ಬ್ರ್ಯಾಂಡ್ ಮಂಗಳೂರು ಉತ್ತಮ ಪರಿಕಲ್ಪನೆ -ಕುಲದೀಪ್ ಆರ್ ಜೈನ್;ಸುರೇಶ್ ಡಿ ಪಳ್ಳಿ, ಭರತ್ ರಾಜ್ ಸನಿಲ್‌ರಿಗೆ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ

0

ಮಂಗಳೂರು ; ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದತೆ ಪ್ರತಿ ಬಿಂಬಿಸುವ ವರದಿಗೆ ನೀಡಲಾಗುವ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಯನ್ನು ಪತ್ರಿಕಾ ಮಾಧ್ಯಮ ವಿಭಾಗದಲ್ಲಿ ಹೊಸದಿಗಂತ ವರದಿಗಾರ ಸುರೇಶ್ ಡಿ.ಪಳ್ಳಿ ಮತ್ತು ದೃಶ್ಯ ಮಾಧ್ಯಮ ವಿಭಾಗದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿಗಾರ ಭರತ್‌ರಾಜ್ ಕೆ. ಸನಿಲ್ ಅವರಿಗೆ ಪ್ರದಾನ ಮಾಡಲಾಯಿತು.


ಮಂಗಳೂರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಪೊಲೀಸ್ ಕಮಿಷನರ್ ಕುಲದೀಪ್ ಆರ್ ಜೈನ್ ಕಾರ್ಯಕ್ರಮ ಉದ್ಘಾಟಿಸಿ ಮಂಗಳೂರಿನ ನೈಜ ಪರಂಪರೆಯನ್ನು ಸೌಹಾರ್ದತೆಯನ್ನು ಹೊರಜಗತ್ತಿಗೆ ತೆರೆದಿಡುವ ನಿಟ್ಟಿನಲ್ಲಿ ಬ್ರ್ಯಾಂಡ್ ಮಂಗಳೂರು ಉತ್ತಮ ಪರಿಕಲ್ಪನೆ. ಪತ್ರಿಕಾ ದಿನಾಚರಣೆಯ ಜೊತೆ ವ್ಯಂಗ್ಯ ಚಿತ್ರ ಪ್ರದರ್ಶನ, ಜೊತೆಗೆ ವಿದ್ಯಾರ್ಥಿಗಳನ್ನು ಪಾಲ್ಗೊಳ್ಳುವಂತೆ ಮಾಡಿರುವುದು ಶ್ಲಾಘನೀಯ ಎಂದರು. ಆಕಾಶವಾಣಿ ನಿವೃತ್ತ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ| ಸದಾನಂದ ಪೆರ್ಲ ಅವರು ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿ, ಸಮುದಾಯದ ಸಮಸ್ಯೆಗಳು ರೈತರ ಜನ ಸಾಮಾನ್ಯರ ಬಗ್ಗೆ ಹೆಚ್ಚು ಗಮನಹರಿಸುವುದು ಅಭ್ಯುದಯ ಪತ್ರಿಕೋದ್ಯಮದ ಭಾಗ ಎಂದು ತಿಳಿಸಿದರು.


ಪತ್ರಕರ್ತರು ತೆರೆದ ಕಣ್ಣುಗಳಿಂದ ನಮ್ಮ ಸುತ್ತಮುತ್ತಲಿನ ಸಮಾಜವನ್ನು ನೋಡಬೇಕು ಆಗ ಮಾತ್ರ ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾದ ಮಾಧ್ಯಮ ರಂಗಕ್ಕೆ ಮಾನ್ಯತೆ ದೊರೆಯಬಹುದು. ಮಹಾತ್ಮ ಗಾಂಧಿಜಿ ಅಭ್ಯುದಯ ಪತ್ರಿಕೋದ್ಯಮದ ದೊಡ್ಡ ಹರಿಕಾರರಾಗಿದ್ದರು. ದೇಶ ಸೇವೆ, ಜನರ ಸೇವೆಗೆ ಒತ್ತು ನೀಡುವುದು ಅಭ್ಯುದಯ ಪತ್ರಿಕೋದ್ಯಮದ ಗುರಿಯಾಗಿದೆ ಎಂದು ಡಾ| ಸದಾನಂದ ಪೆರ್ಲ ಹೇಳಿದರು.


ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್, ಜಿಲ್ಲಾ ವಾರ್ತಾಧಿಕಾರಿ ರವಿರಾಜ್, ಹಿರಿಯ ಪತ್ರಕರ್ತರಾದ ಮನೋಹರ ಪ್ರಸಾದ್, ರಾಜ್ಯ ಸಮಿತಿ ಸದಸ್ಯ ಜಗನ್ನಾಥ್ ಶೆಟ್ಟಿ ಬಾಳ, ರಾಜ್ಯ ಸಮಿತಿ ನಾಮ ನಿರ್ದೇಶಿತ ಸದಸ್ಯ ಇಬ್ರಾಹಿ ಅಡ್ಕಸ್ಥಳ, ಮಂಗಳೂರು ಪ್ರೆಸ್ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ಅನ್ನು ಮಂಗಳೂರು ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್ ಮತ್ತು ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ಪ್ರಶಸ್ತಿ ವಿಜೇತರ ಸನ್ಮಾನ ಪತ್ರ ವಾಚಿಸಿದರು. ಮಹಮ್ಮದ್ ಆರಿವು ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ವಾರ್ತಾ ಇಲಾಖೆಯ ನಿವೃತ್ತ ಸಿಬ್ಬಂದಿ ಪೂವಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪತ್ರಿಕಾ ದಿನಾಚರಣೆಯ ಅಂಗವಾಗಿ ಪತ್ರಿಕಾ ಭವನದಲ್ಲಿ ಖ್ಯಾತ ವ್ಯಂಗ್ಯ ಚಿತ್ರ ಕಲಾವಿದ ಜಾನ್ ಚಂದ್ರನ್ ಅವರ ವ್ಯಂಗ್ಯ ಚಿತ್ರ, ರೇಖಾಚಿತ್ರಗಳ ಪ್ರದರ್ಶನವನ್ನು ಪೊಲೀಸ್ ಆಯುಕ್ತ ಕುಲದೀಪ್ ಆರ್ ಜೈನ್ ಉದ್ಘಾಟಿಸಿದರು.

LEAVE A REPLY

Please enter your comment!
Please enter your name here