ರಬ್ಬರ್ ನಿಗಮದಿಂದ ಬೋನಸ್ ಬಾಕಿ ವಿಚಾರ:ಶಾಸಕ ಅಶೋಕ್ ಕುಮಾರ್ ರೈಯವರಿಗೆ ಕಾರ್ಮಿಕರ ಮನವಿ

0

ಸಚಿವರ ಜೊತೆ ಶಾಸಕರ ಮಾತುಕತೆ, ವಾರದೊಳಗೆ ಸಮಸ್ಯೆ ಇತ್ಯರ್ಥದ ಭರವಸೆ


ಪುತ್ತೂರು: ರಬ್ಬರ್ ಟ್ಯಾಪಿಂಗ್ ಕಾರ್ಮಿಕರಿಗೆ ಸಿಗಬೇಕಾದ ಬೋನಸ್ ಬಾಕಿ ಇದ್ದು ಕಳೆದ ಒಂದು ವರ್ಷದಿಂದ ನಿಗಮಕ್ಕೆ ಮನವಿ ಮಾಡುತ್ತಿದ್ದರೂ ಬೋನಸ್ ಇನ್ನೂ ಸಿಗದೇ ಇದ್ದು ಈ ವಿಚಾರವನ್ನು ಸರಕಾರದ ಗಮನಸೆಳೆಯಬೇಕೆಂದು ಆಗ್ರಹಿಸಿ ಮತ್ತು ಬೋನಸ್ ಕೊಡಿಸುವಲ್ಲಿ ನೆರವು ನೀಡಬೇಕೆಂದು ಪೆರ್ಲಂಪಾಡಿ ಸಿಆರ್‌ಸಿ ಕಾಲನಿ ರಬ್ಬರ್ ಟ್ಯಾಪಿಂಗ್ ಕಾರ್ಮಿಕರು ಶಾಸಕ ಅಶೋಕ್ ರೈಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.


ರಬ್ಬರ್ ನಿಗಮದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಪ್ರತಿ ವರ್ಷ ದೀಪಾವಳಿಯ ಸಂದರ್ಭದಲ್ಲಿ ಕನಿಷ್ಟ ಬೋನಸ್ (8.33) ನೀಡಲಾಗುತ್ತಿದೆ. ಈ ವರ್ಷ 20% ಬೋನಸ್ ಕೊಡಬಹುದೆಂದು ಬಹಳ ನಿರೀಕ್ಷೆಯಲ್ಲಿದ್ದರು. ಅದರೆ ಈ ವರ್ಷ ಕೂಡಾ 8.33ಕ್ಕೆ ಸೀಮಿತಗೊಳಿಸಲಾಗಿತ್ತು. ಈಗಾಗಲೇ 8.33 ಬೋನಸ್ ನೀಡಲಾಗಿದ್ದು ಉಳಿದ ಬೋನಸ್ ನಿಮಗದ ವತಿಯಿಂದ ನೀಡಿಲ್ಲ ಎಂದು ಕಾರ್ಮಿಕರು ಶಾಸಕರಲ್ಲಿ ತಿಳಿಸಿದರು. ನಾವು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇವೆ, ಬೋನಸ್ ಸಿಗುತ್ತದೆ ಎಂಬ ಆಸೆಯಿಂದ ರಾತ್ರಿ ಹಗಲೆನ್ನದೆ ಕೆಲಸ ಮಾಡಿದ್ದೇವೆ ನಮಗೆ ನ್ಯಾಯ ಕೊಡಿಸಿ ಎಂದು ಶಾಸಕರಲ್ಲಿ ಮನವಿ ಮಾಡಿದರು.

ಸಚಿವರಿಗೆ ಕರೆ ಮಾಡಿದ ಶಾಸಕರು
ಕಾರ್ಮಿಕರ ಸಂಕಷ್ಟವನ್ನು ಆಲಿಸಿದ ಶಾಸಕ ಅಶೋಕ್ ರೈಯವರು ತಕ್ಷಣ ಅರಣ್ಯ ಸಚಿವ ಈಶ್ವರ್ ಖಂಡ್ರೆಯವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು ಬಡ ಕಾರ್ಮಿಕರಿಗೆ ಸಿಗಬೇಕಾದ ಬೋನಸ್ ಇನ್ನೂ ಅವರ ಕೈ ಸೇರಿಲ್ಲ. ಕಾರ್ಮಿಕರು ಬಂದು ತನ್ನ ಕಚೇರಿಯಲ್ಲಿ ಕುಳಿತಿದ್ದಾರೆ ಅವರಿಗೆ ನ್ಯಾಯ ಕೊಡಿಸಬೇಕಾಗಿದೆ ಎಂದು ಸಚಿವರಲ್ಲಿ ಶಾಸಕರು ವಿನಂತಿಸಿದ್ದಾರೆ. ಒಂದು ವಾರದೊಳಗೆ ವ್ಯವಸ್ಥೆ ಮಾಡುವುದಾಗಿ ಸಚಿವರು ಶಾಸಕರಿಗೆ ಭರವಸೆ ನೀಡಿದರು.

ರಾಜಕೀಯ ಅಪಪ್ರಚಾರ!
ಈ ನಡುವೆ ರಬ್ಬರ್ ಟ್ಯಾಪಿಂಗ್ ಕಾರ್ಮಿಕರಿಗೆ ಬೋನಸ್ ಸಿಗದಂತೆ ಪುತ್ತೂರು ಶಾಸಕರು ತಡೆ ಒಡ್ಡಿದ್ದಾರೆ ಎಂಬ ರಾಜಕೀಯ ಅಪಪ್ರಚಾರವನ್ನು ಮಾಡಲಾಗಿತ್ತು. ಅಪಪ್ರಚಾರ ಮಾಡಿರುವ ವಿಚಾರವನ್ನು ಕಾರ್ಮಿಕರು ಶಾಸಕರಲ್ಲಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು ನೀವು ಕೆಲಸ ಮಾಡಿದ ಬೋನಸ್ ನಿಮಗೆ ಕೊಡಬೇಡಿ ಎಂದು ಹೇಳುವಷ್ಟು ದುಷ್ಟ ನಾನಲ್ಲ, ಬಡವರಿಗಾಗಿಯೇ ನಾನು ಕೆಲಸ ಮಾಡುತ್ತಿದ್ದೇನೆ. ಅಪಪ್ರಚಾರ ಮಾಡುವವರು ಮಾಡಲಿ ನಾನೇನು ಮಾಡುವುದು. ನನ್ನ ಬಳಿ ನ್ಯಾಯ ಕೇಳಿಕೊಂಡು ಬರುವ ಪ್ರತೀಯೊಬ್ಬರಿಗೂ ನ್ಯಾಯ ಕೊಡಿಸುವ ಕೆಲಸವನ್ನು ಮಾಡಿದ್ದೇನೆವಿನ ಯಾರಿಗೂ ಅನ್ಯಾಯ ಮಾಡಿಲ್ಲ, ಮಾಡುವುದೂ ಇಲ್ಲ ಎಂದು ಶಾಸಕರು ತಿಳಿಸಿದರು.

ಕಾರ್ಮಿಕರ ನ್ಯಾಯೋಚಿತ ಬೇಡಿಕೆ
ರಬ್ಬರ್ ಟ್ಯಾಪಿಂಗ್ ಕಾರ್ಮಿಕರದ್ದು ನ್ಯಾಯೋಚಿತ ಬೇಡಿಕೆಯಾಗಿದೆ. ಬೇಡಿಕೆ ಈಡೇರಿಸುವಂತೆ ಶಾಸಕ ಅಶೋಕ್ ರೈಯವರಲ್ಲಿ ಕಾರ್ಮಿಕರು ಮನವಿ ಮಾಡಿದ್ದಾರೆ. ವಾರದೊಳಗೆ ನೀಡುವುದಾಗಿ ಸಚಿವರು ಭರವಸೆಯನ್ನು ನೀಡಿದ್ದಾರೆ. ಈ ನಡುವೆ ರಾಜಕೀಯ ಅಪಪ್ರಚಾರ ಮಾಡಿ ಬೇಳೆ ಬೇಯಿಸಿಕೊಳ್ಳಲು ಕೆಲವರು ಪ್ರಯತ್ನ ಮಾಡಿದ್ದಾರೆ. ಅಪಪ್ರಚಾರವನ್ನು ತಾನು ಖಂಡಿಸುತ್ತೇನೆ.
ಪ್ರಮೋದ್ ಕೆಎಸ್ ಗ್ರಾಪಂ ಸದಸ್ಯರು ಕೊಳ್ತಿಗೆ
ಕಾರ್ಮಿಕರ ಪರ ಹೋರಾಟಗಾರರು

LEAVE A REPLY

Please enter your comment!
Please enter your name here