ಯುವಕರು ಜಾಗೃತರಾದರೆ ಭಾರತವನ್ನು ತಡೆಯುವ ಮತ್ತೊಂದು ಶಕ್ತಿಯಿಲ್ಲ: ಸುಬ್ರಹ್ಮಣ್ಯ ನಟ್ಟೋಜ

0

ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ

ಪುತ್ತೂರು: ಸ್ವಾತಂತ್ರ್ಯ ನಂತರದ ಏಳು ದಶಕಗಳ ಬಳಿಕವೂ ನಾವು ಬ್ರಿಟಿಷರ ಮಾನಸಿಕತೆಯಿಂದ ಹೊರಬಂದಿಲ್ಲ. ಅನೇಕರು ತಾವು ಭಾರತೀಯರು ಎಂಬ ಕಲ್ಪನೆಯನ್ನು ಬೆಳೆಸಿಕೊಳ್ಳುತ್ತಿಲ್ಲ. ಹಾಗಾಗಿಯೇ ಉತ್ಕೃಷ್ಟವಾದ ಭಾರತೀಯ ವಿಚಾರಧಾರೆಗಳು, ಪರಂಪರೆಗಳು ಕಣ್ಣ ಮುಂದಿದ್ದರೂ ವಿದೇಶೀ ವಿಚಾರಗಳೆಡೆಗೆ ಆಕರ್ಷಿತರಾಗುತ್ತಿದ್ದೇವೆ. ಯುವಮನಸ್ಸುಗಳಿಗೆ ಒಮ್ಮೆ ನಮ್ಮ ಪಾರಂಪರಿಕವಾದ ಸಂಗತಿಗಳ ಶ್ರೇಷ್ಟತೆ ಅರಿವಾದರೆ ಮತ್ತೆ ಭಾರತವನ್ನು ತಡೆಯುವ ಶಕ್ತಿ ಜಗತ್ತಿನಲ್ಲಿಲ್ಲ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಮಂಗಳವಾರ ವಿದ್ಯಾರ್ಥಿಗಳನ್ನುದ್ದೇಶಿಸಿ ’ರಾಷ್ಟ್ರೀಯ ಚಿಂತನೆಗಳು ಹಾಗೂ ಯುವಶಕ್ತಿ’ ವಿಚಾರವಾಗಿ ಮಾತನಾಡಿದರು.
ನಮ್ಮ ಋಷಿ ಮುನಿಗಳ ಕಾಲದಿಂದಲೂ ಸಾಧನೆಯೆಡೆಗಿನ ಹಾದಿಯ ಬಗೆಗೆ ಮಾರ್ಗದರ್ಶನಗಳು ನಿರಂತರವಾಗಿ ಒದಗಿ ಬಂದಿವೆ. ಭೋಗ ಸುಖಕ್ಕೆ ಆದ್ಯತೆ ನೀಡದೆ ಹಠ ಸಾಧನೆಗೆ ಮಹತ್ವ ನೀಡಲಾಗಿದೆ. ಮನುಷ್ಯನೊಳಗೆ ಒಮ್ಮೆ ಸಾಧಿಸುವ ಹಠ ಮೂಡಿದರೆ ಅದ್ಭುತವಾದದ್ದನ್ನು ಸಾಕಾರಗೊಳಿಸುವುದಕ್ಕೆ ಸಾಧ್ಯ. ನಮ್ಮ ದೇಹವನ್ನು ಸಾಧನಾಪಥಕ್ಕೆ ಹೇಗೆ ಒಗ್ಗಿಸಿಕೊಳ್ಳಬೇಕೆಂಬ ದಾರಿಯನ್ನು ನಮ್ಮ ಹಿರಿಯರೇ ಆಚರಿಸಿ ತೋರಿದ್ದಾರೆ. ಅವರ ಹಾದಿಯನ್ನು ಅನುಸರಿಸುವುದಷ್ಟೇ ನಮ್ಮ ಮುಂದಿರುವ ಜವಾಬ್ದಾರಿ ಎಂದರು.
ಯೋಗ – ಧ್ಯಾನಗಳಂತಹ ಮಹತ್ತರವಾದ ಕೊಡುಗೆಯನ್ನು ನಮ್ಮ ಪರಂಪರೆ ನಮಗೆ ನೀಡಿದೆ. ದಿನವೊಂದಕ್ಕೆ ಅದಕ್ಕಾಗಿ ಮೀಸಲಿಡುವ ಹತ್ತು – ಹದಿನೈದು ನಿಮಿಷಗಳು ನಮ್ಮನ್ನು ತೇಜಸ್ವೀ ಮನುಷ್ಯರನ್ನಾಗಿಸುತ್ತವೆ. ಹಿಂದೂ ಧರ್ಮ ನಮಗೆ ನೀಡಿರುವ ಮಹಾನ್ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸುವ ಕಾರ್ಯ ಆಗಬೇಕಿದೆ. ಯಾರು ಧರ್ಮವನ್ನು ರಕ್ಷಿಸುತ್ತಾನೋ ಅಂಥಹವನನ್ನು ಧರ್ಮವೇ ರಕ್ಷಿಸುತ್ತದೆ ಎಂಬುದು ಬಾಯಿಮಾತಲ್ಲ. ಅದರ ಹಿಂದಿರುವ ಅರ್ಥಗಳನ್ನು ಗ್ರಹಿಸಿ ಕಾರ್ಯತತ್ಪರರಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಗಣೇಶ್ ಪ್ರಸಾದ್ ಎ, ಶಶಿಕಲಾ ವರ್ಕಾಡಿ, ಅನನ್ಯಾ ವಿ, ಜಯಂತಿ ಪಿ, ಸಂಧ್ಯಾ ಎಂ, ಗಿರೀಶ ಭಟ್ ಕುವೆತ್ತಂಡ, ಹರ್ಷಿತ್ ಪಿಂಡಿವನ, ವೀಣಾ ಶಾರದಾ, ಕಚೇರಿ ಉದ್ಯೋಗಿಗಳಾದ ಗಾಯತ್ರೀದೇವಿ ಹಾಗೂ ಪ್ರಮೋದ್ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯ ರಾಕೇಶ್ ಕುಮಾರ್ ಕಮ್ಮಾಜೆ ಸ್ವಾಗತಿಸಿ, ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಕಾಂತ ಗೋರೆ ವಂದಿಸಿದರು.

LEAVE A REPLY

Please enter your comment!
Please enter your name here