ಪುತ್ತೂರು: ಶ್ರೀ ಮೇಘವರ್ಣ ಮೂವೀಸ್, ಫ್ರೆಂಡ್ಸ್ ಅರ್ಪಿಸುವ, ಡ್ರೀಮ್ ಕ್ಯಾಚರ್ಸ್ ಪುತ್ತೂರು ಇದರ ಸಹಯೋಗದಲ್ಲಿ ಗಂಗರಾಜ್ ಪಿ. ಆರ್ ನಿರ್ದೇಶನದಲ್ಲಿ ಪುತ್ತೂರಿನ ಕಲಾವಿದರೇ ಪ್ರಧಾನ ಭೂಮಿಕೆಯಲ್ಲಿ ಕಾಣಿಸಲಿರುವ ‘ನಂಬರ್ ಪ್ಲೇಟ್’ ಚಿತ್ರದ ಮುಹೂರ್ತ ಸೆಪ್ಟೆಂಬರ್ 11 ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಹಿಂದು ಸಂಘಟನೆಯ ಮುಖಂಡ ಪುತ್ತಿಲ ಪರಿವಾರದ ಸ್ಥಾಪಕ ಅರುಣ್ ಕುಮಾರ್ ಪುತ್ತಿಲರವರು ಮುಹೂರ್ತ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿ, ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಅಕ್ಷಯ ಕಾಲೇಜಿನ ಸಂಚಾಲಕ ಜಯಂತ್ ನಡುಬೈಲು ಅವರು ಶುಭ ಹಾರೈಸಿದರು. ವೇಷಧಾರಿ, ಗ್ರೂಫಿ, ಶತ್ರುಘ್ನ ಚಿತ್ರದ ನಾಯಕ ನಟರಾದ ಪುತ್ತೂರಿನ ಆರ್ಯನ್ ಈ ಚಿತ್ರದಲ್ಲಿ ನಾಯಕರಾಗಿದ್ದು. ಡ್ರೀಮ್ ಕ್ಯಾಚರ್ಸ್ ಆಕ್ಟಿಂಗ್ ಕ್ಲಾಸ್ನ ಕೀರ್ತಿ ಗೌಡ ನಾಯಕಿಯಾದರೆ, ಅದೇ ಆಕ್ಟಿಂಗ್ ಕ್ಲಾಸ್ ನಲ್ಲಿ ತರಬೇತಿ ಪಡೆದಿರುವ, ಚನ್ನು ಬಿರ್ವಾ, ಶರತ್ ಗಿರಿವನ, ವಿದ್ಯಾಶ್ರೀ, ಸೌಮ್ಯಶ್ರೀ, ಪವಿತ್ರ, ರತನ್ ಗೌಡ, ಯತೀಶ್ ಕುಲಾಲ್, ಅಶ್ವಥ್ ನಾಯ್ಕ್, ಶೋಭಾ ಬೆಳ್ಳಾರೆ, ಮೋನಿಕಾ ಮುಖ್ಯ ತಾರಗಣದಲ್ಲಿದ್ದಾರೆ. ಡಿ-ಬಾಸ್ ದರ್ಶಸ್ ಸರ್ ಅವರ ಆಶೀರ್ವಾದದೊಂದಿಗೆ ಆರಂಭಗೊಳ್ಳಲಿರುವ ಈ ಚಿತ್ರಕ್ಕೆ ರವಿ ರಾಮದುರ್ಗ ಅವರ ಛಾಯಾಗ್ರಾಹಣ, ಹೇಮಂತ್ ಕುಮಾರ್ ಅವರ ಸಂಗೀತ, ಶ್ರೀಧರ್ ತುಮಕೂರ್ ಅವರ ಸಾಹಿತ್ಯ, ಗೌರೀಶ್ ಅವರ ನೃತ್ಯ ಸಂಯೋಜನೆ, ಫಯಾಜ್ ಖಾನ್ ಹಾಗೂ ಚಿನ್ನಯ್ಯ ರವರ ಸಾಹಸನಿರ್ದೇಶನವಿದೆ. ಮುಹೂರ್ತ ಸಮಾರಂಭದಲ್ಲಿ ಪೆನ್ಸಿಲ್ ಬಾಕ್ಸ್ ಚಲನಚಿತ್ರದ ನಿರ್ಮಾಪಕ ದಯಾನಂದ ರೈ, ನಿರ್ದೇಶಕ ರಜಾಕ್ ಪುತ್ತೂರು, ಚಲನಚಿತ್ರ ಹಂಚಿಕೆದಾರ ಬಾಲಕೃಷ್ಣ ರೈ ಕುಕ್ಕಾಡಿ, ಸುದರ್ಶನ್, ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
![](https://puttur.suddinews.com/wp-content/uploads/2023/09/number-plet-2.jpg)
ಪುತ್ತೂರು ಆಸುಪಾಸಿನಲ್ಲೇ ಚಿತ್ರೀಕರಣ:
‘ನಂಬರ್ ಪ್ಲೇಟ್’ ಚಿತ್ರದ ಬಹುತೇಕ ಚಿತ್ರೀಕರಣವು ಪುತ್ತೂರು, ಸುಳ್ಯದ ಆಸು-ಪಾಸು ನಡೆಯಲಿದೆ ಎಂದು ಚಿತ್ರದ ನಿರ್ದೇಶಕ ಗಂಗರಾಜ್ ಪಿ. ಆರ್ ತಿಳಿಸಿದ್ದಾರೆ.