![](https://puttur.suddinews.com/wp-content/uploads/2024/07/Imperial_Manjunatheshwara_-GL-Acharya.gif)
ಬೆಟ್ಟಂಪಾಡಿ: ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಮಳೆ ನೀರು ಕೊಯ್ಲು ಮಾಡುವುದರ ಮೂಲಕ ನೀರಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಲ್ಲದೆ ಅಂತರ್ಜಲ ನೀರಿನ ಮಟ್ಟವನ್ನೂ ಕಾಯ್ದುಕೊಳ್ಳಬಹುದೆಂದು ಸುದ್ಧಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರೂ, ಅರಿವು ಸುದ್ದಿ ಕೃಷಿ ಸೇವಾ ಕೇಂದ್ರದ ಮುಖ್ಯಸ್ಥರೂ ಆದ ಡಾ. ಯು. ಪಿ. ಶಿವಾನಂದರವರು ಹೇಳಿದರು. ಅವರು ನ.10 ರಂದು ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾದ “ಜಲ ಸಂರಕ್ಷಣೆ – ಮಳೆ ನೀರು ಕೊಯ್ಲು” ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪೊಡಿಯ ವಹಿಸಿದ್ದರು. ಐ ಕ್ಯೂ ಎ ಸಿ ಸಂಚಾಲಕರಾದ ಡಾ. ಕಾಂತೇಶ್ ಎಸ್ ಮಾತನಾಡಿ ಎಲ್ಲರೂ ವೈಯಕ್ತಿಕ ಗಮನ ಹರಿಸಿ ನೀರಿನ ಸಂರಕ್ಷಣೆಯನ್ನು ಮಾಡುವ ಜವಾಬ್ದಾರಿಯಿದೆ ಹಾಗೂ ಡಾ. ಯು. ಪಿ. ಶಿವಾನಂದರ ಸಾಮಾಜಿಕ ಕಳಕಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಕೋ ಕ್ಲಬ್ ನ ಸಂಯೋಜಕರಾದ ಡಾ. ಯೋಗೇಶ್ ಎಲ್. ಎನ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು. ಅನನ್ಯ, ವಿದ್ಯಾಶ್ರೀ ಹಾಗೂ ದೀಕ್ಷಿತಾ ಪ್ರಾರ್ಥಿಸಿದರು. ಗ್ರಂಥಪಾಲಕರಾದ ರಾಮ ಕೆ. ಕಾರ್ಯಕ್ರಮ ನಿರೂಪಿಸಿದರು. ಮಳೆ ನೀರು ಕೊಯ್ಲು ಹೇಗೆ? ಏನು? ಎಂಬುದರ ಬಗೆಗಿನ ಪ್ರಾತ್ಯಕ್ಷತೆಯ ವಾಹನದ ಮೂಲಕ ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಭಾಗವಹಿಸಿ ಮಾಹಿತಿಯನ್ನು ಪಡೆದುಕೊಂಡರು. ಅರಿವು ಸುದ್ದಿ ಕೃಷಿ ಸೇವಾ ಕೇಂದ್ರದ ಹೊನ್ನಪ್ಪ ಹಾಗೂ ಕುಶಾಲಪ್ಪ ಸಹಕರಿಸಿದರು.
![](https://puttur.suddinews.com/wp-content/uploads/2023/11/445-1024x342.jpg)