ಆ.13: ವಿಟ್ಲ ಯಕ್ಷೋತ್ಸವ

0

ವಿಟ್ಲ : ಯಕ್ಷಮಿತ್ರರು-ವಿಟ್ಲ ವಾಟ್ಸಾಪ್ ಬಳಗದವರ ಸಹಕಾರದೊಂದಿಗೆ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಿಟ್ಲ ಬಸವನಗುಡಿ ವಿಟ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಜೇಸಿ ಪೆವಿಲಿಯನ್ ಸಭಾಂಗಣದಲ್ಲಿ ಆ.13ರಂದು ಮಧ್ಯಾಹ್ನ ಗಂಟೆ 1.30ರಿಂದ ರಾತ್ರಿ ಎರಡು ಗಂಟೆ ವರೆಗೆ ವಿಟ್ಲ ಯಕ್ಷೋತ್ಸವ ನಡೆಯಲಿದೆ ಎಂದು ಸಂಘಟಕ ಸುಬ್ರಹ್ಮಣ್ಯ ಮುರಾರಿ ಭಟ್ ಪಂಜಿಗದ್ದೆ ತಿಳಿಸಿದರು.

ಅವರು ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಧ್ಯಾಹ್ನ ಗಂಟೆ 1.30ಕ್ಕೆ ತೆಂಕು ಬಡಗು ತಿಟ್ಟಿನ ದ್ವಂದ್ವ ಭಾಗವತಿಕೆಯೊಂದಿಗೆ ವಾಚಿಕೋತ್ಸವ, ಸಂಜೆ ಸಭಾ ಕಾರ್ಯಕ್ರಮ, ಉತ್ಸವ ಗೌರವಾರ್ಪಣೆ, ಸಂಜೆ ಗಂಟೆ 7.30ರಿಂದ ತುಳು ಕಲೋತ್ಸವ ಕಾಡಮಲ್ಲಿಗೆ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ತಿಳಿಸಿದರು.ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ.

ಶ್ರೀ ಕ್ಷೇತ್ರ ಕಟೀಲಿನ ಹರಿನಾರಾಯಣದಾಸ ಅಸ್ರಣ್ಣರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಯು., ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಮೂಹ ಸಂಸ್ಥೆ ಸಂಚಾಲಕ ಡಾ.ಎಂ.ಮೋಹನ ಆಳ್ವ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ದಯಾನಂದ ಕತ್ತಲ್ಸರ್, ಅರುಣ್ ಕುಮಾರ್ ಪುತ್ತಿಲ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಹಿರಿಯ ಯಕ್ಷಗಾನ ಕಲಾವಿದ ಗೋವಿಂದ ಭಟ್ ಸೂರಿಕುಮೇರು ಮತ್ತಿತರರು ಭಾಗವಹಿಸಲಿದ್ದಾರೆ. ಇದೇ ಸಂದರ್ಭ ಕಲಾಪೋಷಕ ದಿನಕರ ಭಟ್ ಮಾವೆ, ಹಿರಿಯ ಅರ್ಥಧಾರಿ ಶಂಭು ಶರ್ಮ, ಹವ್ಯಾಸಿ ಹಿಮ್ಮೇಳ ಕಲಾವಿದ ಪಿ.ಜಿ.ಜಗನ್ನಿವಾಸ ರಾವ್, ಹಿರಿಯ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಅವರನ್ನು ಪುರಸ್ಕರಿಸಲಾಗುವುದು. ಅಗಲಿದ ಕಲಾವಿದ ದಿ.ಜಗದೀಶ್ ನಲ್ಕ ಅವರ ಕುಟುಂಬಕ್ಕೆ ಯಕ್ಷಸಾಂತ್ವನ ನಿಧಿ ಸಮರ್ಪಿಸಲಾಗುವುದು ಎಂದು ಅವರು ತಿಳಿಸಿದರು.

ಚಲನ ಚಿತ್ರ ನಿರ್ದೇಶಕ, ನಿರ್ಮಾಪಕ, ನಟ ಸುಧಾಕರ ಬನ್ನಂಜೆ, ಹಾಸ್ಯನಟ ಟೆನ್ನಿಸ್ ಕೃಷ್ಣ ತಾರಾ ಮೆರುಗು ನೀಡಲಿದ್ದಾರೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮೇಘಶ್ಯಾಮ ಅಂಗ್ರಿ, ಸಂಜೀವ ಪೂಜಾರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here