ಬಡವರ ಜೊತೆ ಸಹಭೋಜನ ಮಾಡುವ ಉದ್ದೇಶದಿಂದ ಸಾರಿ ವಿತರಣೆ ಮಾಡುತ್ತಿದ್ದೇನೆ: ಶಾಸಕ ಅಶೋಕ್ ರೈ

0

ಪುತ್ತೂರು: ದೀಪಾವಳಿ ಸಂದರ್ಭದಲ್ಲಿ ಹಲವು ವರ್ಷಗಳಿಂದ ಮಹಿಳೆಯರಿಗೆ ಮತ್ತು ಪುರುಷರಿಗೆ ವಸ್ತ್ರ ವಿತರಣೆ ಮಾಡುತ್ತಿದ್ದೇನೆ. ನಾನೇನು ಅಹಂಕಾರದಿಂದ ಇದನ್ನು ಮಾಡುತ್ತಿಲ್ಲ ಕ್ಷೇತ್ರದ ಬಡವರ ಜೊತೆ ಒಂದು ಹೊತ್ತು ಸಹಭೋಜನ ಮಾಡಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಮಾಡುತ್ತಿದ್ದೇನೆ. ನ. 13ರಂದು ಪುತ್ತೂರಿನಲ್ಲಿ ನಡೆಯುವ ವಸ್ತ್ರ ವಿತರಣಾ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆಶೀರ್ವಾದ ಮಾಡುವಂತೆ ಶಾಸಕ ಅಶೋಕ್ ರೈ ಮನವಿ ಮಾಡಿದರು.
ಅವರು ಪಡ್ಡಾಯೂರು ಶ್ರೀ ಅನ್ನಪೂರ್ಣೇಶ್ವರಿ ಭಜನಾಮಂದಿರ ಪಡ್ಡಾಯೂರು ಇಲ್ಲಿ ನಡೆದ19ನೇ ವರ್ಷದ ನವರಾತ್ರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪುತ್ತೂರಿನಲ್ಲಿ ಈ ಬಾರಿ ಸುಮಾರು 50 ಸಾವಿರ ಮಂದಿಗೆ ವಸ್ತ್ರ ವಿತರಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ನಾನು ಕಾರ್ಯಕ್ರಮಕ್ಕೆ ಭಾಗವಹಿಸುವ ಬಡವರ ಜೊತೆ ಸಹಭೋಜನವನ್ನು ಮಾಡಲಿದ್ದೇನೆ ಎಂದು ಹೇಳಿದರು. ಇನ್ನೊಬ್ಬರ ಕಷ್ಟಕ್ಕೆ ನೆರವಾಗುವುದೇ ಧರ್ಮವಾಗಿದೆ. ಜಾತಿಮತಗಳ ಭೇದವಿಲ್ಲದೆ ಎಲ್ಲರೊಂದಿಗೆ ಸಹೋದರ ಭಾವನೆಯಿಂದ ಬದುಕುವುದು ಮತ್ತು ಧರ್ಮಗಳ ನಡುವೆ ಪರಸ್ಪರ ಸೌಹಾರ್ದತೆಯ ವಾತಾವರಣ ಇದ್ದರೆ ಮಾತ್ರ ನಮ್ಮ ಭಾರತ ವಿಶ್ವಗುರುವಾಗಲು ಸಾಧ್ಯವಾಗಿದೆ. ಇಲ್ಲಿ ಹಿಂಸೆ, ಪ್ರಚೋಧನೆಯನ್ನು ಯಾರೂ ಮಾಡಬಾರದು. ನಮ್ಮ ನೆರೆಯವರ ಜೊತೆ ನಾವು ಸದಾ ಉತ್ತಮ ಬಾಂಧವ್ಯ ಹೊಂದರಬೇಕು ಅವರ ನೋವುಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು. ವೃದ್ದರಾದ ತಂದೆ ತಾಯಿಯನ್ನು ಆರೈಕೆ ಮಾಡುವ ಮೂಲಕ ಅವರಲ್ಲಿ ದೇವರನ್ನು ಕಾಣುವ ಮನೋಭಾವ ನಮ್ಮಲ್ಲಿರಬೇಕು ಎಂದು ಹೇಳಿದರು.

ಮನೆ ಒಡತಿಯ ಕೈ ಗಟ್ಟಿಮಾಡಲು 2೦೦೦ ಕೊಟ್ಟಿದ್ದೇವೆ
ಮನೆ ಒಡತಿಯ ಕೈ ಗಟ್ಟಿಯಾದರೆ ಮಾತ್ರ ಕುಟುಂಬ ನೆಮ್ಮದಿಯಾಗಿರಲು ಸಾಧ್ಯ ಎಂಬುದನ್ನು ಮನಗಂಡು ರಾಜ್ಯದ ಕಾಂಗ್ರೆಸ್ ಸರಕಾರ ಮಹಿಳೆಯರ ಖಾತೆಗೆ 2೦೦೦ ನೀಡುತ್ತಿದ್ದೇವೆ. ಮಹಿಳೆಯರು ಸ್ವಾವಲಂಬಿಗಳಾಗಬೇಕು, ಅವರಿಗೂ ನೆಮ್ಮದಿಯ ಜೀವನ ದೊರೆಯಬೇಕು ಎಂಬ ಉದ್ದೇಶದಿಂದ ಸರಕಾರ ಉಚಿತ ವಿದ್ಯುತ್, ಪಡಿತರ ಉಚಿತ ಬಸ್ಸಿನ ಜೊತೆಗೆ ಗೃಹಲಕ್ಷ್ಮಿಯನ್ನು ನೀಡುತ್ತಿದೆ. ಎಲ್ಲರಿಗೂ ಈ ಹಣ ಜಮೆಯಾಗಲಿದ್ದು ತಾಂತ್ರಿಕ ಕಾರಣಗಳಿಂದ ಹಣ ಜಮೆಯಾಗದೇ ಇದ್ದಲ್ಲಿ ನನ್ನ ಕಚೇರಿಯನ್ನು ಸಂಪರ್ಕಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಬನ್ನೂರು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರಭಟ್ ಮಾತನಾಡಿ ಪುತ್ತೂರಿನ ಶಾಸಕರು ನಮ್ಮೆಲ್ಲರ ಹೆಮ್ಮೆಯಾಗಿದ್ದಾರೆ. ಬಡವರ ಕಣ್ಣೀರೊರೆಸುವ ಮೂಲಕ ಅವರ ಕಷ್ಟಗಳಿಗೆ ನೆರವಾಗುತ್ತಿದ್ದಾರೆ. ಪುತ್ತೂರಿನಲ್ಲಿ ಗೆದ್ದು ಬಂದ ಯಾವುದೇ ಶಾಸಕರು ಈ ಕೆಲಸವನ್ನು ಮಾಡಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಸರಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವುದು ಮಾತ್ರವಲ್ಲದೆ ಅದು ಇಲ್ಲಿನ ಕಟ್ಟಕಡೇಯ ವ್ಯಕ್ತಿಗೂ ಸಿಗುವಂತಾಗಬೇಕು ಎಂಬುದೇ ಶಾಸಕರ ಕನಸಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಭಜನಾಮಂದಿರ ಅಧ್ಯಕ್ಷ ಗಣೇಶ್ ಗೌಡ, ಪಡ್ಡಾಯೂರು ಕಾಂಗ್ರೆಸ್ ಬೂತ್ ಅಧ್ಯಕ್ಷ ಲೋಕೇಶ್ ಪಡ್ಡಾಯೂರು ಉಪಸ್ಥಿತರಿದ್ದರು. ಮೋಹನ್ ಪಡ್ಡಾಯೂರು ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here