ಆಲಂಕಾರು: ಪಡಿತರ ಅಕ್ಕಿ ಚೀಲದಲ್ಲಿ ಹುಣಸೆಬೀಜ, ಕಲ್ಲು ಹಾಗೂ ಕಲಬೆರಕೆ ವಸ್ತುಗಳು – ಅಧಿಕಾರಿಗಳ ಭೇಟಿ ಪರಿಶೀಲನೆ

0


ಆಲಂಕಾರು: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕೊಯಿಲ ಶಾಖೆಯಲ್ಲಿ ಆಹಾರ ಸರಬರಾಜು ಇಲಾಖೆಯ ಪಡಿತರ ಅಕ್ಕಿಯನ್ನು ಪ್ರತಿ ತಿಂಗಳು ವಿತರಣೆ ಮಾಡುತ್ತಿದ್ದು ಈ ಬಾರಿ ಪಡಿತರ ಅಕ್ಕಿಯ ಕೆಲವು ಗೋಣಿ ಚೀಲದಲ್ಲಿ ಅಕ್ಕಿಯೊಂದಿಗೆ ಹುಣಸೆ ಬೀಜ, ಕಲ್ಲಿನ ಕಟ್ಟು, ಹೆಸರು ಕಾಳಿನ ಪುಡಿ, ಕಲ್ಲುಸಕ್ಕರೆ ಮಿಶ್ರಿತ ಪುಡಿ, ಕಸ ಅಕ್ಕಿಯೊಂದಿಗೆ ಸೇರಿದ್ದು ಅಕ್ಕಿಯ ಗುಣಮಟ್ಟದ ಬಗ್ಗೆ ಪಡಿತರದಾರರು ಪಡಿತರ ವಿತರಣೆಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಈ ಕಲಬೆರಕೆ ಬಗ್ಗೆ ಸಹಕಾರಿ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಧರ್ಮಪಾಲ ರಾವ್ ಕಜೆ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳನ್ನು ಪೋನ್ ಮೂಲಕ ಸಂಪರ್ಕಿಸಿ ಕೊಯಿಲ ಪಡಿತರ ವಿತರಣಾ ಸ್ಥಳಕ್ಕೆ ಅಗಮಿಸಿ ಪರಿಶೀಲನೆ ನಡೆಸುವಂತೆ ತಿಳಿಸಿದ್ದರು. ಅದರಂತೆ ಪಡಿತರ ವಿತರಣಾ ಸ್ಥಳಕ್ಕೆ ಆಗಮಿಸಿದ ಕಂದಾಯ ನಿರೀಕ್ಷಕ ಎಸ್. ಪೃಥ್ವಿರಾಜ್, ಕಡಬ ಆಹಾರ ನೀರಿಕ್ಷಕ ಎಂ.ಎಲ್ ಶಂಕರ, ಕೆ.ಎಫ್.ಸಿ.ಎಸ್ ನ ಸಗಟು ಗೋದಾಮಿನ ಮ್ಯಾನೇಜರ್ ಚಂದ್ರಹಾಸ ತಪಾಸಣೆ ನಡೆಸಿದ್ದು ಕಳಪೆ ಗುಣಮಟ್ಟದ ಪಡಿತರ ಅಕ್ಕಿಯೊಂದಿಗೆ ಕೆಲವೊಂದು ಗೋಣಿ ಚೀಲದಲ್ಲಿ ಹುಣಸೆ ಬೀಜ, ಕಲ್ಲಿನ ಕಟ್ಟು, ಹೆಸರುಕಾಳಿನ ಪುಡಿ ಇರುವುದನ್ನು ಧೃಡಪಡಿಸಿದ್ದು ಹಿರಿಯ ಅಧಿಕಾರಿಗಳಿಗೆ ವರದಿ ನೀಡುವುದಾಗಿ ತಿಳಿಸಿದ್ದಾರೆ.

ಪರೀಶಿಲನೆಯ ಸಂಧರ್ಭದಲ್ಲಿ ಆಲಂಕಾರು ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ ಹಾಗೂ ನಿರ್ದೇಶಕರು, ರಾಮಕುಂಜ ಗ್ರಾ.ಪಂ ಅಧ್ಯಕ್ಷೆ ಸುಚೇತಾ, ಉಪಾಧ್ಯಕ್ಷಕೇಶವ ಗಾಂಧಿಪೇಟೆ, ಕೊಯಿಲ ಗ್ರಾ.ಪಂ ಅಧ್ಯಕ್ಷೆ ಪುಷ್ಪಸುಭಾಸ್ ಶೆಟ್ಟಿ ಆರುವಾರ ಸೇರಿದಂತೆ ಗ್ರಾ.ಪಂ ಸದಸ್ಯರು ಹಾಗೂ ಪ್ರಮುಖರು, ಸ್ಥಳೀಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here