ಭೂ ದಾಖಲೆಗಳ ಡಿಜಿಟಲೀಕರಣಕ್ಕೆ ಅಭಿಯಾನ – ವರ್ಷದೊಳಗೆ ಮುಗಿಸುವ ಉದ್ದೇಶ ಸಚಿವ ಕೃಷ್ಣ ಬೈರೇ ಗೌಡ

0

ದಾಖಲೆಗಳನ್ನು ಇಂಟರ್ನೆಟ್ ಮೂಲಕವೂ ಸಾರ್ವಜನಿಕರು ಪಡೆದುಕೊಳ್ಳಲು ಅವಕಾಶ

ಬಗರ್ ಹುಕುಂ ನಡಾವಳಿ, ಸಾಗುವಳಿ ಚೀಟಿಯೂ ಡಿಜಿಟಲೀಕರಣ

ಆರ್‌ಟಿಸಿ ಆಧಾರ್ ನೋಂದಣಿ

ಬೆಂಗಳೂರು: ಸಾರ್ವಜನಿಕರಿಗೆ ತಮ್ಮ ಜಮೀನುಗಳ ದಾಖಲೆಗಳು ಯಾವುದೇ ಸಮಸ್ಯೆಗಳಿಲ್ಲದೆ ಸಿಗುವಂತೆ ಮಾಡಲು ರೆಕಾರ್ಡ್ ರೂಂಗಳಲ್ಲಿರುವ ಎಲ್ಲ ದಾಖಲೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲು ಅಭಿಯಾನ ಆರಂಭಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.ರೆಕಾರ್ಡ್ ರೂಂನಲ್ಲಿರುವ ಹಳೆಯ ದಾಖಲೆಗಳು ಶಿಥಿಲಾವಸ್ಥೆಯಲ್ಲಿವೆ. ಕೆಲವು ದಾಖಲೆಗಳು ಕಳೆದು ಹೋಗಿವೆ. ಆದುದರಿಂದ, ಎಲ್ಲ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡುವ ಕೆಲಸವನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ ಎಂದವರು ಹೇಳಿದ್ದಾರೆ.

ಜನವರಿ ತಿಂಗಳಿನಿಂದ ದಾಖಲೆಗಳ ಡಿಜಿಟಲೀಕರಣವನ್ನು ಆರಂಭಿಸಿ, ವರ್ಷದ ಅಂತ್ಯಕ್ಕೆ ಎಲ್ಲ ಮುಗಿಸಲು ಉದ್ದೇಶಿಸಲಾಗಿದೆ. ಡಿಜಿಟಲೀಕರಣಗೊಂಡ ಎಲ್ಲ ದಾಖಲೆಗಳನ್ನು ಸಾರ್ವಜನಿಕರಿಗೆ ಸಿಗುವಂತೆ ಮಾಡುತ್ತೇವೆ. ದೃಢೀಕೃತ ಪ್ರತಿಗಳು ಅಗತ್ಯವಿದ್ದಲ್ಲಿ ಮಾತ್ರ ಸಾರ್ವಜನಿಕರು ಸರಕಾರಿ ಕಚೇರಿಗೆ ಬರಬಹುದು.ಇಲ್ಲದಿದ್ದರೆ, ಇಂಟರ್‌ನೆಟ್ ಮೂಲಕ ಅವರು ತಮಗೆ ಬೇಕಾದ ದಾಖಲೆಗಳನ್ನು ಪಡೆದುಕೊಳ್ಳಲು ವ್ಯವಸ್ಥೆ ಮಾಡುತ್ತೇವೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

ದಾಖಲೆಗಳ ಡಿಜಿಟಲೀಕರಣ ಮಾಡಲು ಒಂದು ತಾಲೂಕಿಗೆ ಕನಿಷ್ಠ 50 ಲಕ್ಷ ರೂ.ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಕೆಲವು ಕಡೆ ಈ ಮೊತ್ತ ಕಡಿಮೆಯೂ ಆಗಬಹುದು, ಹೆಚ್ಚಳವೂ ಆಗಬಹುದು.ಈ ಕಾರ್ಯಕ್ಕೆ ಕೇಂದ್ರ ಸರಕಾರದಿಂದಲೂ ಅನುದಾನ ಕೋರಿ ಮನವಿ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಬಗರ್ ಹುಕುಂ ನಡಾವಳಿ ಡಿಜಿಟಲೀಕರಣ: ಬಗರ್ ಹಕುಂ ಸಭೆಯ ನಡಾವಳಿಗಳನ್ನು ಡಿಜಿಟಲೀಕರಣಗೊಳಿಸಲು ತೀರ್ಮಾನಿಸಿದ್ದೇವೆ.ಸಭೆಗೆ ಸದಸ್ಯರ ಹಾಜರಾತಿಯನ್ನು ಬಯೋಮೆಟ್ರಿಕ್ ವ್ಯವಸ್ಥೆಯಡಿ ತರಲಾಗುತ್ತಿದೆ.ಬಗರ್ ಹುಕುಂ ಸಮಿತಿಗಳ ಮೂಲಕ ಭೂಮಿ ಮಂಜೂರು ಆಗುವ ಅರ್ಹರಿಗೆ ಸರಕಾರದಿಂದಲೇ ಭೂಮಿಯನ್ನು ಪೋಡಿ ಮಾಡಿ, ನೋಂದಣಿ ಮಾಡಿಸಿಕೊಡಲಾಗುವುದು ಎಂದು ಕೃಷ್ಣ ಬೈರೇಗೌಡ ಹೇಳಿದರು.
ರಾಜ್ಯದ 50 ವಿಧಾನಸಭೆ ಕ್ಷೇತ್ರಗಳಿಂದ ಬಗರ್ ಹುಕುಂ ಸಮಿತಿ ರಚನೆಗೆ ಪ್ರಸ್ತಾವನೆ ಬಂದಿದೆ.ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ಈ ಸಂಬಂಧ ಅಽಕೃತ ಆದೇಶಗಳನ್ನು ಹೊರಡಿಸಲಾಗುವುದು.ಇನ್ನುಳಿದ ಕ್ಷೇತ್ರಗಳಿಂದ ಅಥವಾ ತಾಲೂಕುಗಳಿಂದ ಬರುವ ಪ್ರಸ್ತಾವನೆಗಳಿಗೆ ಒಂದು ವಾರದೊಳಗೆ ಮಂಜೂರಾತಿ ನೀಡಲಾಗುವುದು ಎಂದು ಅವರು ತಿಳಿಸಿದರು.

ಬಗರ್ ಹುಕುಂ ಸಾಗುವಳಿಗಾಗಿ 9,29,512 ಅರ್ಜಿಗಳು ಬಂದಿವೆ. ಇದರಲ್ಲಿ 54 ಲಕ್ಷ ಎಕರೆ ಭೂಮಿಗೆ ಈ ಅರ್ಜಿಗಳು ಬಂದಿವೆ. ಅಷ್ಟು ಪ್ರಮಾಣದ ಜಮೀನು ಸರಕಾರದ ಬಳಿ ಇಲ್ಲ. ಹಲವಾರು ಮಂದಿ ಅನರ್ಹರು ಅರ್ಜಿಗಳನ್ನು ಹಾಕಿದ್ದಾರೆ. ಎಂಟು ತಿಂಗಳ ಒಳಗಾಗಿ ಬಗರ್ ಹುಕುಂ ಪ್ರಕ್ರಿಯೆಯನ್ನು ಮುಗಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಸಾಗುವಳಿ ಚೀಟಿಯೂ ಗಣಕೀಕೃತ ಮಾಡುತ್ತೇವೆ. ಬಹುತೇಕ ಜನರು ಸಾಗುವಳಿ ಚೀಟಿ ಕಳೆದುಕೊಂಡಿದ್ದಾರೆ. ಕೆಲವು ನಕಲು ಮಾಡಿದ್ದಾರೆ. ಹಾಗಾಗಿ, ಡಿಜಿಟಲ್ ಸಾಗುವಳಿ ಚೀಟಿ ನೀಡಿದರೆ ಅದರಲ್ಲಿ ಭಾವಚಿತ್ರ, ಆಧಾರ್ ಸೇರಿದಂತೆ ಎಲ್ಲ ವಿವರಗಳು ಇರುತ್ತವೆ ಎಂದು ಕೃಷ್ಣ ಬೈರೇ ಗೌಡ ಹೇಳಿದರು.

ಆರ್‌ಟಿಸಿ ಆಧಾರ್ ಜೋಡಣೆ: ಆರ್‌ಟಿಸಿ ಬಳಸಿಕೊಂಡು ಜಮೀನುಗಳನ್ನು ಬೇರೆಯವರಿಗೆ ಮಾರಾಟ ಮಾಡುವುದನ್ನು ತಪ್ಪಿಸಲು ಆರ್‌ಟಿಸಿಯನ್ನು ಭೂ ಮಾಲಕರ ಆಧಾರ್ ಜೊತೆ ಜೋಡಣೆ ಮಾಡಲು ನಿರ್ಧರಿಸಿದ್ದೇವೆ. ಇದರಿಂದ, ನಕಲಿ ನೋಂದಣಿಗಳನ್ನು ತಡೆಯಬಹುದು. ಅಲ್ಲದೆ, ಆಸ್ತಿಗಳ ಮಾರಾಟ, ಖರೀದಿ ಪ್ರಕ್ರಿಯೆಯೂ ಸರಳೀಕೃತವಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

LEAVE A REPLY

Please enter your comment!
Please enter your name here