ಸರಕಾರಿ ಸ್ಥಳದಲ್ಲಿರುವ ಪೂಜಾ ಸ್ಥಳಗಳ ಸಕ್ರಮಕ್ಕೆ ವಿಶೇಷ ಕಾನೂನು ಜಾರಿಗೆ ಆಗ್ರಹ

0

ಹಿಂದುತ್ವದ ಮೇಲೆ ಅಧಿಕಾರ ಪಡೆದ ಬಿಜೆಪಿ ಮಾಡಿಲ್ಲ- ನಾವು ಮಾಡುತ್ತೇವೆ ಶಾಸಕ ಅಶೋಕ್‌ ಕುಮಾರ್ ರೈ

ಪುತ್ತೂರು: ಸರಕಾರಿ ಜಾಗದಲ್ಲಿರುವ ಪೂಜಾಸ್ಥಳಗಳಾದ ದೇವಸ್ಥಾನ, ದೈವಸ್ಥಾನ, ಭಜನಾ ಮಂದಿರ , ಮಸೀದಿ ಮತ್ತು ಚರ್ಚುಗಳನ್ನು ಸಕ್ರಮ ಮಾಡುವ ಮೂಲಕ ಸರಕಾರ ಮತ್ತು ಪೂಜಾಸ್ಥಳದ ಹೆಸರಿನಲ್ಲಿ ಜಂಟಿ ಆರ್‌ಟಿಸಿ ಮಾಡಲು ಸರಕಾರ ವಿಶೇಷ ಕಾನೂನನ್ನು ಜಾರಿಗೆ ತರಬೇಕು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸರಕಾರಕ್ಕೆ ಮನವಿ ಮಾಡಿದ್ದಾರೆ.‌

ವಿಧಾನಸಭಾ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕರು ಕಳೆದ ಹಲವಾರು ವರ್ಷಗಳಿಂದ ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸರಕಾರಿ ಜಾಗದಲ್ಲಿ ದೇವಸ್ಥಾನ, ದೈವಸ್ಥಾನ, ಭಜನಾಮಂದಿರ, ಮಸೀದಿ ಮತ್ತು ಚರ್ಚುಗಳನ್ನು ನಿರ್ಮಾಣ ಮಾಡಲಾಗಿದೆ. ಈ ಪೂಜಾ ಸ್ಥಳಗಳಿಗೆ ಯಾವುದೇ ಭೂ ದಾಖಲಾತಿ ಇಲ್ಲ ಮತ್ತು ಈ ಜಾಗ ಆರ್‌ಟಿಸಿಯಲ್ಲಿ ಸರಕಾರ ಎಂದೇ ದಾಖಲಾಗಿರುತ್ತದೆ. ಸದ್ರಿ ಪೂಜಾ ಸ್ಥಳಗಳಿರುವ ಜಾಗವನ್ನು ಸರಕಾರ ಮತ್ತು ಪೂಜಾಸ್ಥಳಗಳ ಹೆಸರಿನಲ್ಲಿ ಜಂಟಿ ಆರ್‌ಟಿಸಿಯನ್ನು ಮಾಡಬೇಕಿದೆ. ಇದು ಹಲವಾರು ವರ್ಷಗಳ ಸಮಸ್ಯೆಯಾಗಿದ್ದು ಈ ಸಮಸ್ಯೆಯನ್ನು ಪರಿಹರಿಸಲು ಸರಕಾರ ಹೊಸ ಕಾನೂನನ್ನು ಜಾರಿಗೆ ತರಬೇಕು ಎಂದು ಮನವಿ ಮಾಡಿದರು.
ಪೂಜಾಸ್ಥಳಗಳ ಜಾಗವು ಸರಕಾರ ಎಂದು ನಮೂದಾಗಿರುವ ಕಾರಣ ಅವುಗಳ ಜೀರ್ಣೋದ್ಧಾರ ಸೇರಿದಂತೆ ಇನ್ನಿತರ ಅಭಿವೃದ್ದಿ ಕಾರ್ಯಗಳನ್ನು ಮಾಡಲು ಕಾನೂನಿನಲ್ಲಿ ತೊಡಕಾಗಿದೆ. ಈ ತೊಡಕನ್ನು ನೀಗಿಸಬೇಕಾದರೆ ಜಂಟಿ ಹೆಸರಿನಲ್ಲಿ ಆರ್‌ಟಿಸಿ ಮಾಡಬೇಕಾಗುತ್ತದೆ ಎಂದು ಸಭೆಗೆ ತಿಳಿಸಿದರು. ಕರ್ನಾಟಕ ಭೂ ಮಂಜೂರಾತಿ ಕಾಯ್ದೆ 1969 ನಿಯಮ 21 ಅಡಿ ಸರಕಾರದ ಅನುಮೋದನೆಯೊಂದಿಗೆ ಷರತ್ತುಗಳನ್ನೊಳಪಟ್ಟು ಸಮಿತಿ ರಚನೆ ಮಾಡಿ ಧಾರ್ಮಿಕ ಮತ್ತು ಮತೀಯ ಕೇಂದ್ರಗಳಿಗೆ ಭೂ ಮಂಜೂರು ಮಾಡಬಹುದು ಎಂಬ ಕಾನೂನು ಇದ್ದರೂ ಆ ನಿಯಮದಡಿ ಮಂಜೂರಾದರೆ ಸರಕಾರಕ್ಕೆ ಹಣ ಪಾವತಿ ಮಾಡಬೇಕಾಗುತ್ತದೆ ಆ ಮೂಲಕ ಮಂಜೂರಾದರೆ ಹಣ ಪಾವತಿಸುವುದು ಕಷ್ಟ ಸಾಧ್ಯ ಎಂದು ಸಭೆಯ ಗಮನಕ್ಕೆ ತಂದರು.

ಸುಪ್ರಿಂ ಆದೇಶವೂ ಇದೆ
ಸರಕಾರಿ ಜಾಗದಲ್ಲಿರುವ ಪೂಜಾ ಸ್ಥಳಗಳನ್ನು ಡೆಮಾಲಿಶ್ ಮಾಡಬೇಕೆಂದು ಸುಪ್ರಿಂ ಕೋರ್ಟು ಆದೇಶವನ್ನು ನೀಡಿದೆ. ಈ ಆದೇಶ ಜಾರಿಯಾಗುವಲ್ಲಿ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗುವ ಸಂಭವ ಇದೆ. ಸರಕಾರ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ವಿಶೇಷ ಕಾನೂನು ರಚನೆ ಮಾಡಿ ಈಗಾಗಲೇ ನಿರ್ಮಾಣ ಮಾಡಿಕೊಂಡಿರುವ ಪೂಜಾಸ್ಥಳಗಳನ್ನು ಜಂಟಿ ಹೆಸರಿನಲ್ಲಿ ಆರ್‌ಟಿಸಿ ಮಾಡಿಕೊಂಡರೆ ಅದು ಸಕ್ರಮವಾಗುತ್ತದೆ ಈ ಬಗ್ಗೆ ಸರಕಾರ ವಿಶೇಷ ಗಮನಹರಿಸಬೇಕು ಎಂದು ಮನವಿ ಮಾಡಿದರು.

ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು: ಸಚಿವ ಚೆಲುವರಾಯ ಸ್ವಾಮಿ
ಶಾಸಕರ ವಿನಂತಿಯನ್ನು ಪರಿಗಣಿಸಿ ಕಂದಾಯ ಸಚಿವರ ಪರವಾಗಿ ಉತ್ತರಿಸಿದ ಸಚಿವ ಚೆಲುವರಾಯ ಸ್ವಾಮಿ ಈ ವಿಚಾರವನ್ನು ಕಂದಾಯ ಸಚಿವರು ಹಾಗೂ ಕಂದಾಯ ಇಲಾಖೆ ಮೇಲಧಿಕಾರಿಗಳ ಗಮನಕ್ಕೆ ತಂದು ಈ ವಿಚಾರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಹಿಂದುತ್ವದ ಹೆಸರಿನಲ್ಲಿ ಮತ ಪಡೆದ ಬಿಜೆಪಿ ಸರಕಾರ ಇದನ್ನು ಮಾಡಬೇಕಿತ್ತು: ಅಶೋಕ್ ರೈ
ಈ ವಿಚಾರದ ಬಗ್ಗೆ ಶಾಸಕರಲ್ಲಿ ಪ್ರತಿಕ್ರಿಯೆ ಕೇಳಿದಾಗ ರಾಜ್ಯದಲ್ಲಿ ಹಿಂದುತ್ವದ ಮೇಲೆ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಪೂಜಾಸ್ಥಳಗಳ ಸಕ್ರಮಕ್ಕೆ ಕ್ರಮ ಕೈಗೊಳ್ಳಬೇಕಿತ್ತು. ಈ ವಿಚಾರ ಅವರಿಗೂ ಗೊತ್ತಿತ್ತು ಆದರೆ ಇಷ್ಟು ವರ್ಷ ಅವರೂ ಸುಮ್ಮನಿದ್ದರು. ದೇವಸ್ಥಾನ, ದೈವಸ್ಥಾನ ಮತ್ತು ಭಜನಾಮಂದಿರದ ಜಾಗ ಸರಕಾರದ ಹೆಸರಿನಲ್ಲಿದ್ದ ಕಾರಣ ಅದಕ್ಕೆ ಜಂಟಿ ಆರ್‌ಟಿಸಿ ಮಾಡುವ ಕೆಲಸವನ್ನು ಬಿಜೆಪಿ ಮಾಡಬೇಕಿತ್ತು, ಬಿಜೆಪಿಯವರ ನಕಲಿ ಹಿಂದುತ್ವವನ್ನು ಈಗಲಾದರೂ ಜನ ಅರ್ಥ ಮಾಡಿಕೊಳ್ಳಬೇಕಿದೆ. ದೇವರ ಹೆಸರಿನಲ್ಲಿ ಧರ್ಮದ ಹೆಸರಿನಲ್ಲಿ ವಕಾಲತ್ತು ಮಾಡುವವರು ಈ ವಿಚಾರದಲ್ಲಿ ಯಾಕೆ ಸುಮ್ಮನಾಗಿದ್ದರು. ದೇವಸ್ಥಾನ, ದೈವಸ್ಥಾನದ ಜಾಗ ಸಕ್ರಮವಾಗುವುದು ಅವರಿಗೆ ಇಷ್ಟವಿರಲಿಲ್ಲ ಈ ಕಾರಣಕ್ಕೆ ಅದನ್ನು ಹಾಗೆಯೇ ಬಿಟ್ಟಿದ್ದಾರೆ. ಕೇವಲ ಹಿಂದುತ್ವ ಎಂದು ಹೇಳಿದರೆ ಸಾಲದು ಹಿಂದೂ ಧರ್ಮದ ಆರಾಧನಾ ಕೇಂದ್ರಗಳನ್ನು ಗೌರವಿಸುವ ಮತ್ತು ಅದನ್ನು ಉಳಿಸುವ ಕೆಲಸವನ್ನು ಮಾಡಬೇಕು. ರಾಜ್ಯದ ಕಾಂಗ್ರೆಸ್ ಸರಕಾರ ಆ ಕೆಲಸವನ್ನು ಮಾಡಲಿದೆ. ಕಾಂಗ್ರೆಸ್ಸಿನದ್ದೇ ನಿಜವಾದ ಹಿಂದುತ್ವವಾಗಿದ್ದು ಬಿಜೆಪಿಯವರದ್ದು ಕೇವಲ ವೋಟಿಗಾಗಿ, ಅಧಿಕಾರಕ್ಕಾಗಿ ಮಾಡುವ ಹಿಂದುತ್ವವಾಗಿದೆ ಎಂದು ಶಾಸಕರಾದ ಅಶೋಕ್ ರೈ ಆರೋಪಿಸಿದರು.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here