದರು. ಉಪತಹಸೀಲ್ದಾರ್ ಸುಲೋಚನಾ ಕಾರ್ಯಕ್ರಮ ನಿರೂಪಿಸಿದರು.

ಕಡತ ವಿಲೇವಾರಿ ಸಪ್ತಾಹ
ಶಾಸಕರು ಮಾತನಾಡುವ ಸಂದರ್ಭ ಕಂದಾಯ ದಿನಾಚರಣೆಯಲ್ಲಿ ಹೊಸ ವರ್ಷದ ಆರಂಭ ಆಗುತ್ತದೆ. ಹಾಗಾಗಿ ಹೊಸ ವರ್ಷದಲ್ಲಿ ಹಳೆ ಕಡತ ಪೆಂಡಿಂಗ್ ಇರುವುದಿಲ್ಲ. ಇನ್ನು ಹೊಸ ವಿಚಾರ ನಡೆಯುತ್ತದೆ ಎಂದು ಭಾವಿಸಿದ್ದೇನೆ ಎಂದಿದ್ದರು. ಇದೇ ವಿಚಾರವಾಗಿ ಸಹಾಯಕ ಕಮೀಷನ್ ಅಧ್ಯಕ್ಷತೆ ವಹಿಸಿ ಮಾತನಾಡಿದಾಗ ಹಳೆಯ ಕಡತ ಕೆಲವು ಬಾಕಿ ಇದೆ. ಈ ಕುರಿತು ಮುಂದೆ ಕಡತವಿಲೇವಾರಿ ಸಪ್ತಾಹ ಮೂಲಕ ಬಾಕಿ ಕಡತವನ್ನು ವಿಲೇವಾರಿ ಮಾಡಲಾಗುವುದು. ಮುಂದಿನ ವಾರ ಯಾವ ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಕಡತ ಇದೆ ಎಂದು ಪಟ್ಟಿ ತೆಗೆದು ಅವರಿಗೆ ಕಡತ ವಿಲೇವಾರಿಗೆ ಸಮಯ ನೀಡಲಾಗುತ್ತದೆ. ಅದಾದ ಬಳಿಕ ಮತ್ತೆ ಬಾಕಿಯಾದ ಕಡತಗಳಿಗೆ ಸಪ್ತಾಹ ಕೈಗೊಳ್ಳಲಿದ್ದೇವೆ ಎಂದರು.

LEAVE A REPLY

Please enter your comment!
Please enter your name here