ಬಡಗನ್ನೂರು: ದರೋಡೆ ನಡೆದ ಮನೆಗೆ ಶಾಸಕರ ಭೇಟಿ, ಭರವಸೆ

0

ಅಮ್ಮಾ ಹೆದರಬೇಡಿ.. ಪೊಲೀಸ್ ಇಲಾಖೆ ಪ್ರಕರಣವನ್ನು ಬೇದಿಸಲಿದೆ

ಪುತ್ತೂರು: ಕಳೆದ ಕೆಲವು ದಿನಗಳ ಹಿಂದೆ ದರೋಡೆಗೊಳಗಾದ ಬಡಗನ್ನೂರು ಗ್ರಾಪಂ ಮಾಜಿ ಸದಸ್ಯ ಗುರುಪ್ರಸಾದ್ ರೈಯವರ ಮನೆಗೆ ಶಾಸಕರಾದ ಅಶೋಕ್ ರೈಯವರು ಸೆ.10 ರಂದು ಭೇಟಿ ನೀಡಿದರು.


ದರೋಡೆಗೊಳಗಾದ ಗುರುಪ್ರಸಾದ್ ರೈ ಮತ್ತು ಅವರ ತಾಯಿಗೆ ಶಾಸಕರು ಭರವಸೆ ನೀಡಿ ಧೈರ್ಯ ತುಂಬಿದರು. ಕೃತ್ಯ ನಡೆದ ಬಗ್ಗೆ ಪೂರ್ಣ ಮಾಹಿತಿಯನ್ನು ಶಾಸಕರು ಪಡೆದುಕೊಂಡರು. ಬಳಿಕ ಕುಟುಂಬಕ್ಕೆ ಸಾಂತ್ವನ ಹೇಳಿದ ಶಾಸಕರು ಅಮ್ಮಾ ಹೆದರಬೇಡಿ ಈ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿ ದರೋಡೆ ಮಾಡಿದವರನ್ನು ಕಂಡು ಹಿಡಿಯಲಿದ್ದಾರೆ. ಯಾರೇ ಎಲ್ಲಿಂದ ಬಂದು ಈ ಕೃತ್ಯ ಮಾಡಿದರೂ ಹಿಡಿದೇ ಹಿಡಿಯುತ್ತಾರೆ. ನಮ್ಮ ಪೊಲೀಸ್ ಇಲಾಖೆ ಅದರಲ್ಲಿ ಸಮರ್ಥವಾಗಿದೆ. ಘಟನೆ ಬಗ್ಗೆ ಶೀಘ್ರವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಗೃಹ ಸಚಿವ ಡಾ. ಎಚ್ ಜಿ ಪರಮೇಶ್ವರ್ ಜೊತೆ ಮಾತನಾಡಿದ್ದೇನೆ. ಆರೋಪಿಗಳ ಬಂಧನವಾಗಲಿದೆ ಎಂಬ ಪೂರ್ಣ ವಿಶ್ವಾಸ ನನಗಿದೆ. ನೀವು ಧೈರ್ಯವಾಗಿರಿ ಎಂದು ಹೇಳಿದ ಶಾಸಕರು ರಾತ್ರಿ ವೇಳೆ ಪೊಲೀಸ್ ಬೀಟ್ ಹೆಚ್ಚಳ ಮಾಡುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.


ಸಾರ್ವಜನಿಕರು ಸದಾ ಎಚ್ಚರದಿಂದ ಇರಬೇಕು. ದೇಶದಲ್ಲಿ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಅಧಿಕವಾಗುತ್ತಿರುವ ಕಾರಣ ಯುವಕರಿಗೆ ಉದ್ಯೋಗವಿಲ್ಲದೆ ಇಂಥಹ ನೀಚ ಕೃತ್ಯಕ್ಕೆ ಇಳಿಯುತ್ತಿದ್ದಾರೆ. ನಿರುದ್ಯೋಗದ ಸಮಸ್ಯೆಯಿಂದಾಗಿ ದೇಶದಲ್ಲಿ ಜನ ನೆಮ್ಮದಿಯಿಂದ ಬದುಕುವ ವಾತಾವರಣವನ್ನೇ ಕಳೆದುಕೊಂಡಿದ್ದಾರೆ. ರಾಜ್ಯದ ಕಾಂಗ್ರೆಸ್ ಸರಕಾರ ಹಿಂಸೆ, ಅಪರಾಧವನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಶಾಸಕರು ಹೇಳಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು, ಇಂಟಕ್ ಅಧ್ಯಕ್ಷರಾದ ಜಯಪ್ರಕಾಶ್ ಬದಿನಾರ್, ಕಾಂಗ್ರೆಸ್ ಮುಖಂಡರಾದ ಪ್ರಕಾಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here