ಅಂಬಿಕಾ ಮಹಾವಿದ್ಯಾಲಯದಲ್ಲಿ ’ಸಕಾರಾತ್ಮಕ ಪತ್ರಿಕೋದ್ಯಮ’ ತರಬೇತಿ ತರಗತಿಗಳಿಗೆ ಚಾಲನೆ

0

ದಾರಿದೀಪಗಳಾಗುವ ಬದಲು ದೀಪಧಾರಿಗಳಾಗಿ ಮುನ್ನಡೆಯಬೇಕು : ವೇಣುಗೋಪಾಲ ಶೇರ
ಪುತ್ತೂರು: ನಕಾರಾತ್ಮಕ ವಿಚಾರಗಳು ನಮ್ಮನ್ನು ಅತೀವವಾಗಿ ಆಕರ್ಷಿಸುತ್ತಿವೆ. ಪರಿಣಾಮವಾಗಿ ನಮ್ಮಲ್ಲಿನ ಮೌಲ್ಯಗಳು ಕುಸಿಯಲಾರಂಭಿಸಿವೆ. ಮಾಧ್ಯಮಗಳಲ್ಲಿನ ವೈಭವೀಕರಿಸಿದ ಅಪರಾಧ ಸುದ್ದಿಗಳು ನಮ್ಮೊಳಗಿನ ಮನುಷ್ಯಗುಣದ ಮೇಲೆ ಕೆಟ್ಟ ರೀತಿಯಲ್ಲಿ ಪ್ರಭಾವ ಬೀರುತ್ತಿವೆ. ಹಾಗಾಗಿ ಮೌಲ್ಯಗಳನ್ನಾಧರಿಸಿದ ವ್ಯಕ್ತಿತ್ವಗಳನ್ನು ರೂಪುಗೊಳಿಸಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ದಿಕ್ಕು ತಪ್ಪುತ್ತಿರುವ ಸಮಾಜಕ್ಕೆ ದಾರಿದೀಪಗಳಾಗುವ ಬದಲು ದೀಪಧಾರಿಗಳಾಗಿ ಕತ್ತಲಿರುವಲ್ಲೆಲ್ಲಾ ಬೆಳಕು ಚೆಲ್ಲುವ ಕೆಲಸಗಳಾಗಬೇಕು ಎಂದು ಸುಳ್ಯದ ಮುರುಳ್ಯದ ಕೃಷಿಕ ವೇಣುಗೋಪಾಲ ಶೇರ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ಹಾಗೂ ರೂರಲ್ ಮಿರರ್ ಡಿಜಿಟಲ್ ಮೀಡಿಯಾದ ಸಹಯೋಗದಲ್ಲಿ ಆರಂಭಿಸಲಾದ ಸಕಾರಾತ್ಮಕ ಪತ್ರಿಕೋದ್ಯಮ ಎಂಬ ತರಬೇತಿ ತರಗತಿಗಳನ್ನು ಉದ್ಘಾಟಿಸಿ ಮಂಗಳವಾರ ಮಾತನಾಡಿದರು.
ಇಂದಿನ ಪೀಳಿಗೆಗೆ ಯಾರನ್ನು ಅನುಕರಣೆ ಮಾಡಬೇಕೆಂಬ ಕಲ್ಪನೆಗಳಿಲ್ಲ. ಆದರ್ಶಗಳನ್ನು ಬಿತ್ತುವ ವ್ಯವಸ್ಥೆಗಳು ಒಂದು ಹಂತದಲ್ಲಿ ತುಂಬಾ ಕಡಿಮೆಯಾದದ್ದರ ಪರಿಣಾಮವನ್ನು ಇಂದಿನ ಪೀಳಿಗೆ ಅನುಭವಿಸುತ್ತಿದೆ. ಪರಿಸ್ಥಿತಿಯೊಂದಿಗಿನ ರಾಜಿ ಇಂದು ಎಲ್ಲೆಡೆಯೂ ಕಂಡುಬರುತ್ತಿದೆ. ಆದರೆ ಅದರಿಂದಾಗಿ ನಾವು ನೈತಿಕವಾದ ಅಧಃಪತನವನ್ನು ಕಾಣಲಾರಂಭಿಸಿದ್ದೇವೆ ಎಂಬುದು ಗಮನಾರ್ಹ. ಪ್ರವಾಹದೊಂದಿಗೆ ಕ್ರಮಿಸುವುದು ಸಾಧನೆಯೇನೂ ಅಲ್ಲ. ಆದರೆ ಪ್ರವಾಹಕ್ಕೆ ವಿರುದ್ಧವಾಗಿ ನಮಗೆ ಸರಿ ಅನ್ನಿಸಿದ ಹಾದಿಯಲ್ಲೇ ಹೋಗುವುದು ಕ್ಲಿಷ್ಟಕರವಾದರೂ ಆತ್ಮತೃಪ್ತಿ ಉಳ್ಳಂತಹದ್ದು ಎಂದು ಅಭಿಪ್ರಾಯಪಟ್ಟರು.
ಪತ್ರಿಕೋದ್ಯಮದಲ್ಲಿ ಇಂದು ಆಯ್ಕೆಗಳು ಹಲವಾರಿವೆ. ಆದರೆ ಕೃಷಿ ಗ್ರಾಮೀಣ ಸಂಗತಿಗಳನ್ನು ಪಸರಿಸುವ ಪ್ರಯತ್ನಗಳು ಅಗತ್ಯವಾಗಿ ಬೇಕಿವೆ. ಪ್ರಸಿದ್ಧಿ ಹೊಂದಿದವರಿಗೆ ಸಾಕಷ್ಟು ಪ್ರಚಾರ ದೊರಕುವುದು ಸಹಜ. ಎಕರೆಗಟ್ಟಳೆ ತೋಟ ಇರುವವರು ಆಗಾಗ ಕಾಣಿಸಿಕೊಳ್ಳುತ್ತಾರೆ. ಆದರೆ ಸೆಂಟ್ಸ್ ಲೆಕ್ಕದ ಭೂಮಿಯಲ್ಲೂ ಸಾಧನೆ ಮಾಡಿದವರನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯ ಪತ್ರಿಕೋದ್ಯಮದಿಂದ ಆಗಬೇಕಿದೆ. ಹುಡುಕಿಕೊಂಡು ಹೋಗಿ ವಿಷಯವನ್ನು ಗುರುತಿಸುವ ಪ್ರಯತ್ನಗಳಾಗಬೇಕು. ಭಾರತವನ್ನು ನೈಜವಾಗಿ ಕಟ್ಟುವ ಕಾರ್ಯಗಳಲ್ಲಿ ಇದೂ ಒಂದು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರೂರಲ್ ಮಿರರ್ ಡಿಜಿಟಲ್ ಮೀಡಿಯಾದ ಸಂಸ್ಥಾಪಕ ಮಹೇಶ ಪುಚ್ಚಪ್ಪಾಡಿ ಮಾತನಾಡಿ ವಾಹಿನಿಗಳನ್ನು ಪತ್ರಿಕೆಗಳನ್ನು ನೋಡುವಾಗ ಇದು ಹೀಗೆಯೇ ಮುಂದುವರಿದರೆ ನಾಳಿನ ಸಮಾಜದ ಪರಿಸ್ಥಿತಿಯೇನು ಎಂಬ ಚಿಂತೆ ಕಾಡಲಾರಂಭಿಸುತ್ತದೆ. ಹಾಗಾಗಿ ನಮ್ಮಿಂದಾಗುವ ಬದಲಾವಣೆಯ ಪ್ರಯತ್ನಗಳನ್ನು ಸಣ್ಣಮಟ್ಟದಲ್ಲಾದರೂ ಮಾಡಬೇಕಾದ ಅಗತ್ಯಗಳಿವೆ. ಆದ್ದರಿಂದ ಸಕಾರಾತ್ಮಕ ಪತ್ರಿಕೋದ್ಯಮ ಎಂದರೇನು ಹಾಗೂ ಈ ದಿನಗಳಲ್ಲಿ ಮಾಧ್ಯಮಗಳ ಮುಖಾಂತರ ಅದನ್ನು ಹೇಗೆ ಜಾರಿಗೊಳಿಸಬೇಕು ಎಂಬ ಯೋಚನೆಯ ನೆಲೆಯಲ್ಲಿ ತರಬೇತಿ ತರಗತಿಗಳ ಅವಶ್ಯಕತೆ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಸಮಾಜ ಹಾದಿ ತಪ್ಪುತ್ತಿರುವುದನ್ನು ಕಾಣುತ್ತಿದ್ದೇವೆ. ದೇಶದ ಮೇಲೆ ದಾಳಿ ಮಾಡಿದವರನ್ನು, ಲೂಟಿಕೋರರನ್ನು ವೈಭವೀಕರಿಸುವ, ಅನುಸರಿಸುವ ಪ್ರಯತ್ನಗಳಾಗುತ್ತಿವೆ. ಇದನ್ನು ಖಂಡಿಸುವ, ಸತ್ಯ ವಿಷಯಗಳನ್ನು ಸಮಾಜಕ್ಕೆ ನೀಡುವ ಎದೆಗಾರಿಕೆಯುಳ್ಳ ಪತ್ರಕರ್ತರ ಅವಶ್ಯಕತೆ ಇದೆ ಎಂದು ಹೇಳಿದರು.
ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ತೃಪ್ತಿ ಎಂ ಮಯ್ಯಾಳ ಪ್ರಾರ್ಥಿಸಿದರು. ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಪ್ರಸ್ತಾವನೆಗೈದರು. ವಿದ್ಯಾರ್ಥಿನಿ ಅಕ್ಷಿತಾ ಸ್ವಾಗತಿಸಿದರು. ವಿದ್ಯಾರ್ಥಿನಿ ಸೌಜನ್ಯಾ ವಂದಿಸಿ, ವಿದ್ಯಾರ್ಥಿನಿ ಪಂಚಮಿ ಬಾಕಿಲಪದವು ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here