ನ.5 : ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಭಕ್ತಾದಿಗಳ ಸಭೆ

0

ಪುತ್ತೂರು : ಆದಿ ಸುಬ್ರಹ್ಮಣ್ಯದಲ್ಲಿ ಹುತ್ತಕ್ಕೆ ಪೂಜೆ ಸಲ್ಲುವಂತೆ ಪುತ್ತೂರು ತಾಲೂಕಿನಲ್ಲೂ ಹುತ್ತಕ್ಕೆ ಪೂಜೆ ಸಲ್ಲುವ ಏಕೈಕ ಕ್ಷೇತ್ರವಾಗಿರುವ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವಕ್ಕೆ ದಿನನಿಗದಿಯಾಗಿದ್ದು, ನ.5ರಂದು ಬೆಳಿಗ್ಗೆ 10 ಗಂಟೆಗೆ ಪೂರ್ವಭಾವಿಯಾಗಿ ಅಂಗವಾಗಿ ಭಕ್ತಾದಿಗಳ ಸಭೆ ನಡೆಯಲಿದೆ.ಸಭೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಭಾಗವಹಿಸಲಿದ್ದು ,ಬ್ರಹ್ಮಕಲಶೋತ್ಸವದ ರೂಪುರೇಷೆ ಸಿದ್ದತೆಗಳ ಬಗ್ಗೆ ಭಕ್ತಾದಿಗಳ ಸಭೆ ನಡೆಯಲಿದೆ.

20 ವರ್ಷದ ಬಳಿಕ ಮತ್ತೊಮ್ಮೆ ಬ್ರಹ್ಮಕಲಶೋತ್ಸವ
ಶ್ರೀಕ್ಷೇತ್ರದಲ್ಲಿ 2004ರಂದು ಪುನರ್ನಿರ್ಮಾಣ ಬ್ರಹ್ಮಕಲಶೋತ್ಸವ ನಡೆದಿತ್ತು. ಬಳಿಕ ದೇವಸ್ಥಾನವು ವೇಗದಲ್ಲಿ ಅಭಿವೃದ್ಧಿಯನ್ನು ಕಂಡಿದೆ.ದೇವಸ್ಥಾನದಲ್ಲಿ ಅತಿಥಿ ಗೃಹ,ಅರ್ಚಕರ ಮನೆ,ದೇವಸ್ಥಾನದ ಸುತ್ತ ಇಂಟರ್‌ಲಾಕ್ ಅಳವಡಿಕೆ,ದೇವಸ್ಥಾನದ ಸುತ್ತ ಶೀಟ್ ಅಳವಡಿಕೆ ಮೊದಲಾದ ಕಾರ್ಯಗಳು ನಡೆದಿವೆ.
ಇದೀಗ 2024ರ ಬ್ರಹ್ಮಕಲಶೋತ್ಸವದ ಅಂಗವಾಗಿ ದೇವಸ್ಥಾನದ ಗರ್ಭಗುಡಿ ,ನಮಸ್ಕಾರ ಮಂಟಪಕ್ಕೆ ತಾಮ್ರದ ಹೊದಿಕೆ ಅಳವಡಿಸಲಾಗಿದೆ.ನೂತನವಾಗಿ ವಸಂತ ಮಂಟಪ ನಿರ್ಮಾಣವಾಗಿದೆ.

ವಿಶೇಷ ಕಾರಣಿಕತೆಯ ಕ್ಷೇತ್ರ
ದೇವಸ್ಥಾನಕ್ಕೆ ತನ್ನದೇ ವಿಶೇಷ ಕಾರಣಿಕತೆ ಇದೆ.ಸಂತಾನ ಭಾಗ್ಯವಿಲ್ಲದವರಿಗೆ ಸಂತಾನ ಭಾಗ್ಯ,ವಿವಾಹವಾಗದವರಿಗೆ ಕಂಕಣ ಭಾಗ್ಯ ,ಶನಿ ದೋಷ ನಿವಾರಣೆಗೆ ,ಸರ್ಪದೋಷ ನಿವಾರಣೆಗಾಗಿ ಅಧಿಕ ಸಂಖ್ಯೆಯಲ್ಲಿ ಕ್ಷೇತ್ರದಲ್ಲಿ ಪ್ರಾರ್ಥಿಸಿ ಪೂಜೆ ಮಾಡಿಸಿಕೊಂಡು ದೇವರ ಅನುಗ್ರಹ ಪಡೆದವರು ಹಲವರು ಇದ್ದಾರೆ.

ಮೂರು ತಾಲೂಕುಗಳ ಸಂಗಮ ತಾಣ
ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದಲ್ಲಿದ್ದು ,ದೇವಳದ ಸುತ್ತ ಕಡಬ ತಾಲೂಕಿನ ಪಾಲ್ತಾಡಿ ಗ್ರಾಮ ಹಾಗೂ ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮವೂ ಸೇರಿಕೊಂಡಿದೆ.

2024ರ ಫೆ.17ರಿಂದ ಫೆ.24ರವರೆಗೆ ಬ್ರಹ್ಮಕಲಶ
ಶ್ರೀಕ್ಷೇತ್ರವು 20 ವರ್ಷಗಳ ಬಳಿಕ ಮತ್ತೆ ಬ್ರಹ್ಮಕಲಶೋತ್ಸವಕ್ಕೆ ಅಣಿಯಾಗುತ್ತಿದೆ.ಜೀರ್ಣೋದ್ದಾರ ಅಂಗವಾಗಿ ಈಗಾಗಲೇ ಜೂ.14ರಂದು ಅನುಜ್ಞಾ ಕಲಶ ನಡೆದಿದೆ.ಅಭಿವೃದ್ದಿ ಕಾರ್ಯಗಳು ವೇಗವಾಗಿ ಸಾಗುತ್ತಿದ್ದು, ಬ್ರಹ್ಮಕಲಶೋತ್ಸವವು 2024ರ ಫೆ.17ರಿಂದ ಫೆ.24 ರವರೆಗೆ ನಡೆಯಲಿದೆ.
ಸಂತೋಷ್ ಕುಮಾರ್ ರೈ ನಳೀಲು ,ಆಡಳಿತ ಮೊಕ್ತೇಸರರು ,ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ

LEAVE A REPLY

Please enter your comment!
Please enter your name here