ಮುಜರಾಯಿಯ ‘ಸಿ’ ಗ್ರೇಡ್ ದೇವಸ್ಥಾನಗಳಲ್ಲಿ ಅನುವಂಶಿಕ ಅರ್ಚಕರ ನೇಮಕಾತಿ-ಅರ್ಚಕರಿಗೆ ವಯಸ್ಸು, ಅನಾರೋಗ್ಯ ಪೀಡಿತರಾದರೆ ಮಕ್ಕಳ ನೇಮಕಾತಿಗೆ ಅವಕಾಶ

0

ಪುತ್ತೂರು: ಮುಜರಾಯಿ ಇಲಾಖೆಯ ‘ಸಿ’ ಗ್ರೇಡ್ ದೇವಾಲಯಗಳಲ್ಲಿ ಪೂಜೆ ಸಲ್ಲಿಸುವ ಅರ್ಚಕರಿಗೆ ವಯಸ್ಸಾಗಿದ್ದರೆ ಅಥವಾ ಅನಾರೋಗ್ಯ ಪೀಡಿತರಾಗಿ ಸೇವೆ ಸಲ್ಲಿಸಲಾದ ಸಂದರ್ಭದಲ್ಲಿ ಅವರ ಮಕ್ಕಳನ್ನೇ ಅ ಹುದ್ದೆಗೆ ನೇಮಕಾತಿ ಮಾಡುವ ಕುರಿತು ರಾಜ್ಯ ಸರ್ಕಾರದ ಮಹತ್ವದ ಆದೇಶ ಹೊರಡಿಸಿದೆ.


ರಾಜ್ಯದಲ್ಲಿ 34 ಸಾವಿರಕ್ಕೂ ಅಧಿಕ ಸಿ ಗ್ರೇಡ್ ದೇವಾಲಯಗಳಿವೆ. ಸಿ ಗ್ರೇಡ್ ದೇವಾಲಯಗಳಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವವರು ನಿಧನರಾದರೆ ಮಾತ್ರ ಅಂಥವರ ಮಕ್ಕಳನ್ನು ಅನುಕಂಪದ ಆಧಾರದ ಮೇಲೆ ಅರ್ಚಕರ ಹುದ್ದೆಗೆ ನೇಮಕ ಮಾಡಲಾಗುತ್ತಿತ್ತು. ಆದರೆ ಇನ್ನು ಮುಂದೆ ಅನಾರೋಗ್ಯಕ್ಕೆ ತುತ್ತಾದರೂ, ಇಲ್ಲವೇ ವಯೋಸಹಜ ಸಮಸ್ಯೆಗಳಿಂದ ಅರ್ಚಕ ವೃತ್ತಿ ಮಾಡಲಾಗದಿದ್ದರೆ ಅಂಥವರ ಮಕ್ಕಳನ್ನು ದೇವಾಲಯಗಳಲ್ಲಿ ನೇಮಕಾತಿ ಮಾಡಿಕೊಳ್ಳಲು ಅವಕಾಶ ನೀಡಿ ಸರ್ಕಾರ ಆದೇಶ ಹೊರಡಿಸಿದೆ.


ಸಿ ವರ್ಗಗಳ ದೇವಾಲಯಗಳಲ್ಲಿ ವಂಶ ಪಾರಂಪರ್ಯ ವಾಗಿ ಪೂಜಾ ಕೈಂಕರ್ಯಗಳನ್ನು ಕಾರ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಅರ್ಚಕರು ನಿಧನರಾದರೆ ಅಥವಾ ವಯಸ್ಸಾಗಿದ್ದರೆ, ತೀವ್ರ ರೀತಿಯ ಅನಾರೋಗ್ಯದ ನಿಮಿತ್ತ ಅರ್ಚಕರಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗದ ಸಂದರ್ಭಗಳಲ್ಲಿ ಅವರ ಅನುವಂಶಿಕ ಹಕ್ಕನ್ನು ಕಾನೂನುಬದ್ಧ ವಾರಸುದಾರರಿಗೆ ವಹಿಸಲು ಅವಕಾಶ ಕಲ್ಪಿಸಲಾಗಿದೆ. ಇದನ್ನು ಆಯಾ ತಾಲೂಕುಗಳ ತಹಸೀಲ್ದಾರ್ ಹಂತದಲ್ಲಿ ವರ್ಗಾವಣೆ ಮಾಡಲು ಅಧಿಕಾರ ನೀಡಿ ಆದೇಶ ಹೊರಡಿಸಲಾಗಿದೆ.


ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ‘ಸಿ’ ವರ್ಗಗಳ ದೇವಾಲಯಗಳ ಅರ್ಚಕರು ಮರಣ ಹೊಂದಿದ ಸಂದರ್ಭದಲ್ಲಿ ಅವರ ಅನುವಂಶಿಕ ಹಕ್ಕನ್ನು ಅವರ ಕಾನೂನುಬದ್ಧ ವಾರಸುದಾರರಿಗೆ ವರ್ಗಾಯಿಸುವ ಬಗ್ಗೆ ತಹಸೀಲ್ದಾರ್ ಅವರಿಗೆ ಅಧಿಕಾರ ನೀಡಲಾಗಿದೆ. ಆದರೆ ಅರ್ಚಕರು ವಯಸ್ಸಾದ ಸಂದರ್ಭದಲ್ಲಿ ಹಾಗೂ ತೀವ್ರ ರೀತಿಯ ಅನಾರೋಗ್ಯದ ನಿಮಿತ್ತ ಅರ್ಚಕರಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗದೆ ಇರುವ ಸಂದರ್ಭಗಳಲ್ಲೂ ಅವರ ಅನುವಂಶಿಕ ಹಕ್ಕನ್ನು ಕಾನೂನುಬದ್ಧ ವಾರಸುದಾರರಿಗೆ ವಹಿಸಲು ಅವಕಾಶ ಕಲ್ಪಿಸುವಂತೆ ಅರ್ಚಕ ಸಂಘ ಕೋರಿತ್ತು. ಸಂಘದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಪರಿಶೀಲಿಸಿ ಈ ನಿರ್ಧಾರಕ್ಕೆ ಮುಂದಾಗಿದೆ.


ಷರತ್ತುಗಳು:
ಅರ್ಚಕರು ವಯಸ್ಸಾದ ಸಂದರ್ಭದಲ್ಲಿ ಅಥವಾ ತೀವ್ರ ರೀತಿ ಅನಾರೋಗ್ಯದ ಸಂಬಂಧ ವೈದ್ಯಕೀಯ ಧೃಢೀಕರಣ ಪಡೆಯತಕ್ಕದ್ದು, ಕಾನೂನುಬದ್ಧ ವಾರಿಸುದಾರರು ಅರ್ಚಕರು ಹುದ್ದೆಗೆ ಕಾಯ್ದೆ ಅಥವಾ ನಿಯಮಗಳಲ್ಲಿ ನಿಗಪಡಿಸಿರುವ ಅರ್ಹತೆ ಹೊಂದಿರಬೇಕು.

LEAVE A REPLY

Please enter your comment!
Please enter your name here