![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ತಾಳ್ಮೆ, ಒಗ್ಗಟ್ಟು, ತಂಡದ ಸಾಂಘಿಕ ಪ್ರಯತ್ನ, ಸಾಮಾಜಿಕ ಕೌಶಲ್ಯಗಳು, ಆತ್ಮವಿಶ್ವಾಸ ಮೊದಲಾದ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ನೆಹರುನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಇದೇ ನ.21ರಂದು ವಾರ್ಷಿಕ ಕ್ರೀಡಾಕೂಟವನ್ನು ವಿವೇಕಾನಂದ ಪದವಿ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಪ್ರಸಿದ್ಧ ಮೂಳೆ ತಜ್ಞರಾದ ಡಾ.ಸಚಿನ್ ಶಂಕರ್ ಹಾರಕೆರೆ ಅವರು ಆಗಮಿಸಿ, ಕ್ರೀಡೆಯಿಂದ ಆಗುವ ಶಾರೀರಿಕ ಪ್ರಯೋಜನಗಳನ್ನು ವಿವರಿಸುತ್ತಾ, ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆಯೇ ಅತೀ ಮುಖ್ಯ ಎಂದು ಮಕ್ಕಳನ್ನು ಉದ್ದೇಶಿಸಿ ಪ್ರೋತ್ಸಾಹಕ ನುಡಿಗಳನ್ನಾಡಿದರು.
![](https://puttur.suddinews.com/wp-content/uploads/2023/11/071c286e-1879-4802-8b33-220a9774df37.jpg)
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಆಡಳಿತ ಮಂಡಳಿ ಸದಸ್ಯೆ ಪ್ರೀತಿ ಶೆಣೈ ಅವರು,ಕ್ರೀಡೆಯೆಂಬುದು ಮಕ್ಕಳಾದಿಯಾಗಿ ಎಲ್ಲಾ ವಯಸ್ಸಿನವರೂ ಇಷ್ಟ ಪಡುವ ವಿಷಯ. ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗೆ ಇದು ಸಹಕಾರಿ. ಆದ್ದರಿಂದ, ಉತ್ಸಾಹದಿಂದ ಎಲ್ಲ ಸ್ಪರ್ಧಾಳುಗಳೂ ಪಾಲ್ಗೊಳ್ಳಿರಿ ಎಂಬುದಾಗಿ ಉತ್ತೇಜಕ ನುಡಿಗಳನ್ನಾಡಿದರು.
![](https://puttur.suddinews.com/wp-content/uploads/2023/11/180427e8-6ba8-4e3b-ac62-b69878914069.jpg)
ಶಾಲಾ ಪ್ರಾಂಶುಪಾಲೆ ಸಿಂಧೂ ವಿ ಜಿ ಹಾಗೂ ಉಪಪ್ರಾಂಶುಪಾಲೆ ಹೇಮಾವತಿ. ಎಮ್ ಎಸ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳಾದ ಚಿರಾಗ್ ಡಿ. ಗೌಡ ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು ಹಾಗೂ ರಾಷ್ಟ್ರಮಟ್ಟದ ಕ್ರೀಡಾಪಟು ಆಯುಷ್ ನರೇಂದ್ರ, ತಂಡದ ನಾಯಕರು ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಶಿಕ್ಷಕಿ ಶ್ರೀದೇವಿಯವರು ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಕರಾದ ನವೀನ್ ಕೊಡ್ಯಡ್ಕ ಸ್ವಾಗತಿಸಿ, ದೀಕ್ಷಿತ್ ಅವರು ಧನ್ಯವಾದ ಸಮರ್ಪಿಸಿದರು.
ತರುವಾಯ, ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗಳ ಸಹಕಾರದೊಂದಿಗೆ ದಿನವಿಡೀ ನಡೆದ ವಿವಿಧ ರೀತಿಯ ಕ್ರೀಡೆಗಳಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳೂ ಉತ್ಸಾಹದಿಂದ ಪಾಲ್ಗೊಂಡರು. ಕೊನೆಯಲ್ಲಿ, ರಾಷ್ಟ್ರಗೀತೆಯೊಂದಿಗೆ ವಾರ್ಷಿಕ ಕ್ರೀಡಾಕೂಟವು ಸುಸಂಪನ್ನಗೊಂಡಿತು.