ಮಾಧ್ಯಮದಲ್ಲಿ ಶುದ್ಧ ಕನ್ನಡ ಬಳಕೆ ಹಾಗೂ ರಾಷ್ಟ್ರದ ಬಗೆಗಿನ ಕಾರ್ಯಕ್ರಮಕ್ಕಾಗಿ ಒತ್ತಾಯ

0

ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಸರ್ಕಾರಕ್ಕೆ ಮನವಿ


ಪುತ್ತೂರು: ಖಾಸಗಿ ದೂರದರ್ಶನ ಮಾಧ್ಯಮ ಹಾಗೂ ಬಾನುಲಿ ಕೇಂದ್ರಗಳಿಗೆ ಶುದ್ಧ ಕನ್ನಡವನ್ನೇ ಬಳಸುವಂತೆ ಹಾಗೂ ಎಲ್ಲಾ ದೂರದರ್ಶನ ವಾಹಿನಿಗಳಲ್ಲಿ ಕಡ್ಡಾಯವಾಗಿ ದಿನಕ್ಕೆ ಒಂದು ತಾಸಿನಷ್ಟು ಹೊತ್ತು ದೇಶದ ಉತ್ಕೃಷ್ಟತೆಯ ಬಗೆಗೆ ಕಾರ್ಯಕ್ರಮ ನೀಡುವ ನೆಲೆಯಲ್ಲಿ ಸರ್ಕಾರದ ವತಿಯಿಂದ ಸೂಕ್ತ ನಿರ್ದೇಶನ ನೀಡುವಂತೆ ಒತ್ತಾಯಿಸಿ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ವತಿಯಿಂದ ಬುಧವಾರ ಪತ್ರಿಕಾಗೋಷ್ಟಿ ನಡೆಸಲಾಯಿತು.


ಕನ್ನಡದ ಬೆಳವಣಿಗೆಗೆ ಸರ್ಕಾರಾದಿಯಾಗಿ ಕನ್ನಡ ಪರ ಸಂಘಟನೆಗಳು, ಹಿರಿ-ಕಿರಿ ಸಾಹಿತಿಗಳು ಮಾತ್ರವಲ್ಲದೆ ಪ್ರಜ್ಞಾವಂತ ಕನ್ನಡಾಭಿಮಾನಿ ನಾಗರಿಕರು ನಿರಂತರವಾಗಿ ಶ್ರಮವಹಿಸುತ್ತಿದ್ದಾರೆ. ಆದರೆ ಕನ್ನಡದ ಖಾಸಗಿ ಸುದ್ದಿವಾಹಿನಿಗಳಲ್ಲಿ ವಾರ್ತಾವಾಚಕರ ಮತ್ತು ವರದಿಗಾರರ ಮುಖಾಂತರ ಪ್ರಸ್ತುತಗೊಳ್ಳುತ್ತಿರುವ ಭಾಷೆ, ಕನ್ನಡಕ್ಕೆ ಹಾನಿಯನ್ನುಂಟುಮಾಡುತ್ತಿದೆ. ಅತ್ತ ಇಂಗ್ಲೀಷೂ ಅಲ್ಲದ, ಇತ್ತ ಕನ್ನಡವೂ ಅಲ್ಲದ ಕಂಗ್ಲೀಷ್ ಭಾಷೆ ನಿರಂತರವಾಗಿ ಕನ್ನಡಿಗರ ಮನೆ-ಮನಗಳಲ್ಲಿ ಪ್ರತಿಧ್ವನಿಸುತ್ತಿದೆ. ಇಂತಹ ಭಾಷೆಯನ್ನೇ ದಿನಪೂರ್ತಿ ಕೇಳುವ ಎಳೆಯ ಮಕ್ಕಳಲ್ಲಿ ಶುದ್ಧ ಕನ್ನಡದ ಸಾಹಿತ್ಯ ಮರೆಯಾಗುವ ಅಪಾಯವಿದೆ. ಅದರಲ್ಲೂ ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ವ್ಯಕ್ತವಾಗುತ್ತಿರುವ ಭಾಷೆಯಂತೂ ಗಾಬರಿ ಹುಟ್ಟಿಸುವಂತಿದೆ. ಹಾಗಾಗಿ ಸರ್ಕಾರಾದಿಯಾಗಿ ಮಾಧ್ಯಮ ಮಿತ್ರರೂ ಈ ನೆಲೆಯಲ್ಲಿ ಪ್ರಯತ್ನಪಡುವಂತೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವನೀತ್ ಕರೆ ನೀಡಿದರು.


ನಮ್ಮ ಸುದ್ದಿವಾಹಿನಿಗಳಲ್ಲಿ, ಖಾಸಗಿ ಬಾನುಲಿ ಕೇಂದ್ರಗಳಲ್ಲಿ ಅತ್ಯಂತ ಪ್ರತಿಭಾನ್ವಿತ ಪತ್ರಕರ್ತರು ಹಾಗೂ ಪ್ರವಾಚಕರು ಇರುವುದು ಹೌದಾದರೂ ಭಾಷೆಯ ಬಗೆಗಿನ ಅವರ ನಿರ್ಲಕ್ಷ್ಯದಿಂದಾಗಿ ’ಎಲ್ಲಾ ಬಣ್ಣವನ್ನು ಮಸಿ ನುಂಗಿತು’ ಎಂಬಂತಾಗಿದೆ. ಆದ್ದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ಅವರು ಒತ್ತಾಯಿಸಿದರು. ದಿನಪತ್ರಿಕೆಗಳು ಹಾಗೂ ಆಕಾಶವಾಣಿ ಬಾನುಲಿ ಕೇಂದ್ರಗಳು ಶುದ್ಧ ಕನ್ನಡ ಸಾಹಿತ್ಯವನ್ನು ಪ್ರತಿದಿನವೂ ಜನರಿಗೆ ಉಣಬಡಿಸುತ್ತಿವೆ. ಈ ಮಾದರಿಯಲ್ಲೇ ಖಾಸಗಿ ದೂರದರ್ಶನಗಳು ಹಾಗೂ ಬಾನುಲಿ ಕೇಂದ್ರಗಳು ಕಾರ್ಯನಿರ್ವಹಿಸಬೇಕೆಂದು ಅವರು ಮನವಿ ಮಾಡಿದರು.


ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರಿಯಾಲ್ ಆಳ್ವಾ ಮಾತನಾಡಿ ಮಾಧ್ಯಮಗಳು ಜನರ ಮೇಲೆ ಬೀರುವ ಪರಿಣಾಮ ಅಪಾರವಾದದ್ದು. ಹಾಗಾಗಿಯೇ ಮಾಧ್ಯಮಗಳು ಜನರಲ್ಲಿ ಚಿಂತನೆಯನ್ನು ರೂಪಿಸುವ, ಬದಲಾಯಿಸುವ ಶಕ್ತಿಯನ್ನು ಹೊಂದಿವೆ. ಅದರಲ್ಲೂ ಪಾರಂಪರಿಕ ಮಾಧ್ಯಮಗಳಲ್ಲೊಂದಾದ ದೃಶ್ಯ ಮಾಧ್ಯಮ ನೋಡುಗರ ಅಂತರಂಗವನ್ನು ಬಹುಸುಲಭಕ್ಕೆ ತಲಪಿಬಿಡುತ್ತದೆ ಮತ್ತು ವಿಷಯವೊಂದನ್ನು ಬಲವಾಗಿ ಸ್ಥಾಪಿಸಿಬಿಡುತ್ತದೆ. ಪ್ರಸ್ತುತ 24×7 ಸುದ್ದಿವಾಹಿನಿಗಳು, ಮನರಂಜನಾ ವಾಹಿನಿಗಳು, ಕ್ರೀಡಾವಾಹಿನಿಗಳೇ ಮೊದಲಾದ ಸರಿಸುಮಾರು 900ಕ್ಕೂ ಅಧಿಕ ವಾಹಿನಿಗಳು ನಮ್ಮ ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ ಈ ವಾಹಿನಿಗಳು ದೇಶದ ಬಗೆಗಿನ ಸಕಾರಾತ್ಮಕ ಸಂಗತಿಗಳನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ರೂಪುಗೊಳಿಸಬೇಕಾದ್ದು ಸಮಾಜದ ದೃಷ್ಟಿಯಿಂದ ಅನಿವಾರ್ಯ ಎಂದರು.


ಇಂದು ಮನರಂಜನೆಯ ಹೆಸರಿನಲ್ಲಿ ಕುಟುಂಬದ ಬಂಧವನ್ನು ಸಡಿಲಿಸುವ ಧಾರಾವಾಹಿಗಳು ನಿರಂತರವಾಗಿ ಮನೆಮನಗಳನ್ನು ತಪುತ್ತಿವೆ. ಅಶ್ಲೀಲತೆಯ ಗೆರೆಯನ್ನೂ ಮೀರಿ ಅನೇಕ ದೃಶ್ಯಾವಳಿಗಳು ನಮ್ಮ ಮನೆಯೊಳಗೆ, ಮಕ್ಕಳ ಮುಂದೆ ಬಿತ್ತರಗೊಳ್ಳುತ್ತಿವೆ. ಸುದ್ದಿಯ ಹೆಸರಿನಲ್ಲಿ ವೈಭವೀಕರಣ, ಕಿರಿಚಾಡುವಿಕೆಗಳು ನಡೆಯುತ್ತಿವೆ. ಇದಕ್ಕೆಲ್ಲಾ ಸಮಯ ಹೊಂದಿಸುವ ವಾಹಿನಿಗಳು ದೇಶದ ಸಾರ್ವಭೌಮತ್ವಕ್ಕೆ ಪೂರಕವಾದ ಸುದ್ದಿ ಅಥವ ವಿಶೇಷ ಕಾರ್ಯಕ್ರಮಕ್ಕೆ ಸಮಯ ಹೊಂದಿಸುವ ಬಗೆಗೆ ಚಿಂತಿಸಬೇಕಾದ ಅಗತ್ಯವಿದೆ ಎಂದು ನುಡಿದರು.


ಸುದ್ದಿ, ಮನರಂಜನೆ, ಕ್ರೀಡೆ ಎಂಬ ಬೇಧವಿಲ್ಲದೆ ಪ್ರತಿಯೊಂದು ವಾಹಿನಿಯೂ ಬೆಳಗ್ಗೆ ೭ರಿಂದ ರಾತ್ರಿ ೧೦ರ ಒಳಗೆ ದಿನಕ್ಕೆ ಕನಿಷ್ಟ ಒಂದು ಗಂಟೆಗಳ ಕಾಲ ದೇಶದ ಉನ್ನತಿಕೆ, ಶ್ರೇಷ್ಟತೆ, ಸಾಧನೆ, ಸಾಹಸಗಳ ಬಗೆಗೆ ಕಾರ್ಯಕ್ರಮ ನೀಡುವುದನ್ನು ಸರ್ಕಾರ ಕಡ್ಡಾಯಗೊಳಿಸಿ ಆದೇಶ ನೀಡಬೇಕಿದೆ. ಕ್ರೀಡೆ, ವಾಣಿಜ್ಯದಂತಹ ವಾಹಿನಿಗಳು ಆಯಾ ಕ್ಷೇತ್ರದಲ್ಲಿನ ದೇಶದ ಸಾಧನೆಯನ್ನು ಕುರಿತಾಗಿಯೂ ಒಂದು ಗಂಟೆಗಳ ಕಾಲ ಕಾರ್ಯಕ್ರಮ ರೂಪುರೇಷೆಗೊಳಿಸುವುದಕ್ಕೆ ಅವಕಾಶ ನೀಡಬಹುದು. ಒಟ್ಟಿನಲ್ಲಿ ಪ್ರತಿಯೊಂದು ವಾಹಿನಿಯೂ ದಿನಕ್ಕೆ ಕನಿಷ್ಟ ಒಂದು ಗಂಟೆಗಳ ಕಾಲ ದೇಶದ ಬಗೆಗೇ ಕಾರ್ಯಕ್ರಮ ನೀಡುವಂತೆ ಸ್ಪಷ್ಟ ನಿದೇಶನ ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.


ಮನಸ್ಸನ್ನು ಕದಡುವ, ಮನಸ್ಸನ್ನು ಕೆರಳಿಸುವ ಸುದ್ದಿ, ಮನರಂಜನೆಗಳ ಮಧ್ಯೆ ಮನಸ್ಸನ್ನು ಬೆಸೆಯುವ, ಮನಸ್ಸಿನಲ್ಲಿ ಹೆಮ್ಮೆಯ ಭಾವ ಮೂಡುವಂತಹ, ನಾಳಿನ ಪ್ರಜೆಗಳ ಮನಸ್ಸಿನಲ್ಲಿ ದೇಶಾಭಿಮಾನ ಉಕ್ಕಿಸುವಂತಹ ಕಾರ್ಯಕ್ರಮಗಳನ್ನು ನೀಡಬೇಕಾದ್ದು ವಾಹಿನಿಗಳ ಜವಾಬ್ದಾರಿಯೂ ಹೌದು. ಆ ಬಗೆಗೆ ನಿರ್ದೇಶಿಸುವುದು ಸರ್ಕಾರದ ಜವಾಬ್ದಾರಿಯೂ ಹೌದು. ಹಾಗಾಗಿ ಯಥಾಶೀಘ್ರ ಎಲ್ಲಾ ವಾಹಿನಿಗಳೂ ದೇಶದ ಉನ್ನತಿಕೆಯ ಬಗೆಗೆ ಕನಿಷ್ಟ ಒಂದು ಗಂಟೆ ಕಾರ್ಯಕ್ರಮ ಬಿತ್ತರಿಸುವ ನೆಲೆಯಲ್ಲಿ ಆದೇಶ ನೀಡುವಂತೆ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಪತ್ರಿಕಾಗೋಷ್ಟಿಯಲ್ಲಿ ವಿದ್ಯಾರ್ಥಿ ಸಂಘದ ತರಗತಿ ಪ್ರತಿನಿಧಿಗಳಾದ ಗುರುಪ್ರಸಾದ್, ಮಾನ್ಯ, ಶರಣ್ಯಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here