![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಇಸ್ರೇಲ್ ನ ಸಾಧನೆ ಅಲ್ಲಿನ ಜನರ ದೇಶಪ್ರೇಮದ ಸಂಕೇತ: ಶ್ರೀಕಾಂತ್ ಶೆಟ್ಟಿ
![](https://puttur.suddinews.com/wp-content/uploads/2024/01/ef7bb939-ee29-4470-afcf-571dc4ce64c7.jpg)
ಪುತ್ತೂರು: ನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಅಲ್ಲಿನ ಡಿಬೇಟ್ ಸೊಸೈಟಿ ವತಿಯಿಂದ “ಇಸ್ರೇಲ್ ಎಂಬ ಜಾಗತಿಕ ಕುತೂಹಲ: ಅಂದು, ಇಂದು, ಮುಂದೆ” ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ಚಿಂತಕ, ವಾಗ್ಮಿ ಹಾಗೂ ಬರಹಗಾರ ಶ್ರೀಕಾಂತ್ ಶೆಟ್ಟಿ ಕಾರ್ಕಳರವರು ಆಗಮಿಸಿದ್ದರು. ಇಸ್ರೇಲ್ ನ ಇತಿಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅವರು, ಯಹೂದಿಗಳ ಕಠಿಣ ಹಾದಿಯನ್ನು, 3000 ವರ್ಷಗಳ ಇತಿಹಾಸದ ದಾಖಲೆಗಳೊಂದಿಗೆ ವಿವರಿಸಿದರು. ಜಗತ್ತಿನ ನಾನಾ ಭಾಗಗಳಲ್ಲಿ ವಾಸವಾಗಿದ್ದ ಅವರು, ಹೇಗೆ ಸ್ವಾತಂತ್ರ ಹೊಂದಿದರು ಮತ್ತು ಜಗತ್ತಿನಲ್ಲಿ ಇಸ್ರೇಲ್ ಬೆಳೆದು ನಿಂತ ರೀತಿಯನ್ನು, ಪಾಲೇಸ್ತಿನ್ ಜೊತೆಗೆನ ವಿವಾದಗಳನ್ನು ವಿವರಿಸಿದರು. ಜೊತೆಗೆ ಇಸ್ರೇಲ್ ಸಾಧನೆಗೆ ಅಲ್ಲಿನ ಜನರ ನಿಷ್ಕಲ್ಮಶ ದೇಶಪ್ರೇಮದ ಸಂಕೇತವಾಗಿದೆ ಎಂದರು. ಜೊತೆಗೆ ಭಾರತದ ಜೊತೆಗಿನ ಇಸ್ರೇಲ್ ಸಂಬಂಧವನ್ನು ತಿಳಿಸಿದ ಅವರು, ಭಾರತೀಯರು ಇಸ್ರೇಲ್ ನವರ ಶಿಸ್ತು ನಮಗೆ ಪಾಠವಾಗಬೇಕಿದೆ ಎಂದರು. ಉಪನ್ಯಾಸಕದ ಬಳಿಕ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಂಚಾಲಕರಾದ ವಿಜಯನಾರಾಯಣ ಕೆ. ಎಂ. ಮಾತನಾಡಿ, ಕಾನೂನು ವಿದ್ಯಾರ್ಥಿಗಳಿಗೆ ಚರ್ಚೆ ಮಾಡುವ ಕೌಶಲ್ಯ, ಒಂದು ವಿಷಯವನ್ನು ಎಲ್ಲಾ ದೃಷ್ಟಿಕೋನಗಳಿಂದ ವಿಮರ್ಶೆಗೊಳಪಡಿಸುವ ಸಾಮರ್ಥ್ಯ ಇರಬೇಕಾಗುತ್ತದೆ. ನಮ್ಮ ಮಹಾವಿದ್ಯಾಲಯದ ಡಿಬೇಟ್ ಸೊಸೈಟಿಯು ವಿದ್ಯಾರ್ಥಿಗಳ ತರ್ಕ ಜ್ಞಾನವನ್ನು ಹೆಚ್ಚು ಮಾಡುವ ಒಂದು ವೇದಿಕೆಯಾಗಿದೆ. ಇದನ್ನು ವಿದ್ಯಾರ್ಥಿಗಳು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ. ರಾಜ್ಯ, ರಾಷ್ಟ್ರ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಟ್ಟದ ವಿಷಯದ ಬಗ್ಗೆಯೂ ಸರಿಯಾದ ತಿಳುವಳಿಕೆ ಇರಬೇಕಾದ ಅನಿವಾರ್ಯತೆ ಇಂದಿನ ವಿದ್ಯಾರ್ಥಿಗಳಿಗಿದೆ ಎಂದರು. ಕಾರ್ಯಕ್ರಮದ ಕುರಿತು ಡಿಬೇಟ್ ಸೊಸೈಟಿಯ ಸಂಯೋಜಕರಾದ ಲಕ್ಷ್ಮೀಕಾಂತ ರೈ ಅನಿಕೂಟೇಲ್ ರವರು ಪ್ರಾಸ್ತವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ವಿಭಾಗದ ನಿರ್ದೇಶಕರಾದ ಡಾ. ಬಿ.ಕೆ. ರವೀಂದ್ರ, ಪ್ರಾಂಶುಪಾಲರಾದ ಶ್ರೀಮತಿ ಅಕ್ಷತಾ ಎ. ಪಿ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಿಬೇಟ್ ಸೊಸೈಟಿಯ ವಿದ್ಯಾರ್ಥಿ ಸಂಯೋಜಕಿ ಸ್ವರ್ಣ ಗೌರಿ ಸ್ವಾಗತಿಸಿ, ಇನ್ನೊರ್ವ ವಿದ್ಯಾರ್ಥಿ ಸಂಯೋಜಕಿ ದೀಕ್ಷಾ ವಂದಿಸಿದರು. ತೃತೀಯ ಬಿ.ಎ.ಎಲ್.ಎಲ್.ಬಿ.ಯ ವಿದ್ಯಾರ್ಥಿನಿ ಪ್ರಿಯಾ ಸಾಯ ಕಾರ್ಯಕ್ರಮ ನಿರೂಪಿಸಿದರು.